ನವದೆಹಲಿ: ರಾಷ್ಟ್ರಗೀತೆ "ಜನಗಣಮನ" ಹಾಗೂ ರಾಷ್ಟ್ರೀಯ ಹಾಡು, ಬಂಕಿಮಚಂದ್ರ ಚಟರ್ಜಿ ವಿರಚಿತ "ವಂದೇ ಮಾತರಂ" ಗಳಿಗೆ ಸಮಾನ ಸ್ಥಾನಮಾನ ಕಲ್ಪಿಸುವಂತೆ ನೀತಿ ನಿರೂಪಣೆ ಮಾಡಬೇಕೆಂದು ಕೇಂದ್ರಕ್ಕೆ ನಿರ್ದೇಶನ ಕೋರಿ ದೆಹಲಿ ಹೈಕೋರ್ಟ್ನಲ್ಲಿ ಸೋಮವಾರ ಮನವಿ ಸಲ್ಲಿಕೆಯಾಗಿದೆ.
ಬಿಜೆಪಿ ಮುಖಂಡ, ವಕೀಲ ಅಶ್ವಿನಿ ಕುಮಾರ್ ಉಪಾದ್ಯಾಯ ಸಲ್ಲಿಸಿರುವ ಮನವಿಯಲ್ಲಿ ಬಂಕಿಮಚಂದ್ರ ಚಟರ್ಜಿ ಬರೆದಿರುವ 'ವಂದೇ ಮಾತರಂ'ಗೆ ಸಹ ನೊಬೆಲ್ ಪ್ರಶಸ್ತಿ ವಿಜೇತ ರವೀಂದ್ರನಾಥ ಟ್ಯಾಗೋರ್ ಬರೆದಿರುವ' ಜನ ಗಣ ಮನ ರಾಷ್ಟ್ರಗೀತೆಯಂತೆಯೇ ಗೌರವಿಸಬೇಕು ಎಂದು ಕೋರಲಾಗಿದೆ.
ಅರ್ಜಿಯು ಮಂಗಳವಾರ ವಿಚಾರಣೆಗೆ ಬರುವ ಸಾಧ್ಯತೆ ಇದೆ. "ವಂದೇ ಮಾತರಂ" ಗೀತೆ ಸ್ವಾತಂತ್ರ್ಯ ಚಳವಳಿಯಲ್ಲಿ ಪ್ರಮುಖ ಗೀತೆಯಾಗಿಯೂ "ವಂದೇ ಮಾತರಂ" ಘೋಷಣೆ ರಾಷ್ಟ್ರೀಯ ನಾಯಕರ ಘೋಷಣೆಯಾಗಿಯೂ ಬಳಕೆಯಾಗಿತ್ತು. 1896 ರಲ್ಲಿ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಅಧಿವೇಶನದಲ್ಲಿ ರವೀಂದ್ರನಾಥ ಟ್ಯಾಗೋರ್ ಅವರು ರಾಜಕೀಯ ಸಂದರ್ಭದಲ್ಲಿ ಈ ಗೀತೆಯನ್ನು ವೇದಿಕೆಯಲ್ಲಿ ಹಾಡಿದ್ದರು" ಉಪಾಧ್ಯಾಯ ಹೇಳಿದ್ದಾರೆ.
"ಜನ ಗಣ ಮನ" ಮತ್ತು "ವಂದೇ ಮಾತರಂ" ಎರಡನ್ನೂ ಸಮಾನವಾಗಿ ಗೌರವಿಸಬೇಕು.
'ಜನ ಗಣ ಮನ'ದಲ್ಲಿ ವ್ಯಕ್ತವಾದ ಭಾವನೆಗಳು ದೇಶದ ನಾನಾ ರಾಜ್ಯಗಳನ್ನು ಗಮನದಲ್ಲಿರಿಸಿಕೊಂಡು ವ್ಯಕ್ತವಾಗಿದೆ.ಆದಾಗ್ಯೂ, 'ವಂದೇ ಮಾತರಂ' ನಲ್ಲಿ ವ್ಯಕ್ತವಾದ ಭಾವನೆಗಳು ರಾಷ್ಟ್ರದ ಐಕ್ಯತೆ ಹಾಗೂ ಮಹತ್ವವನ್ನು ಸೂಚಿಸುತ್ತದೆ. ಹಾಗಾಗಿ ಈ ಗೀತೆಯೂ ಸಹ ಜನಗಣಮನ ಗೀತೆಗೆ ಸಮಾನ ಗೌರವ ಹೊಂದಲು ಅರ್ಹವಾಗಿದೆ"ಅರ್ಜಿಯಲ್ಲಿ ವಾದಿಸಲಾಗಿದೆ.
ಇನ್ನು ಇಂತಹಾ ಅರ್ಜಿ ಹೈಕೋರ್ಟ್ ಗೆ ಸಲ್ಲಿಕೆಯಾಗುತ್ತಿರುವುದು ಇದೇ ಮೊದಲೇನಲ್ಲ. ವಂದೇ ಮಾತರಂ ಗೀತೆಯನ್ನು ರಾಷ್ಟ್ರಗೀತೆಗೆ ಸಮಾನವಾಗಿ ಪರಿಗಣಿಸುವಂತೆ ನಿರ್ದೇಶನ ಕೋರಿ 2017 ರ ಅಕ್ಟೋಬರ್ನಲ್ಲಿ ದೆಹಲಿ ಹೈಕೋರ್ಟ್ನಲ್ಲಿ ಪಿಐಎಲ್ ಸಲ್ಲಿಸಲಾಗಿತ್ತು.'ವಂದೇ ಮಾತರಂ' ಭಾರತೀಯರ ಮನಸ್ಸಿನಲ್ಲಿ "ವಿಶಿಷ್ಟ ಮತ್ತು ವಿಶೇಷ ಸ್ಥಾನವನ್ನು" ಹೊಂದಿದೆ ಎಂಬ ಮನವಿಯನ್ನು ಕೇಂದ್ರ ಸರ್ಕಾರ ವಿರೋಧಿಸಿದ ನಂತರ ನ್ಯಾಯಾಲಯವು ಈ ಅರ್ಜಿಯನ್ನು ವಜಾಗೊಳಿಸಿತ್ತು
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos