ನ್ಯಾಯಾಧೀಶೆಯರಾದ ಮೇನಕಾ ಗೋಸ್ವಾಮಿ ಮತ್ತು ಅರುಂಧತಿ ಕಾಟ್ಜು
ನವದೆಹಲಿ: ಸೆಪ್ಟೆಂಬರ್ 6, 2018ರವರಗೆ ಭಾರತದ ದಂಡ ಸಂಹಿತೆಯ ಬಹಳ ಹಿಂದಿನ ಕಾನೂನು ಸೆಕ್ಷನ್ 377 ಪ್ರಕಾರ ಯಾವುದೇ ಪುರುಷ, ಮಹಿಳೆ ಅಥವಾ ಪ್ರಾಣಿಗಳೊಂದಿಗಿನ ಪ್ರಕೃತಿಯ ಕ್ರಮಕ್ಕೆ ವಿರುದ್ಧವಾದ ದೈಹಿಕ ಸಂಭೋಗ ಶಿಕ್ಷಾರ್ಹ ಅಪರಾಧ ಎಂದು ಹೇಳಲಾಗುತ್ತಿತ್ತು.
ಸಲಿಂಗಿಗಳು ದೈಹಿಕ ಸಂಪರ್ಕ ನಡೆಸುವುದು ಕಾನೂನಿನ ಪ್ರಕಾರ ಶಿಕ್ಷಾರ್ಹ ಅಪರಾಧವಾಗಿತ್ತು. ಇದರಡಿ ಜೀವಾವಧಿ ಶಿಕ್ಷೆಗೆ ಗುರಿಪಡಿಸುವ ಅವಕಾಶ ಕೂಡ ಇತ್ತು.
ಆದರೆ ಕಳೆದ ವರ್ಷ ಸುಪ್ರೀಂ ಕೋರ್ಟ್ ನ ಐವರು ನ್ಯಾಯಾಧೀಶರನ್ನೊಳಗೊಂಡ ತಂಡ ಈ ಕಾನೂನನ್ನು ಅನೂರ್ಜಿತಗೊಳಿಸಿ ಸಲಿಂಗಿಗಳ ದೈಹಿಕ ಸಂಭೋಗವನ್ನು ಕಾನೂನುಬದ್ಧಗೊಳಿಸಿತ್ತು. ಇದು ರಾಷ್ಟ್ರೀಯ ಕ್ರೀಡಾ ಚಾಂಪಿಯನ್ ದ್ಯುತಿ ಚಾಂದ್ ರಂತವರಿಗೆ ಅನುಕೂಲವಾಯಿತು. ತಮ್ಮ ಲೈಂಗಿಕ ದೃಷ್ಟಿಕೋನವನ್ನು ಮುಕ್ತವಾಗಿ ಯಾವುದೇ ಭೀತಿಯಿಲ್ಲದೆ ಮಾತನಾಡುವ ಅವಕಾಶವನ್ನು ನೀಡಿತ್ತು.
ಈ ಕಾನೂನು ಮಾನ್ಯತೆಗಾಗಿ ಹೋರಾಡಿದ ಸುಪ್ರೀಂ ಕೋರ್ಟ್ ನ ಐವರು ನ್ಯಾಯಾಧೀಶರುಗಳಲ್ಲಿ ಇದ್ದ ಇಬ್ಬರು ಮಹಿಳಾ ನ್ಯಾಯಾಧೀಶರು ಅರುಂಧತಿ ಕಾಟ್ಜು ಮತ್ತು ಮೇನಕಾ ಗುರುಸ್ವಾಮಿ.
2009ರಲ್ಲಿ ಸಲಿಂಗಿಗಳ ದೈಹಿಕ ಸಂಭೋಗ ಶಿಕ್ಷಾರ್ಹ ಅಪರಾಧವಲ್ಲ ಎಂದು ದೆಹಲಿ ಹೈಕೋರ್ಟ್ ನೀಡಿದ್ದ ಆದೇಶದ ವಿರುದ್ಧ ಸುಪ್ರೀಂ ಕೋರ್ಟ್ ಗೆ ಅರ್ಜಿ ಸಲ್ಲಿಸಿದಾಗ ಅದನ್ನು ಅಪರಾಧವೆಂದು 2013ರಲ್ಲಿ ಸುಪ್ರೀಂ ಕೋರ್ಟ್ ಎತ್ತಿಹಿಡಿದಾಗ ಅದರ ವಿರುದ್ಧ ಹೋರಾಟ ನಡೆಸಿದವರಲ್ಲಿ ಈ ಇಬ್ಬರು ನ್ಯಾಯಾಧೀಶೆಯರು ಮುಂಚೂಣಿಯಲ್ಲಿದ್ದರು.
ಅರುಂಧತಿ ಸುಪ್ರೀಂ ಕೋರ್ಟ್ ಮಾಜಿ ನ್ಯಾಯಾಧೀಶ ಮಾರ್ಕಂಡೇಯ ಕಾಟ್ಜು ಅವರ ಸೋದರ ಸೊಸೆ ಮತ್ತು ಮೇನಕಾ ಅವರು ಖ್ಯಾತ ರಾಜಕೀಯ ಚಿಂತಕ ಮೋಹನ್ ಗುರುಸ್ವಾಮಿ ಅವರ ಪುತ್ರಿ.
ಇವರ ವಿಚಾರದಲ್ಲಿ ಬಹಳ ಕುತೂಹಲಕಾರಿ ಸಂಗತಿ ಇದೀಗ ಬಹಿರಂಗಗೊಂಡಿದೆ. ಕೇವಲ ಸಾಮಾನ್ಯ ಜನರ ಪಾಲಿಗೆ ಮಾತ್ರವಲ್ಲದೆ ಈ ಇಬ್ಬರು ನ್ಯಾಯಾಧೀಶೆಯರ ಪಾಲಿಗೆ ವೃತ್ತಿಪರವಾಗಿ ಮತ್ತು ವೈಯಕ್ತಿಕ ಜೀವನದಲ್ಲಿ ಸುಪ್ರೀಂ ಕೋರ್ಟ್ 2018ರ ಸೆಪ್ಟೆಂಬರ್ 6ರಂದು ನೀಡಿದ ಆದೇಶ ಗೆಲುವಿನದ್ದಾಗಿತ್ತು.
ವೈಯಕ್ತಿಕ ಜೀವನದಲ್ಲಿ ಇವರಿಬ್ಬರು ದಂಪತಿ ಎಂಬ ವಿಷಯ ಇದೀಗ ಬಹಿರಂಗವಾಗಿದೆ. ಇತ್ತೀಚೆಗೆ ಸಿಎನ್ಎನ್ ಗೆ ನೀಡಿದ್ದ ಸಂದರ್ಶನ ವೇಳೆ ಮೇನಕಾ ಸಲಿಂಗಿಗಳನ್ನು ಕ್ರಿಮಿನಲ್ ಗಳೆಂದು ಪರಿಗಣಿಸುವುದು ಸರಿಯಲ್ಲ ಎಂದು ಹೇಳಿದರು. ಈ ಸಂದರ್ಶನಕ್ಕೆ ಇವರು ದಂಪತಿಗಳಾಗಿಯೇ ಆಗಮಿಸಿದ್ದರು.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos