ಬೆಂಗಳೂರು: ಕಾಂಗ್ರೆಸ್ ನ ಇಬ್ಬರು ಶಾಸಕರ ನಡುವೆ ಮಾರಣಾಂತಿಕ ಮಾರಾಮಾರಿ ನಡೆದಿರುವುದು ರಾಷ್ಟ್ರ ಮಟ್ಟದ ಸುದ್ದಿಯಾಗಿದ್ದು ರಾಜ್ಯ ರಾಜಕಾರಣದ ಬಗ್ಗೆ ದೇಶವ್ಯಾಪಿ ಚರ್ಚೆ ನಡೆಯುತ್ತಿದೆ.
ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿರುವ ಶಾಸಕ ಆನಂದ್ ಅವರನ್ನು ಭೇಟಿ ಮಾಡಲು ಅಪೋಲೋ ಆಸ್ಪತ್ರೆಗೆ ಬಂದಿದ್ದ ಸಚಿವ ಜಮೀರ್ ಅಹ್ಮದ್ ಖಾನ್, ಶಾಸಕರ ನಡುವಿನ ಮಾರಾಮಾರಿಯನ್ನು ಫ್ರೆಂಡ್ಲಿ ಫೈಟ್ ಎಂದು ಹೇಳಿದ್ದಾರೆ.
ರೆಸಾರ್ಟ್ ನಲ್ಲಿ ಶಾಸಕರ ನಡುವೆ ಫ್ರೆಂಡ್ಲಿ ಫೈಟ್ ನಡೆದಿದೆ. ಎಲ್ಲವೂ ಸರಿಯಾಗಿದೆ, ಆಸ್ಪತ್ರೆಯಲ್ಲಿ ಆನಂದ್ ಸಿಂಗ್ ವಿಶ್ರಾಂತಿ ಪಡೆಯುತ್ತಿದ್ದಾರೆ ಎಂದು ಜಮೀರ್ ಅಹ್ಮದ್ ಖಾನ್ ಮಾಧ್ಯಮಗಳಿಗೆ ತಿಳಿಸಿದ್ದಾರೆ.
ಶಾಸಕರ ನಡುವಿನ ಮಾರಾಮಾರಿ ಬಗ್ಗೆ ಬಿಜೆಪಿ ಸಹ ಟ್ವೀಟ್ ಮಾಡಿದ್ದು, ಕುಮಾರಸ್ವಾಮಿ ನೇತೃತ್ವದಲ್ಲಿ ಕಾಂಗ್ರೆಸ್ ಶಾಸಕರಿಗೆ ಜೀವ ಭಯ ಕಾಡುತ್ತಿದೆ. ಸಿದ್ದರಾಮಯ್ಯ ಅವರು ಸಾಂವಿಧಾನ ಮೌಲ್ಯಗಳ ಬಗ್ಗೆ ಎಲ್ಲರಿಗೂ ಪಾಠ ಮಾಡುತ್ತಾರೆ. ಆನಂದ್ ಸಿಂಗ್ ಅವರ ಮೇಲೆ ಹಲ್ಲೆ ನಡೆಸಿರುವ ಶಾಸಕನನ್ನು ತಕ್ಷಣವೇ ಅಮಾನತುಗೊಳಿಸಬೇಕೆಂದು ಬಿಜೆಪಿ ಆಗ್ರಹಿಸಿದೆ.