ನವದೆಹಲಿ: ಅನರೀಕ್ಷಿತ ಬೆಳವಣಿಗೆಯಲ್ಲಿ ನಿತೀಶ್ ಕುಮಾರ್ ನೇತೃತ್ವದ ಜೆಡಿಯು ರಾಜ್ಯಸಭೆ ಕಲಾಪದಿಂದ ಹೊರ ನಡೆದಿದ್ದು, ತೀವ್ರ ಕುತೂಹಲ ಕೆರಳಿಸಿರುವ ತ್ರಿವಳಿ ತಲಾಖ್ ಮಸೂದೆಗೆ ಅನುಮೋದನೆ ದೊರೆಯುವುದು ಬಹುತೇಕ ಖಚಿತವಾದಂತಾಗಿದೆ.
ಹೌದು.. ಈ ಹಿಂದೆ ಲೋಕಸಭೆಯಲ್ಲಿ ಅನುಮೋದನೆ ಪಡೆದಿದ್ದ ತ್ರಿವಳಿ ತಲಾಖ್ ಮಸೂದೆಯನ್ನು ಇಂದು ರಾಜ್ಯಸಭೆಯಲ್ಲಿ ಮಂಡಿಸಲಾಗಿದ್ದು, ಮಸೂದೆ ಮೇಲಿನ ಚರ್ಚೆ ಸಂದರ್ಭದಲ್ಲೇ ಬಿಹಾರ ಸಿಎಂ ನಿತೀಶ್ ಕುಮಾರ್ ನೇತೃತ್ವದ ಜೆಡಿಯು ಸದಸ್ಯರು ಸಭಾತ್ಯಾಗ ಮಾಡಿದ್ದಾರೆ. ಪರಿಣಾಮ ತ್ರಿವಳಿ ತಲಾಖ್ ಮಸೂದೆಗೆ ಅನುಮೋದನೆ ಪಡೆಯಬೇಕು ಎಂಬ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರದ ಹಾದಿ ಸುಗಮವಾದಂತಾಗಿದೆ.
ಒಟ್ಟು 241 ಸದಸ್ಯ ಬಲದ ರಾಜ್ಯಸಭೆಯಲ್ಲಿ ಮಸೂದೆ ಅನುಮೋದನೆಗೆ 121 ಸದಸ್ಯರ ಅಗತ್ಯವಾಗಿತ್ತು. ಆದರೆ ಈಗ 6 ಸದಸ್ಯರನ್ನು ಹೊಂದಿರುವ ಜೆಡಿಯು ರಾಜ್ಯಸಭೆ ಕಲಾಪದಿಂದ ಸಭಾತ್ಯಾಗ ಮಾಡಿದ್ದು, ರಾಜ್ಯಸಭೆ ಸದಸ್ಯರ ಸಂಖ್ಯೆ 235ಕ್ಕೆ ಕುಸಿದಿದೆ. ಅಂತೆಯೇ ಅಗತ್ಯ ಬಹುಮತ ಕೂಡ 118ಕ್ಕೆ ಕುಸಿದಿದೆ. ಪ್ರಸ್ತುತ ಎನ್ ಡಿಎ ಮೈತ್ರಿ ಕೂಟ ಬಿಜೆಡಿ, ಟಿಆರ್ ಎಸ್ ಸದಸ್ಯರ ಬೆಂಬಲದೊಂದಿಗೆ 107 ಬೆಂಬಲಿತ ಸದಸ್ಯರನ್ನು ಹೊಂದಿದೆ. ಇನ್ನೂ ಅದಕ್ಕೆ 11 ಸದಸ್ಯರ ಬೆಂಬಲ ಬೇಕಿದ್ದು, ಇತರೆ ಪಕ್ಷಗಳಿಂದ ತ್ರಿವಳಿ ತಲಾಖ್ ಗೆ ಬೆಂಬಲ ನೀಡಿರುವ ಸದಸ್ಯರು ಕೂಡ ಇದ್ದಾರೆ. ಅದರೊಂದಿಗೆ ತ್ರಿವಳಿ ತಲಾಖ್ ಬೆಂಬಲಿತ ಸದಸ್ಯರ ಸಂಖ್ಯೆ ರಾಜ್ಯಸಭೆಯಲ್ಲಿ 120ಕ್ಕೆ ಏರಿಕೆಯಾಗಿದೆ.
ಹೀಗಾಗಿ ಈ ಬಾರಿ ಕೇಂದ್ರ ಸರ್ಕಾರ ಅನಾಯಾಸವಾಗಿ ತ್ರಿವಳಿ ತಲಾಖ್ ಗೆ ಅನುಮೋದನೆ ಪಡೆದು ರಾಷ್ಟ್ರಪತಿಗಳ ಅಂಕಿತಕ್ಕೆ ರವಾನೆ ಮಾಡಲಿದೆ ಎಂದು ಹೇಳಲಾಗುತ್ತಿದೆ.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos