ನವದೆಹಲಿ: ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ರಾಹುಲ್ ಗಾಂಧಿ ರಾಜೀನಾಮೆ ನೀಡಿದ ಕೂಡಲೇ ಅವರ ಬದಲಿ ಯಾರು ಎಂಬ ಗೊಂದಲ ಪಕ್ಷದಲ್ಲಿ ಮನೆಮಾಡಿದೆ. ಪಕ್ಷದ ಚುಕ್ಕಾಣಿಯನ್ನು ಎರಡನೇ ತಲೆಮಾರಿನ ನಾಯಕರಿಗೆ ವಹಿಸುತ್ತಾರೆಯೇ ಎಂಬ ಚರ್ಚೆ, ಮಾತುಕತೆಗಳು ಕೇಳಿಬರುತ್ತಿವೆ.
ಕಳೆದ ಲೋಕಸಭೆ ಚುನಾವಣೆಯಲ್ಲಿ ಪಕ್ಷದ ಹೀನಾಯ ಸೋಲಿನ ನಂತರ ಅಧ್ಯಕ್ಷ ಸ್ಥಾನಕ್ಕೆ ರಾಹುಲ್ ಗಾಂಧಿ ರಾಜೀನಾಮೆ ನೀಡಿದ ನಂತರ ಹಿರಿಯ ನಾಯಕರಾದ ಸುಶಿಲ್ ಕುಮಾರ್ ಶಿಂಧೆ, ಮಲ್ಲಿಕಾರ್ಜುನ ಖರ್ಗೆ, ಜ್ಯೋತಿರಾಧಿತ್ಯ ಸಿಂಧ್ಯ, ಸಚಿನ್ ಪೈಲಟ್ ಅವರ ಹೆಸರುಗಳು ಹೆಚ್ಚಾಗಿ ಕೇಳಿಬಂದಿದ್ದವು. ಇವೆಲ್ಲದರ ನಡುವೆ ಇದೀಗ ಪಕ್ಷದ ಮೂಲಗಳಿಂದ ಬಂದಿರುವ ಮಾಹಿತಿ ಪ್ರಕಾರ 59 ವರ್ಷದ ದಲಿತ ನಾಯಕ ಮುಕುಲ್ ವಾಸ್ಲಿಕ್ ಅವರ ಹೆಸರು ಕೇಳಿಬರುತ್ತಿದೆ.
ಕಾಂಗ್ರೆಸ್ ಕಾರ್ಯಕಾರಿಣಿ ಸಮಿತಿ ಸಭೆ ಮುಂದಿನ ವಾರ ದೆಹಲಿಯಲ್ಲಿ ನಡೆಯಲಿದ್ದು ಅಲ್ಲಿ ಗಾಂಧಿಯೇತರ ನಾಯಕರನ್ನು ಅಧ್ಯಕ್ಷರನ್ನಾಗಿ ಆಯ್ಕೆ ಮಾಡುವ ಸಾಧ್ಯತೆಯಿದೆ.
ಪಕ್ಷ ಅಧ್ಯಕ್ಷ ಸ್ಥಾನಕ್ಕೆ ದಲಿತ ನಾಯಕನನ್ನು ಹುಡುಕುತಿದ್ದು ಮುಕುಲ್ ವಾಸ್ಲಿಕ್ ಸ್ಥಾನಕ್ಕೆ ತಕ್ಕ ವ್ಯಕ್ತಿ, ರಾಹುಲ್ ಗಾಂಧಿಯವರ ಬೆಂಬಲ ಕೂಡ ಅವರಿಗಿದೆ ಎಂದು ಪಕ್ಷದ ನಾಯಕರೊಬ್ಬರು ಹೇಳುತ್ತಾರೆ. ಕಾರ್ಯಕಾರಿಣಿ ಸಭೆಯಲ್ಲಿ ಅಧ್ಯಕ್ಷ ಸ್ಥಾನಕ್ಕೆ 4 ಹೆಸರುಗಳನ್ನು ಸದಸ್ಯರು ಸೂಚಿಸಲಿದ್ದಾರೆ.
ಕರಣ್ ಸಿಂಗ್, ಅಮರಿಂದರ್ ಸಿಂಗ್ ಮತ್ತು ಜನಾರ್ದನ ದ್ವಿವೇದಿಯಂತಹ ಹಿರಿಯ ನಾಯಕರು ಯುವ, ಉತ್ಸಾಹಿ ನಾಯಕರಿಗೆ ಪಕ್ಷದ ಅಧ್ಯಕ್ಷ ಸ್ಥಾನ ನೀಡಿ ಎಂದು ಒತ್ತಾಯಿಸುತ್ತಿದ್ದರೆ ಹೆಚ್ಚಿನ ಸದಸ್ಯರ ಒಲವು ವಾಸ್ಲಿಕ್ ಕಡೆಗೆ ಇರುವ ಸಾಧ್ಯತೆಯಿದೆ.
ಪಕ್ಷವನ್ನು ಪುನರುಜ್ಜೀವನಗೊಳಿಸುವ ಪರಿಸ್ಥಿತಿ ಇದ್ದು, ಅಂತಹ ಸಾಮರ್ಥ್ಯವನ್ನು ಹೊಂದಿರುವವರು ಅಧ್ಯಕ್ಷರಾಗಬೇಕು. ತಾವು ಅಧ್ಯಕ್ಷ ಹುದ್ದೆಯ ರೇಸ್ ನಲ್ಲಿಲ್ಲ ಎಂದು ಜ್ಯೋತಿರಾಧಿತ್ಯ ಸಿಂಧ್ಯ ನಿನ್ನೆ ತಿಳಿಸಿದ್ದಾರೆ.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos