ನವದೆಹಲಿ: ಡಾರ್ಜಿಲಿಂಗ್ ನಗರ ಪಾಲಿಕೆಯ 17 ಗೋರ್ಖಾ ಜನಮುಕ್ತಿ ಮೋರ್ಚಾದ ಕೌನ್ಸಿಲರ್ ಗಳು ಶನಿವಾರ ಬಿಜೆಪಿ ಸೇರ್ಪಡೆಯಾಗಿದ್ದಾರೆ.
ಇಂದು ದೆಹಲಿಯ ಬಿಜೆಪಿ ಪ್ರಧಾನ ಕಚೇರಿಯಲ್ಲಿ ಬಿಜೆಪಿ ಪ್ರಧಾನ ಕಾರ್ಯದರ್ಶಿ ಕೈಲಾಶ್ ವಿಜಯ ವರ್ಗಿಯಾ ಹಾಗೂ ಬಿಜೆಪಿ ನಾಯಕ ಮುಕುಲ್ ರಾಯ್ ನೇತೃತ್ವದಲ್ಲಿ 17 ಕೌನ್ಸಿಲರ್ ಗಳು ಬಿಜೆಪಿ ಸೇರಿದರು.
ಗೋರ್ಖಾ ಜನಮುಕ್ತಿ ಮೋರ್ಚಾದ 17 ಕೌನ್ಸಿಲರ್ ಗಳು ಬಿಜೆಪಿ ಸೇರಿರುವುದರಿಂದ ಈಗ ಡಾರ್ಜಿಲಿಂಗ್ ನಗರ ಪಾಲಿಕೆಯಲ್ಲಿ ಬಿಜೆಪಿ ಬಹುಮತ ಸಿಕ್ಕಿದೆ ಎಂದು ಮುಕುಲ್ ರಾಯ್ ಹೇಳಿದ್ದಾರೆ.
ಇದೇ ವೇಳೆ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ವಿರುದ್ಧ ವಾಗ್ದಾಳಿ ನಡೆಸಿದ ಮಾಜಿ ಟಿಎಂಸಿ ನಾಯಕ ಮುಕುಲ್ ರಾಯ್ ಅವರು, ಪಶ್ಚಿಮ ಬಂಗಾಳದಲ್ಲಿ ಪ್ರಜಾಪ್ರಭುತ್ವಕ್ಕಾಗಿ ನಮ್ಮ ಹೋರಾಟ ಮುಂದುವರೆಯಲಿದೆ. ಅಲ್ಲಿ ಮಮತಾ ಬ್ಯಾನರ್ಜಿ ಆದೇಶದಂತೆ ಪೊಲೀಸರು ನಡೆದುಕೊಳ್ಳುತ್ತಿದ್ದಾರೆ. ಎರಡು, ಮೂರು ದಿನದಲ್ಲಿ ಪೊಲೀಸ್ ರಾಜ್ ವಿರುದ್ಧ ಪ್ರತಿಭಟನೆ ನಡೆಸುವುದಾಗಿ ತಿಳಿಸಿದರು.