ನವದೆಹಲಿ: ಆಪರೇಷನ್ ಬಿಜೆಪಿ ಮೂಲಕ ಕರ್ನಾಟಕದಲ್ಲಿ ಮೈತ್ರಿ ಸರ್ಕಾರವನ್ನು ಉರುಳಿಸುವ ಪ್ರಯತ್ನಗಳು ನಡೆಯುತ್ತಿರುವ ಬೆನ್ನಲ್ಲೇ ಇದೀಗ ಮಧ್ಯಪ್ರದೇಶಲ್ಲೂ ಕಾಂಗ್ರೆಸ್ ಸರ್ಕಾರ ಉರುಳಿಸಿ ಸರ್ಕಾರ ರಚನೆಗೆ ಬಿಜೆಪಿ ಸಿದ್ಧತೆ ನಡೆಸಿದೆ ಎಂಬ ವದಂತಿಗಳು ಹರಡಿವೆ.
ಮುಖ್ಯಮಂತ್ರಿ ಕಮಲ್ನಾಥ್ ಸರ್ಕಾರವನ್ನು ಉರುಳಿಸಿ ಬಿಜೆಪಿ ಸರ್ಕಾರ ಸ್ಥಾಪಿಸಲು ಸಿದ್ಧತೆ ನಡೆಸಿದೆ ಎಂಬ ಆತಂಕ ಕಾಂಗ್ರೆಸ್ ಪಾಳಯದಲ್ಲಿ ದಿಗಿಲು ಹುಟ್ಟಿಸಿದೆ. ಕರ್ನಾಟಕದಲ್ಲಿ ಸರ್ಕಾರ ಉರುಳಿಸುವ ಬಿಜೆಪಿ ಯತ್ನ ವಿಫಲವಾಗುತ್ತದೆ ಎಂದು ಕಾಂಗ್ರೆಸ್ ಹೇಳಿಕೊಳ್ಳುತ್ತಿದ್ದರೂ, ಬಿಜೆಪಿ ತನ್ನ ಪಟ್ಟು ಸಡಲಿಸದು ಎಂಬುದು ಕಾಂಗ್ರೆಸ್ ನಾಯಕರಿಗೆ ಮನವರಿಕೆಯಾಗಿದೆ. ಇನ್ನು ಭೋಪಾಲದಲ್ಲಿ ಸರ್ಕಾರವನ್ನು ಉರುಳಿಸಲು ಬಿಜೆಪಿ ಸದ್ದಿಲ್ಲದೆ ಹವಣಿಸುತ್ತಿದೆ ಎಂದು ಹಿರಿಯ ಕಾಂಗ್ರೆಸ್ ನಾಯಕರೊಬ್ಬರು ಹೇಳಿದ್ದಾರೆ.
ಸುದೀರ್ಘ 15 ವರ್ಷಗಳ ಬಳಿಕ ಮಧ್ಯಪ್ರದೇಶದಲ್ಲಿ ಕಾಂಗ್ರೆಸ್ ಸರ್ಕಾರ ರಚಿಸಿದ್ದು 230 ಸದಸ್ಯರ ವಿಧಾನಸಭೆಯಲ್ಲಿ ಬಿಜೆಪಿ 109 ಸ್ಥಾನಗಳನ್ನು ಗಳಿಸಿದೆ. ಬಿಜೆಪಿಗೆ ಬಹುಮತಕ್ಕೆ ಕೇವಲ 7 ಸೀಟುಗಳ ಕೊರತೆ ಉಂಟಾಗಿತ್ತು. ಇನ್ನು ಕಾಂಗ್ರೆಸ್ ಗೂ ಎರಡು ಸ್ಥಾನಗಳ ಕೊರತೆಯಿತ್ತು. ಸದ್ಯ ನಾಲ್ವರು ಪಕ್ಷೇತರ ಶಾಸಕರು ಹಾಗೂ ಇಬ್ಬರು ಬಿಎಸ್ಪಿ ಶಾಸಕರ ಬೆಂಬಲದಿಂದ ಕಾಂಗ್ರೆಸ್ ಸರ್ಕಾರ ರಚಿಸಿದೆ.