ದೇಶ

ತೆಲಂಗಾಣ: ಬಾಲಕಿ ವಿರುದ್ಧ ಸೋಲು, 8ನೇ ತರಗತಿ ವಿದ್ಯಾರ್ಥಿ ಬಲಿ ಪಡೆದ ಶಾಲಾ ಚುನಾವಣೆ!

Lingaraj Badiger
ನಲಗೊಂಡ: 8ನೇ ತರಗತಿಯ ವಿದ್ಯಾರ್ಥಿಯೊಬ್ಬ ತನ್ನ ಶಾಲೆಯಲ್ಲಿ ತಾನು ನಾಯಕನಾಗಿ ಆಯ್ಕೆಯಾಗಲಿಲ್ಲ ಎಂಬ ಕಾರಣಕ್ಕೆ ಆತ್ಮಹತ್ಯೆ ಮಾಡಿಕೊಂಡ ದಾರುಣ ಘಟನೆ ತೆಲಂಗಾಣದ ನಲಗೊಂಡದಲ್ಲಿ ನಡೆದಿದೆ.
13 ವರ್ಷದ ಬಾಲಕ ಹಿಮಚರಣ್ ಮೃತದೇಹ ರೈಲ್ವೆ ಹಳಿ ಮೇಲೆ ಪತ್ತೆಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಶಾಲಾ ನಾಯಕನ ಆಯ್ಕೆ ಸಂಬಂಧ ಸರ್ಕಾರಿ ಶಾಲೆಯಲ್ಲಿ ಜೂನ್ ನಲ್ಲಿ ನಡೆದ ಚುನಾವಣೆಯ ಫಲಿತಾಂಶ ಮೂರು ದಿನಗಳ ಹಿಂದೆ ಪ್ರಕಟವಾಗಿದ್ದು, ಹಿಮಚರಣ್ ತನ್ನ ಸಹಪಾಠಿ, ಪ್ರತಿಸ್ಪರ್ಧಿ ಬಾಲಕಿಯ ವಿರುದ್ಧ ಸೋಲು ಅನುಭವಿಸಿದ್ದನು. ಆದರೆ ಎರಡನೇ ಸ್ಥಾನದಲ್ಲಿದ್ದ ಹಿಮಚರಣ್ ರನ್ನು ಸಹಾಯಕ ನಾಯಕ ಎಂದು ಆಯ್ಕೆ ಮಾಡಲಾಗಿತ್ತು.
ನಂತರ ಹುಡುಗಿ ವಿರುದ್ಧ ಸೋತು ಬಿಟ್ಟೆ ಎಂದು ಹಿಮಚರಣ್ ಸ್ನೇಹಿತರು ಕಿಚಾಯಿಸಲು ಆರಂಭಿಸಿದ್ದರು. ಇದರಿಂದ ನೊಂದ ಹಿಮಚರಣ ಗುರುವಾರ ಶಾಲೆಯಿಂದ ವಾಪಸ್ ಮನೆಗೆ ಬಂದು, ಬ್ಯಾಗ್ ಮನೆಯಲ್ಲಿಟ್ಟು ಹೊರಗಡೆ ಹೋಗಿದ್ದಾನೆ. ರಾತ್ರಿಯಾದರೂ ಮನೆಗೆ ಬಾರದ ಹಿನ್ನೆಲೆಯಲ್ಲಿ ಆತಂಕಗೊಂಡ ಪೋಷಕರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. 
ಈ ಸಂಬಂಧ ನಲಗೊಂಡ ಪೊಲೀಸರು ಕೇಸ್ ದಾಖಲಿಸಿಕೊಂಡಿದ್ದು, ತನಿಖೆ ನಡೆಸುತ್ತಿದ್ದಾರೆ.
SCROLL FOR NEXT