ಮಿರ್ಜಾಪುರ್: ಉತ್ತರ ಪ್ರದೇಶದ ಮಿರ್ಜಾಪುರ್ ದಲ್ಲಿ ನಿವೃತ್ತ ಪೊಲೀಸ್ ಅಧಿಕಾರಿ ಹಾಗೂ ಅವರ ಪತ್ನಿ ಕಳೆದ ಒಂದು ತಿಂಗಳಿಂದ ತಮ್ಮ ಮಗಳ ಕೊಳತೆ ಶವದೊಂದಿಗೆ ವಾಸಿಸುತ್ತಿದ್ದ ಆಘಾತಕಾರಿ ಘಟನೆ ಸೋಮವಾರ ಬೆಳಕಿಗೆ ಬಂದಿದೆ.
ಹಯಾತ್ ನಗರದಲ್ಲಿರುವ ದಿಲಾವಾರ್ ಸಿದ್ಧಿಖಿ ಅವರ ನಿವಾಸದಿಂದ ದುರ್ವಾಸನೆ ಬರುತ್ತಿರುವ ಬಗ್ಗೆ ನೆರೆಹೊರೆಯವರು ಪೊಲೀಸರಿಗೆ ಮಾಹಿತಿ ನೀಡಿದ್ದು, ಪೊಲೀಸರು ಬಲವಂತವಾಗಿ ಮನೆ ಬಾಗಿಲು ತೆರೆದು ನೋಡಿದಾಗ ಕೊಳೆತ ಸ್ಥಿತಿಯಲ್ಲಿದ್ದ ಮೃತದೇಹ ಪತ್ತೆಯಾಗಿದೆ.
ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದ್ದು, 15 ದಿನಗಳ ಹಿಂದೆ ನೆರೆಹೊರೆಯವರು ಇದೇ ರೀತಿ ದೂರು ನೀಡಿದ್ದರು. ಈ ಬಗ್ಗೆ ಸಿದ್ಧಿಖಿ ಅವರನ್ನು ವಿಚಾರಿಸಿದಾಗ, ನನ್ನ ಕುಟುಂಬದಲ್ಲಿ ಎಲ್ಲವೂ ಸರಿ ಇದೆ ಎಂದು ಹೇಳಿದ್ದರು ಎಂದು ಪೊಲೀಸ್ ವರಿಷ್ಠಾಧಿಕಾರಿ ಪ್ರಕಾಶ್ ಸ್ವರೂಪ್ ಪಾಂಡೆ ಅವರು ತಿಳಿಸಿದ್ದಾರೆ.
ನಿವೃತ್ತ ಇನ್ಸ್ ಪೆಕ್ಟರ್ ದಿಲಾವರ್ ಸಿದ್ಧಿಖಿ ಹಾಗೂ ಅವರ ಪತ್ನಿ ಮಾನಸಿಕ ತೊಂದರೆ ಅನುಭವಿಸುತ್ತಿದ್ದು, ಮಗಳು ಬದುಕಿದ್ದಾಳೆ ಮತ್ತು ಮಲಗಿದ್ದಾಳೆ ಎಂದು ಹೇಳುತ್ತಿದ್ದರು ಎಂದು ಪಾಂಡೆ ತಿಳಿಸಿದ್ದಾರೆ.
ಮರಣೋತ್ತರ ಪರೀಕ್ಷೆಯಲ್ಲಿ ಮಗಳ ಸಾವಿಗೆ ಕಾರಣ ಏನು ಅಂತ ತಿಳಿಯಲಿದೆ. ಬಳಿಕ ಮುಂದಿನ ಕ್ರಮ ತೆಗೆದುಕೊಳ್ಳುವುದಾಗಿ ಅವರು ಹೇಳಿದ್ದಾರೆ.