ದೇಶ

ಎಎನ್-32 ವಿಮಾನ ಪತನ: ಮೃತದೇಹ ಪತ್ತೆ ಕಾರ್ಯಾಚರಣೆಗೆ ಪ್ರತಿಕೂಲ ಹವಾಮಾನ ಅಡ್ಡಿ

Nagaraja AB
ಇಟಾನಗರ:  ಜೂನ್ 3 ರಂದು ವಿಮಾನ ಅಪಘಾತದಿಂದ ಮೃತಪಟ್ಟಿರುವ 13 ಮಂದಿಗಳ ಪೈಕಿ ಉಳಿದಿರುವ 6 ಮೃತದೇಹಗಳ ಪತ್ತೆ  ಕಾರ್ಯಾಚರಣೆಗೆ ಪ್ರತಿಕೂಲ ಹವಾಮಾನ ಅಡ್ಡಿಯಾಗಿದೆ ಎಂದು ಭಾರತೀಯ ವಾಯುಪಡೆ ಇಂದು ಹೇಳಿದೆ.
ಗುರುವಾರ ಮೊದಲ ಬಾರಿಗೆ ಆರು ಮೃತದೇಹಗಳನ್ನು ವಶಕ್ಕೆ ಪಡೆಯಲಾಗಿತ್ತು. ಹವಾಮಾನ ಪರಿಸ್ಥಿತಿ ಸುಧಾರಿಸಿದ ನಂತರ  ಮತ್ತೆ ಕಾರ್ಯಾಚಾರಣೆ ಆರಂಭಿಸಲಾಗುವುದು. ಇದಕ್ಕಾಗಿ ಚೀತ್ಹಾ ಹಾಗೂ ಎಎಲ್ ಹೆಚ್ ಹೆಲಿಕಾಪ್ಟರ್ ಗಳನ್ನು ನಿಯೋಜಿಸಲಾಗಿದೆ ಎಂದು ಐಎಎಫ್ ತಿಳಿಸಿದೆ.
ಪ್ರಸ್ತುತ ಮೋಡಗಳ ಪ್ರಮಾಣ ಕಡಿಮೆಯಾಗಿದ್ದು, ಸ್ವಲ್ಪ ಮಳೆಯಾಗುತ್ತಿದೆ. ಮೃತಪಟ್ಟವರ ದೇಹಗಳ ವಶಕ್ಕಾಗಿ ಭಾರತೀಯ ವಾಯುಪಡೆ ಎಲ್ಲಾ ರೀತಿಯ ಪ್ರಯತ್ನ ಮಾಡುತ್ತಿದೆ. ಮೃತಪಟ್ಟರ ಕುಟುಂಬ ಸದಸ್ಯರ ಜೊತೆಗೆ ಐಎಎಫ್ ಸಿಬ್ಬಂದಿ ನಿರಂತರವಾಗಿ ಸಂಪರ್ಕದಲ್ಲಿದ್ದು, ಮಾಹಿತಿ ನೀಡಲಾಗುತ್ತಿದೆ. ಪ್ರತಿಕೂಲ ಹವಾಮಾನ ಪರಿಸ್ಥಿತಿ ಬಗ್ಗೆ ಮನವರಿಕೆ ಮಾಡಿಕೊಡಲಾಗಿದೆ ಎಂದು ವಿಂಗ್ ಕಮಾಂಡರ್ ಪುನೀತ್ ಚದಾ ಹೇಳಿದ್ದಾರೆ.
ಎಎನ್-32 ವಿಮಾನ ಅಪಘಾತಕ್ಕೀಡಾದ ಪ್ರದೇಶದಿಂದ ಶುಕ್ರವಾರ ವಿಮಾನ ಮಾಹಿತಿ ಧ್ವನಿಮುದ್ರಿಕೆ -ಎಫ್ ಡಿಆರ್ ಹಾಗೂ ಕಾಕ್ ಪಿಟ್ ಧ್ವನಿ ಮುದ್ರಿಕೆ- ಸಿವಿಆರ್ ನ್ನು ಶೋಧ ತಂಡ ಶುಕ್ರವಾರ ವಶಕ್ಕೆ ಪಡೆದುಕೊಂಡಿತ್ತು. 
ಭಾರತೀಯ ವಾಯುಪಡೆಯ 16 ಪರ್ವತಾರೋಹಿಗಳು ಹಾಗೂ ಭಾರತೀಯ ಸೇನೆಯನ್ನೊಳಗೊಂಡ ತಂಡ ಅರುಣಾಚಲ ಪ್ರದೇಶದ ಸಿಯಾಂಗ್ ಜಿಲ್ಲೆಯಲ್ಲಿ ವಿಮಾನ ಅಪಘಾತಗೊಂಡಿರುವ ಪ್ರದೇಶವನ್ನು ಪತ್ತೆ ಹಚ್ಚಿತ್ತು. 
ಜೂನ್ 3ರಂದು ಜರ್ಹಾತ್ ವಾಯುನೆಲೆಯಿಂದ ಟೇಕಾಫ್ ಆದ  ಎಎನ್ -32 ವಿಮಾನ 35 ನಿಮಿಷದ ನಂತರ ನಾಪತ್ತೆಯಾಗಿತ್ತು. 
SCROLL FOR NEXT