ನವದೆಹಲಿ: ಬಂಗಾಳಕೊಲ್ಲಿ ನಾಪತ್ತೆಯಾಗಿರುವ ಭಾರತೀಯ ವಾಯುಸೇನೆಯ ಎಎನ್ 32 ಜೆಟ್ ವಿಮಾನಕ್ಕೆ ಅಳವಡಿಸಲಾಗಿದ್ದ ತುರ್ತು ಸಂದೇಶ ರವಾನೆ ವ್ಯವಸ್ಥೆ 14 ವರ್ಷಗಳಿಂದ ಬಳಕೆಯಲ್ಲಿರಲಿಲ್ಲ ಎಂಬ ಆಘಾತಕಾರಿ ಅಂಶ ಇದೀಗ ಬೆಳಕಿಗೆ ಬಂದಿದೆ.
ಈ ಬಗ್ಗೆ ಮಾಧ್ಯಮವೊಂದು ವರದಿ ಮಾಡಿದ್ದು, ವಿಮಾನದ ತುರ್ತು ಸಂದೇಶ ರವಾನೆ ವ್ಯವಸ್ಥೆ (SOS Signal Unit) ಸುಮಾರು 14 ವರ್ಷಗಳಷ್ಟು ಹಳೆಯದು ಮತ್ತು ಸಮಯಮೀರಿದ (OutDated) ಪರಿಕರವಾಗಿತ್ತು. ಕಳೆದ 14 ವರ್ಷಗಳಿಂದ ಈ ಪರಿಕರವನ್ನು ಇದರ ಮಾತೃಸಂಸ್ಥೆ ಉತ್ಪಾದನೆ ಮಾಡುತ್ತಿರಲಿಲ್ಲ. 14 ವರ್ಷಗಳ ಹಿಂದೆಯೇ ಇದರ ಉತ್ಪಾದನೆ ಸ್ಥಗಿತವಾಗಿತ್ತು ಎಂದು ಹೇಳಲಾಗಿದೆ. ಅದಾಗ್ಯೂ ವಿಮಾನದ ಈ ಪರಿಕರಣವನ್ನು ಏಕೆ ಬದಲಿಸಲಿಲ್ಲ ಎಂಬ ಪ್ರಶ್ನೆಗಳು ಇದೀಗ ಮೂಡುತ್ತಿವೆ.
ಇನ್ನು 8 ಮಂದಿ ಸಿಬ್ಬಂದಿಗಳು ಸೇರಿದಂತೆ ಒಟ್ಟು 13 ಮಂದಿಯನ್ನು ಹೊತ್ತಿದ್ದ ವಿಮಾನ ಜೂನ್ 2ರಂದು ಬಂಗಾಳಕೊಲ್ಲಿಯಲ್ಲಿ ನಾಪತ್ತೆಯಾಗಿತ್ತು. ಅಸ್ಸಾಂನ ಜೊರ್ಹಾತ್ ನಿಂದ ಹೊರಟಿದ್ದ ವಿಮಾನ ಅರುಣಾಚಲ ಪ್ರದೇಶದ ಮೆಂಚುಕಾಗೆ ತೆರಳ ಬೇಕಿತ್ತು. ಆದರೆ ವಿಮಾನ ಟೇಕ್ ಆಫ್ ಆದ ಕೇವಲ ಒಂದೇ ಗಂಟೆಯಲ್ಲಿ ವಿಮಾನ ನಿಯಂತ್ರಣ ಕೊಠಡಿಯ ಸಂಪರ್ಕ ಕಳೆದುಕೊಂಡಿತು. ವಿಮಾನದ ಸಂಪರ್ಕ ಸಾಧಿಸಲು ಸಾಕಷ್ಟು ಪ್ರಯತ್ನಿಸಲಾಯಿತಾದರೂ ವಿಮಾನ ಪತ್ತೆಯಾಗಿರಲಿಲ್ಲ.
ವಾಯುಸೇನೆಯಿಂದಲೂ ಮುಂದುವರಿದ ಶೋಧ
ಇನ್ನು ನಾಪತ್ತೆಯಾಗಿರುವ ವಿಮಾನದ ಪತ್ತೆಗಾಗಿ ಈಗಾಗಲೇ ಭಾರತೀಯ ವಾಯುಸೇನೆ ಶೋಧ ಕಾರ್ಯಾಚರಣೆ ನಡೆಸುತ್ತಿದ್ದು, ವಾಯುಸೇನೆಯ ಸುಖೋಯ್ 30ಎಂಕೆಐ ಯುದ್ಧ ವಿಮಾನ, ಸಿ 130 ಜೆ ಸೂಪರ್ ಹರ್ಕ್ಯುಲಸ್ ಮತ್ತು ಇತರೆ ಶೋಧಕ ವಿಮಾನಗಳು ಕಾರ್ಯಾಚರಣೆ ನಡೆಸುತ್ತಿವೆ. ಬಂಗಾಳಕೊಲ್ಲಿಯಲ್ಲಿ ಮೊಡ ಕವಿದ ವಾತಾವರಣವಿದ್ದರೂ, ವಿಮಾನಗಳು ನಿರಂತರವಾಗಿ ಶೋಧ ನಡೆಸುತ್ತಿವೆ ಎಂದು ಎನ್ನಲಾಗಿದೆ.
ವಿಮಾನ ನಾಪತ್ತೆಯಾಗಿ 48 ಗಂಟೆಗಳು ಕಳೆದರೂ ವಿಮಾನದ ಒಂದಿಚು ಮಾಹಿತಿ ಕೂಡ ಲಭ್ಯವಾಗಿಲ್ಲ. ಹೀಗಾಗಿ ವಿಮಾನದ ಶೋದಕ್ಕೆ ಭಾರತೀಯ ಬಾಹ್ಯಾಕಾಶ ಸಂಸ್ಥೆ ಇಸ್ರೋ ಸಾಥ್ ನೀಡಿದೆ. ಇಸ್ರೋದ ಉಪಗ್ರಹಗಳ ನೆರವಿನಿಂದಾಗಿ ಇದೀಗ ಶೋಧ ಕಾರ್ಯಾಚರಣೆ ಆರಂಭಿಸಲು ನಿರ್ಧರಿಸಿದ್ದು. ಈ ಸಂಬಂಧ ಐಎಎಫ್ ಅಧಿಕಾರಿಗಳು ಇಸ್ರೋ ಅಧಿಕಾರಿಗಳೊಂದಿಗೆ ಸಂಪರ್ಕದಲ್ಲಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics