ನವದೆಹಲಿ: ಭಾರತದ ಎಲ್ಲಾ ಮಾಜಿ ಪ್ರಧಾನಮಂತ್ರಿಗಳಿಗೆ ಮೀಸಲಾಗಿರುವ ಭವ್ಯವಾದ ವಸ್ತುಸಂಗ್ರಹಾಲಯವನ್ನು ದೆಹಲಿಯಲ್ಲಿ ನಿರ್ಮಿಸಲಾಗುವುದು ಎಂದು ಪ್ರಧಾನಿ ನರೇಂದ್ರ ಮೋದಿ ಬುಧವಾರ ಘೋಷಿಸಿದ್ದಾರೆ. ಈ ವೇಳೆ ಕಾಂಗ್ರೆಸ್ ತನ್ನ ತಂತ್ರಗಾರಿಕೆಯ ಭಾಗವಾಗಿ ಕೆಲ ಪ್ರಧಾನಮಂತ್ರಿಗಳ ನೆನಪುಗಳನ್ನು ಅಳಿಸಲು ಪ್ರಯತ್ನಿಸಿದೆ ಎಂದು ಟೀಕಿಸಿದ್ದಾರೆ.
"ಕಾಂಗ್ರೆಸ್ ತನ್ನ ತಂತ್ರಗಾರಿಕೆಯ ಭಾಗವಾಗಿ ಭಾರತದ ಕೆಲವು ಮಾಜಿ ಪ್ರಧಾನಿಗಳ ಹೆಸರನ್ನು ಮರೆಸಲು ಯತ್ನಿಸಿದೆ. ಆದರೆ ನಾನು ಎಲ್ಲ ಮಾಜಿ ಪ್ರಧಾನ ಮಂತ್ರಿಗಳಿಗೆ ಮೀಸಲಾಗಿರುವ ಭವ್ಯ ವಸ್ತುಸಂಗ್ರಹಾಲಯವನ್ನು ದೆಹಲಿಯಲ್ಲಿ ಸ್ಥಾಪಿಸಲು ಉದ್ದೇಶಿಸಿದ್ದೇನೆ". ರಾಜ್ಯಸಭೆಯ ಉಪಾಧ್ಯಕ್ಷ ಹರಿವಂಶ್ ಬರೆದ ಮಾಜಿ ಪ್ರಧಾನಿ ಚಂದ್ರಶೇಖರ್ ಕುರಿತ ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಮಾಜಿ ಪ್ರಧಾನ ಮಂತ್ರಿಗಳ ಕುಟುಂಬ ಸದಸ್ಯರು ಈ ವಸ್ತುಸಂಗ್ರಹಾಲಯಕ್ಕೆ ಸಂಬಂಧಿಸಿದ ಎಲ್ಲ ವಿಷಯಗಳನ್ನು ಹಂಚಿಕೊಳ್ಳಬೇಕೆಂದು ಮೋದಿ ಈ ವೇಳೆ ಮನವಿ ಮಾಡಿದ್ದಾರೆ.