ದೇಶ

ಹೇಳಿಕೆ ಹಿಂದಕ್ಕೆ ಪಡೆಯಿರಿ ಇಲ್ಲವೇ ಕ್ರಿಮಿನಲ್ ಮಾನನಷ್ಟ ಮೊಕದ್ದಮೆ ಎದುರಿಸಿ- ಅಮಿತ್ ಶಾಗೆ ಟಿಎಂಸಿ ಎಚ್ಚರಿಕೆ

Nagaraja AB

ಕೊಲ್ಕತ್ತಾ: ಟಿಎಂಸಿ ನಾಯಕರು ಸಿಂಡಿಕೇಟ್ ತೆರಿಗೆ ಸಂಗ್ರಹಿಸುತ್ತಿದ್ದಾರೆ ಎಂದು ಟೀಕಿಸಿರುವ  ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ, ತಮ್ಮ ಹೇಳಿಕೆಯನ್ನು ಹಿಂದಕ್ಕೆ ಪಡೆದುಕೊಳ್ಳಬೇಕು, ಇಲ್ಲದಿದ್ದರೆ ಮಾನನಷ್ಟ ಮೊಕದ್ದಮೆ ಹೂಡಲಾಗುವುದು ಎಂದು ತೃಣಮೂಲ ಕಾಂಗ್ರೆಸ್ ಎಚ್ಚರಿಕೆ ನೀಡಿದೆ.

ಪಶ್ಚಿಮ  ಬಂಗಾಳದಲ್ಲಿ ನಡೆದ ಗಣತಂತ್ರ ಬಚಾವೋ ಯಾತ್ರೆ ಸಂದರ್ಭದಲ್ಲಿ ಮಾತನಾಡಿದ ಅಮಿತ್ ಶಾ, ಒಂದು ವೇಳೆ ಬಿಜೆಪಿ ಅಧಿಕಾರಕ್ಕೆ ಬಂದರೆ, ರಾಜ್ಯದ ಜನರು ಸಿಂಡಿಕೇಟ್  ತೆರಿಗೆಯನ್ನು ಕೊಡುವಂತಿಲ್ಲ ಎಂದು ಖಚಿತ ಭರವಸೆ ನೀಡುವುದಾಗಿ ಹೇಳಿದ್ದರು.

ಬಂಗಾಳಕ್ಕೆ ಒಳನುಸುಳುವವರು ಹಾಗೂ ಗೋ ಕಳ್ಳತನವನ್ನು   ಬಿಜೆಪಿ ತಡೆಗಟ್ಟಲಿದೆ. ಬಂಗಾಳದಲ್ಲಿ ಕಮಲ ಅರಳಿದರೆ ಟಿಎಂಸಿ ನಾಯಕರಿಗೆ ಸಿಂಡಿಕೇಟ್  ತೆರಿಗೆ  ಜನತೆ ನೀಡುವುದು ತಪ್ಪಲಿದೆ ಎಂದು ಟೀಕಿಸಿದ್ದರು.

ಈ ಬಗ್ಗೆ ಪ್ರತಿಕ್ರಿಯಿಸಿರುವ ಟಿಎಂಸಿ ಮುಖ್ಯ ವಕ್ತಾರ ಡೆರೆಕ್ ಒ ಬ್ರೈಯಿನ್, ಅಮಿಶ್  ಶಾ  ಬಂಗಾಳ ಉತ್ತರ ಪ್ರದೇಶ ಅಲ್ಲ. ಅಲ್ಲಿಯಂತೆ ಇಲ್ಲಿ ದ್ವೇಷ, ಕೋಮು ಭಾವನೆ ಬಿತ್ತಲು ಸಾಧ್ಯವಿಲ್ಲ. ಇಲ್ಲಿ ಶಾಂತಿ ಮತ್ತು ಸೌಹಾರ್ದತೆ ನೆಲೆಸಿದೆ. ನಿಮ್ಮ ಆರೋಪವನ್ನು ಹಿಂದಕ್ಕೆ ಪಡೆಯದಿದ್ದರೆ ಮಾನನಷ್ಟ ಮೊಕದ್ದಮೆ ಹೂಡಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.
 
ಬಿಜೆಪಿ ನಾಯಕರು ಆರೋಪಗಳು ಕೀಳು ಅಭಿರುಚಿಯಿಂದ ಕೂಡಿರುತ್ತವೆ ಎಂದು ಅವರು ಹೇಳಿದ್ದು ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಪಶ್ಚಿಮ ಬಂಗಾಳದಲ್ಲಿ ಶೂನ್ಯ ಸಂಪಾದನೆ ಮಾಡಲಿದೆ ಎಂದು ಅವರು ಹೇಳಿದ್ದಾರೆ.

SCROLL FOR NEXT