ದುಬೈ: ಬಹುಕೋಟಿ ವಿವಿಐಪಿ ಚಾಪರ್ ಖರೀದಿ ಹಗರಣಕ್ಕೆ ಸಂಬಂಧಿಸಿದಂತೆ ಮತ್ತಿಬ್ಬರು ಆರೋಪಿಗಳನ್ನು ಯುಎಇ ಸರ್ಕಾರ ಭಾರತಕ್ಕೆ ಗಡಿಪಾರು ಮಾಡಿದೆ.
ಮೂಲಗಳ ಪ್ರಕಾರ ಅಗಸ್ಟಾ ವೆಸ್ಟ್ ಲ್ಯಾಂಡ್ ಹಗರಣದ ಮಧ್ಯವರ್ತಿ, ಆರೋಪಿ ಕ್ರಿಶ್ಚಿಯನ್ ಮಿಶೆಲ್ ನನ್ನು ದುಬೈನಿಂದ ಗಡೀಪಾರು ಮಾಡಿದ ಸುಮಾರು ಎರಡು ತಿಂಗಳ ಬಳಿಕ ಬುಧವಾರ ಮತ್ತಿಬ್ಬರು ಆರೋಪಿಗಳನ್ನು ಯುಎಇದಿಂದ ಭಾರತಕ್ಕೆ ಕರೆತರಲಾಗಿದೆ. ಹಗರಣದ ಪ್ರಮುಖ ಆರೋಪಿಗಳು ಎನ್ನಲಾದ ದುಬೈ ಮೂಲದ ಅಕೌಂಟೆಂಟ್ ರಾಜೀವ್ ಸಕ್ಸೇನಾ ಹಾಗೂ ದೀಪಕ್ ತಲ್ವಾರ್ ಅವರನ್ನು ಯುಎಇ ಭಾರತಕ್ಕೆ ಹಸ್ತಾಂತರಿಸಿದ್ದು ಅವರನ್ನು ವಿಶೇಷ ವಿಮಾನದ ಮೂಲಕ ಜಾರಿನಿರ್ದೇಶನಾಲಯದ ಅಧಿಕಾರಿಗಳು, ವಿದೇಶಾಂಗ ಸಚಿವಾಲಯದ ಅಧಿಕಾರಿಗಳು ಹಾಗೂ ರಿಸರ್ಚ್ ಆ್ಯಂಡ್ ಅನಲಿಸಿಸ್ ದಳದ ಅಧಿಕಾರಿಗಳು ಕರೆದುಕೊಂಡು ಬಂದಿದ್ದಾರೆ ಎಂದು ತಿಳಿದುಬಂದಿದೆ.
ದುಬೈನಲ್ಲಿ ವಾಸವಾಗಿದ್ದ ಅಕೌಂಟೆಂಟ್ ರಾಜೀವ್ ಗೆ ಅಗಸ್ಟಾ ವೆಸ್ಟ್ ಲ್ಯಾಂಡ್ ಪ್ರಕರಣಕ್ಕೆ ಸಂಬಂಧಪಟ್ಟಂತೆ ಜಾರಿ ನಿರ್ದೇಶನಾಲಯ ಹಲವು ಬಾರಿ ಅವರಿಗೆ ಸಮನ್ಸ್ ನೀಡಿತ್ತು. ಆದರೆ ಅವರು ತನಿಖೆಗೆ ಸಹಕರಿಸಿರಲಿಲ್ಲ. ಈಗ ರಾಜೀವ್ ಸಕ್ಸೇನಾ ವಿರುದ್ಧ ಜಾಮೀನು ರಹಿತ ವಾರಂಟ್ ಜಾರಿ ಮಾಡಿದ್ದು ಬುಧವಾರ ದುಬೈನಿಂದ ಕರೆದುಕೊಂಡು ಬರಲಾಗಿದೆ.
ರಾಜೀವ್ ಸಕ್ಸೇನಾ ಹಾಗೂ ಅವರ ಪತ್ನಿ ಶಿವಾನಿ ಸಕ್ಸೇನಾ ಮತ್ತು ಅವರ ದುಬೈ ಮೂಲದ ಸಂಸ್ಥೆ ಶೇರುಗಳ ವಿಚಾರದಲ್ಲಿ ಅಕ್ರಮ ನಡೆಸಿದ್ದು ಶಿವಾನಿ ಸಕ್ಸೇನಾ ಅವರನ್ನು 2017ರಲ್ಲಿ ಚೆನ್ನೈ ಏರ್ ಪೋರ್ಟ್ನಲ್ಲಿ ಬಂಧಿಸಲಾಗಿತ್ತು. ಸದ್ಯ ಅವರು ಜಾಮೀನು ತೆಗೆದುಕೊಂಡು ಬಿಡುಗಡೆಯಾಗಿದ್ದಾರೆ ಎಂದು ಮಾಧ್ಯಮವೊಂದು ವರದಿ ಮಾಡಿದೆ.
ಇನ್ನು ಯುಪಿಎ ಆಡಳಿತವಿದ್ದಾಗ ದೀಪಕ್ ತಲ್ವಾರ್ ಅವರ ಆದಾಯ 1000ಕೋಟಿ ರೂಪಾಯಿ ಆಗಿತ್ತು. ಅದನ್ನು ಅವರು ಮರೆಮಾಚಿದ್ದರು. ಈ ಬಗ್ಗೆ ಕೆಲವು ತನಿಖಾ ದಳಗಳು ಪರಿಶೀಲನೆಗೆ ಪ್ರಾರಂಭಿಸಿದಾಗ ಅವರು ದುಬೈಗೆ ಪಲಾಯನ ಮಾಡಿದ್ದರು ಎಂದು ತನಿಖಾಧಿಕಾರಿಗಳು ಮಾಹಿತಿ ನೀಡಿದ್ದಾರೆ.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos