ಶ್ರೀನಗರ: ಕರ್ನಾಟಕ ರಾಜ್ಯದ ವಿಧಾನಸಭೆಯಲ್ಲಿ ಮಂಗಳವಾರ ನಡೆದ ವಿಶ್ವಾಸಮತ ಯಾಚನೆಯಲ್ಲಿ ಕಾಂಗ್ರೆಸ್ –ಜೆಡಿಎಸ್ ಮೈತ್ರಿ ಪತನಗೊಂಡಿರುವ ಕುರಿತು ಪ್ರತಿಕ್ರಿಯಿಸಿರುವ ಜಮ್ಮು ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಹಾಗೂ ಪಿಡಿಪಿ ಅಧ್ಯಕ್ಷೆ ಮೆಹಬೂಬಾ ಮುಫ್ತಿ, ಇದು ಪ್ರಜಾಪ್ರಭುತ್ವದ ಕರಾಳ ದಿನ ಎಂದಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಅವರು, ವಿಶ್ವದ ಅತಿ ದೊಡ್ಡ ಪ್ರಜಾಪ್ರಭುತ್ವವನ್ನು ಸಂಭ್ರಮಿಸುತ್ತಿದ್ದ ದೇಶದ ಜನರು, ಇಂದು ಚುನಾಯಿತ ಸರ್ಕಾರ ಪತನಗೊಳ್ಳುವುದನ್ನು ನೋಡಿದ್ದಾರೆ ಎಂದಿದ್ದಾರೆ.
‘ಕರ್ನಾಟಕದ ಶಾಸಕರನ್ನು ಮುಂಬೈಗೆ ಕರೆದೊಯ್ದು ಐಷಾರಾಮಿ ವಸತಿ ಸೌಕರ್ಯ ಕಲ್ಪಿಸಲು ಎಲ್ಲಾ ಹಣ ವ್ಯಯಿಸಲಾಗಿದೆ. ಇದು ಎಚ್.ಡಿ.ಕುಮಾರಸ್ವಾಮಿ ನೇತೃತ್ವದ ಮೈತ್ರಿ ಸರ್ಕಾರದ ಪತನಕ್ಕೆ ಕಾರಣವಾಗಿದ್ದು, ಪ್ರಜಾಪ್ರಭುತ್ವದ ಕರಾಳ ದಿನ’ ಎಂದಿದ್ದಾರೆ.
ಆದರೆ, ರಾಜ್ಯದ ಇನ್ನೋರ್ವ ಮಾಜಿ ಮುಖ್ಯಮಂತ್ರಿ ಹಾಗೂ ನ್ಯಾಷನಲ್ ಕಾನ್ಫರೆನ್ಸ್ ಉಪಾಧ್ಯಕ್ಷ ಓಮರ್ ಅಬ್ದುಲ್ಲ, ‘ಇದನ್ನು ಪ್ರಜಾಪ್ರಭುತ್ವದ ಕಗ್ಗೊಲೆ ಎನ್ನಲಾಗದು. ಇದು ಕೂಡ ಚದುರಿದ ಫಲಿತಾಂಶದ ಹೊರಹೊಮ್ಮಿದ ಅವಕಾಶವಾದಿ ಮೈತ್ರಿಕೂಟವಾಗಿತ್ತು. ಇದು ರೆಸಾರ್ಟ್, ಹೋಟೆಲ್ ವಾಸ್ತವ್ಯ ಹಾಗೂ ಖಾಸಗಿ ವಿಮಾನ ಹಾರಾಟದ ಮೂಲಕ ಹುಟ್ಟಿದ ಇನ್ನೊಂದು ಅವಕಾಶವಾದಿ ಸರ್ಕಾರಕ್ಕೆ ದಾರಿ ಮಾಡಿಕೊಡಲಿದೆ ’ ಎಂದಿದ್ದಾರೆ.
ಮಂಗಳವಾರ ಕರ್ನಾಟಕ ವಿಧಾನಸಭೆಯಲ್ಲಿ ನಡೆದ ವಿಶ್ವಾಸಮತ ಯಾಚನೆಯಲ್ಲಿ ಮೈತ್ರಿ ಸರ್ಕಾರ 6 ಮತಗಳಿಂದ ಸೋಲು ಅನುಭವಿಸಿತ್ತು. ಇದರಿಂದ 14 ತಿಂಗಳ ಮೈತ್ರಿ ಸರ್ಕಾರ ಪತನಗೊಂಡಿತ್ತು.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos