ಮುಂಬೈ: ಸಕ್ರಿಯ ರಾಜಕೀಯಕ್ಕೆ ಪ್ರವೇಶ ಮಾಡಿರುವ ಪ್ರಿಯಾಂಕಾ ವಾದ್ರಾ ತಮ್ಮ ಜವಾಬ್ದಾರಿ ಅರಿತು ಮುನ್ನಡೆದರೆ ಖಂಡಿತಾ ಅವರೇ ಪಕ್ಷದ ಕ್ವೀನ್ ಆಗಲಿದ್ದಾರೆ ಎಂದು ಶಿವಸೇನೆ ಹೇಳಿದೆ.
ಈ ಬಗ್ಗೆ ತನ್ನ ಮುಖವಾಣಿ ಸಾಮ್ನಾದಲ್ಲಿ ಲೇಖನ ಬರೆದಿರುವ ಶಿವಸೇನೆ, ಸಕ್ರಿಯ ರಾಜಕಾರಣಕ್ಕೆ ಪ್ರಿಯಾಂಕಾ ಆಗಮನದ ಮೂಲಕ ಕಾಂಗ್ರೆಸ್ ಮತ್ತು ರಾಹುಲ್ ಗಾಂಧಿ ಆನೆ ಬಲ ಬಂದಂತಾಗಿದೆ ಎಂದು ಅಭಿಪ್ರಾಯಪಟ್ಟಿದೆ. ಅಂತೆಯೇ ಪ್ರಿಯಾಂಕರನ್ನು ಸಕ್ರಿಯ ರಾಜಕಾರಣಕ್ಕೆ ತರುವ ಮೂಲಕ ಮುಂಬರುವ ಲೋಕಸಭಾ ಚುನಾವಣೆಯ ಗೆಲುವಿಗಾಗಿ ಬೇಕಾದ ಎಲ್ಲರೀತಿಯ ತಂತ್ರಗಾರಿಕೆಯನ್ನೂ ಮಾಡುತ್ತಿದ್ದಾರೆ. ರಾಜಕೀಯದಲ್ಲಿ ರಾಹುಲ್ ಪಕ್ವವಾಗುತ್ತಿದ್ದು, ಕಾಂಗ್ರೆಸ್ ಪಕ್ಷದ ಅಧ್ಯಕ್ಷರಾಗಿ ರಾಹುಲ್ ಉತ್ತಮವಾಗಿ ಪಕ್ಷವನ್ನು ಮುನ್ನಡೆಸುತ್ತಿದ್ದಾರೆ ಎಂದು ಶಿವಸೇನೆ ಹೇಳಿದೆ.
ಅಂತೆಯೇ ರಾಫೆಲ್ ಹಗರಣಕ್ಕೆ ಸಂಬಂಧಿಸಿದಂತೆ ರಾಹುಲ್ ಗಾಂಧಿ ಯುಪಿಎ ಸರ್ಕಾರಕ್ಕೆ ಪ್ರಬಲ ಪೈಪೋಟಿ ನೀಡಿದ್ದರು. ಇನ್ನು ಉತ್ತರ ಪ್ರದೇಶದಲ್ಲಿ ಎಸ್ ಪಿ ಮತ್ತು ಬಿಎಸ್ ಪಿ ಮೈತ್ರಿ ಮಾಡಿಕೊಂಡು ಕಾಂಗ್ರೆಸ್ ಪಕ್ಷಕ್ಕೆ ಯಾವುದೇ ರೀತಿಯ ಸ್ಥಾನದ ಅವಕಾಶ ನೀಡದ ಹೊರತಾಗಿಯೂ ಉತ್ತರ ಪ್ರದೇಶದ ಎಲ್ಲ ಕ್ಷೇತ್ರಗಳಲ್ಲೂ ಕಾಂಗ್ರೆಸ್ ಅಭ್ಯರ್ಥಿಗಳನ್ನು ನಿಯೋಜಿಸುತ್ತೇವೆ ಎಂದು ಹೇಳುವ ಮೂಲಕ ಸ್ಪರ್ಧೆಗೆ ತಾವೂ ಸಿದ್ಧ ಎಂಬ ರಾಹುಲ್ ಗಾಂಧಿ ಅವರ ಹೇಳಿಕೆ ಅವರ ರಾಜಕೀಯ ಪಕ್ವತೆಗೆ ನಿದರ್ಶನವಾಗಿದೆ. ಅಂತೆಯೇ ಅಗತ್ಯ ಮತ್ತು ಅನಿವಾರ್ಯತೆ ಎದುರಾದರೆ ಚುನಾವಣೆಯಲ್ಲಿ ಎಸ್ ಬಿ ಮತ್ತು ಬಿಎಸ್ ಪಿ ಪಕ್ಷಗಳಿಗೆ ಬೆಂಬಲವಾಗಿ ನಿಲ್ಲುತ್ತೇವೆ ಎಂದು ಹೇಳುವ ಮೂಲಕ ರಾಹುಲ್ ಗಾಂಧಿ ಮೈತ್ರಿಯ ಬಾಗಿಲನ್ನೂ ತೆರೆದಿರಿಸಿದ್ದಾರೆ. ಅದೇ ಹೊತ್ತಿನಲ್ಲಿ ಪ್ರಿಯಾಂಕರನ್ನು ರಾಜಕೀಯ ಸೆಳೆದಿರುವುದು ಕಾಂಗ್ರೆಸ್ ಪಕ್ಷಕ್ಕೆ ಸಕಾರಾತ್ಮಕ ಅಂಶವಾಗಿ ಬದಲಾಗಿದೆ ಎಂದು ಶಿವಸೇನೆ ಹೇಳಿದೆ.
ಇದೇ ವೇಳೆ ತನ್ನ ಮಿತ್ರ ಪಕ್ಷ ಬಿಜೆಪಿಯನ್ನು ಕುಟುಕಿರುವ ಶಿವಸೇನೆ, ದೇಶದ ಜನರೇ ಗಾಂಧಿ ಕುಟುಂಬವನ್ನು ಒಪ್ಪಿಕೊಂಡಿರುವಾಗ ಕೆಲವರಿಗೆ ಮಾತ್ರ ಇನ್ನೂ ಹೊಟ್ಟೆಯಲ್ಲಿ ಉರಿ ಕಡಿಮೆಯಾಗಿಲ್ಲ ಎಂದು ಹೇಳುವ ಮೂಲಕ ಬಿಜೆಪಿ ಮುಖಂಡರ ಕಾಲೆಳೆದಿದೆ.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos