ನವದೆಹಲಿ: ಜನರಿಗೆ ಭರವಸೆ ನೀಡಿ, ಆ ಕೆಲಸ ಈ ಕೆಲಸ ಎಂಬ ಕನಸು ಹುಟ್ಟಿಸಿ ಬಳಿಕ ಅದನ್ನು ಈಡೇರಿಸದ ನಾಯಕರನ್ನು ಸಾರ್ವಜನಿಕರೇ ಸೋಲಿಸುತ್ತಾರೆ ಎಂದು ಹೇಳಿದ್ದ ನಿತಿನ್ ಗಡ್ಕರಿ ನೇರವಾಗಿ ಪ್ರಧಾನಿ ಮೋದಿ ವಿರುದ್ಧವೇ ವಾಗ್ದಾಳಿ ನಡೆಸಿದ್ದಾರೆ ಎಂದು ಕಾಂಗ್ರೆಸ್ ಟೀಕಿಸಿದೆ.
ಕಾರ್ಯಕ್ರಮವೊಂದರಲ್ಲಿ ಮಾತನಾಡಿರುವ ಗಡ್ಕರಿ, ಸಾಮಾನ್ಯವಾಗಿ ಪ್ರಜೆಗಳು ಭರವಸೆ ನೀಡುವ, ಹೊಸ ಜೀವನದ ಕನಸುಗಳನ್ನು ಬಿತ್ತುವ ನಾಯಕನನ್ನು ಮೆಚ್ಚಿಕೊಳ್ಳುತ್ತಾರೆ. ಆದರೆ ಆ ನಾಯಕ ನೀಡಿದ ಭರವಸೆ ಈಡೇರದಿದ್ದರೆ ಅವರ ಕನಸುಗಳು ಭಗ್ನವಾಗುತ್ತದೆ. ಹೀಗಾಗಿ ಸುಳ್ಳು ಭರವಸೆ ನೀಡಿ ಅದನ್ನು ಈಡೇರಿಸದ ನಾಯಕರನ್ನು ಸಾರ್ವಜನಿಕರು ಸೋಲಿಸುತ್ತಾರೆ ಎಂದು ಹೇಳಿದ್ದರು.
ಇದೀಗ ಗಡ್ಕರಿ ಅವರ ಈ ಹೇಳಿಕೆ ರಾಷ್ಟ್ರ ರಾಜಕೀಯದಲ್ಲಿ ಹೊಸದೊಂದು ಬಿರುಗಾಳಿಯನ್ನೇ ಎಬ್ಬಿಸಿದ್ದು, ಪ್ರಧಾನಿ ಹುದ್ದೆಯ ಮೇಲೆ ಕಣ್ಣಿರಿಸಿರುವ ಗಡ್ಕರಿ ನೇರವಾಗಿ ನರೇಂದ್ರ ಮೋದಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ ಎಂದು ಕಾಂಗ್ರೆಸ್ ಹೇಳಿದೆ. ಅಲ್ಲದೆ ಪ್ರಧಾನಿ ಮೋದಿ ಅವರೇ ನಿಮ್ಮ ವಿರುದ್ಧ ಧನಿ ಎತ್ತಬಲ್ಲ ಮಂದಿ ಆಗಮಿಸುತ್ತಿದ್ದಾರೆ ಎಂದು ಮಧ್ಯ ಪ್ರದೇಶ ಕಾಂಗ್ರೆಸ್ ಸಚಿವರು ಹೇಳಿದ್ದಾರೆ.
ಇದೇ ಮಾತನ್ನು ಮುಂದುವರೆಸಿರುವ ಎಂಐಎಂ ಮುಖ್ಯಸ್ಥ ಅಸಾದುದ್ದೀನ್ ಒವೈಸಿ, ಗಡ್ಕರಿ ಹೇಳಿಕೆ ಮೋದಿ ಸರ್ಕಾರಕ್ಕೆ ಹಿಡಿದ ಕನ್ನಡಿಯಾಗಿದ್ದು, ಸೂಕ್ಷ್ಮ ರೀತಿಯದ್ದಾಗಿದೆ ಎಂದು ಹೇಳಿದ್ದಾರೆ.
ಒಟ್ಟಾರೆ ನಿತಿನ್ ಗಡ್ಕರಿ ಹೇಳಿಕೆ ಇದೀಗ ರಾಷ್ಟ್ರ ರಾಜಕಾರಣದಲ್ಲಿ ಹೊಸ ಸಂಚಲನ ಸೃಷ್ಟಿ ಮಾಡಿದೆ.