ದೇಶ

ಕ್ರಿಕೆಟ್ ನಲ್ಲಿ ಭಾರತ ಗೆಲುವು: ವಿಜಯೋತ್ಸವ ವೇಳೆ ಮಾತಿನ ಚಕಮಕಿ, ದಲಿತ ಯುವಕ ದುರ್ಮರಣ

Nagaraja AB
ಪ್ರತಾಪ್ ಗಢ : ಉತ್ತರ ಪ್ರದೇಶದ ಪ್ರತಾಪ್ ಗಢ  ಜಿಲ್ಲೆಯ ರಾಮ್ ಪುರ್ ಬೆಲಾ ಗ್ರಾಮದಲ್ಲಿ ಇಂದು ಮುಂಜಾನೆ ಗುಡಿಸಲಿಗೆ ಬೆಂಕಿ ಬಿದ್ದು, ಯುವಕನೋರ್ವ ಮೃತಪಟ್ಟಿರುವ ಘಟನೆ ನಡೆದಿದೆ.
 ಮೃತನನ್ನು ವಿನಯ್  ಪ್ರಕಾಶ್ ಎಂದು ಗುರುತಿಸಲಾಗಿದೆ.ಪರಿಶಿಷ್ಟ ಜಾತಿಗೆ ಸೇರಿದ ಈತ ನಿನ್ನೆ ರಾತ್ರಿ ಭಾರತ- ಪಾಕಿಸ್ತಾನ ನಡುವಣ ಕ್ರಿಕೆಟ್ ಪಂದ್ಯವನ್ನು ವೀಕ್ಷಿಸಿದ್ದು, ಭಾರತ ಗೆದ್ದ ನಂತರ ವಿಜಯೋತ್ಸವದಲ್ಲಿ ಪಾಲ್ಗೊಂಡು ಕುಣಿದು ಸಂಭ್ರಮಿಸಿದ್ದಾನೆ. ಆದರೆ, ಈ ಸಂದರ್ಭದಲ್ಲಿ ಸಣ್ಣ ವಿಚಾರಕ್ಕೆ ಬೇರೊಂದು ಗುಂಪಿನೊಂದಿಗೆ ಮಾತಿನ ಚಕಮಕಿ ನಡೆದಿದೆ. 
ಇಂದು ಬೆಳಗ್ಗೆ  ಹಳ್ಳಿಯ ಜನರು ಎದ್ದು ನೋಡುವಷ್ಟರಲ್ಲಿ ಪ್ರಕಾಶ್ ಗುಡಿಸಲು ಬೆಂಕಿಯ ಜ್ವಾಲೆಯಿಂದ ಧಗಧಗನೆ ಉರಿದು ಆತ ಸುಟ್ಟು ಕರಕಲಾಗಿದ್ದಾನೆ. 
ಇದೊಂದು ಕೊಲೆ ಎಂದು ಹೇಳುತ್ತಿರುವ ಗ್ರಾಮಸ್ಥರು, ಪಾಕಿಸ್ತಾನ ವಿರುದ್ಧದ ಪಂದ್ಯದಲ್ಲಿ ಭಾರತ ಗೆದ್ದ ಬಳಿಕ ಕಳೆದ ರಾತ್ರಿ ನಡೆದ ವಾಗ್ವಾದಕ್ಕೆ ಸಂಬಂಧಿಸಿದಂತೆ ಪ್ರಕಾಶ್ ಹತ್ಯೆ ನಡೆದಿದೆ ಎಂದು ಹೇಳುತ್ತಿದ್ದಾರೆ.
ಈ ಪ್ರಕರಣದ ಬಗ್ಗೆ ಪರಿಶಿಷ್ಟ ಜಾತಿ , ಪಂಗಡದ ಆಯೋಗ ಸ್ವಯಂ ಪ್ರೇರಿತ ದೂರು ದಾಖಲಿಸಿಕೊಂಡಿದೆ. ಪ್ರಕರಣದ ವಿಚಾರಣೆ ನಡೆಸಿ, ಆದಷ್ಟು ಬೇಗ ಆರೋಪಿಗಳನ್ನು ಬಂಧಿಸುವಂತೆ  ಪ್ರತಾಪ್ ಗಢದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗೆ ಸೂಚನೆ ನೀಡಿದೆ.
SCROLL FOR NEXT