ಪಾಟ್ನಾ: ಬಿಹಾರದಲ್ಲಿ ಎನ್ಸಿಫಾಲಿಟಿಸ್ ಸೋಂಕಿನ ಮರಣ ಮೃದಂಗ ಮುಂದುವರೆದಿದ್ದು, ಈ ಮಾರಕ ಸೋಂಕಿಗೆ ಬಲಿಯಾದವರ ಸಂಖ್ಯೆ 107ಕ್ಕೆ ಏರಿಕೆಯಾಗಿದೆ.
ಈ ಬಗ್ಗೆ ಮಾಹಿತಿ ನೀಡಿರುವ ಬಿಹಾರ ವೈದ್ಯಕೀಯ ಅಧಿಕಾರಿಗಳು, ಎಇಎಸ್ ಸೋಂಕಿಗೆ ಸುಮಾರು 107 ಮಂದಿ ಬಲಿಯಾಗಿದ್ದಾರೆ. ಈ ಪೈಕಿ ಶ್ರೀಕೃಷ್ಣ ವೈದ್ಯಕೀಯ ಕಾಲೇಜಿನಲ್ಲಿ 88 ಮತ್ತು ಕೇಜ್ರಿವಾಲ್ ಆಸ್ಪತ್ರೆಯಲ್ಲಿ 19 ಮಂದಿ ಸಾವಿಗೀಡಾಗಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ.
ಇನ್ನು ಬಿಹಾರದಲ್ಲಿ ಬೇಸಿಗೆ ತಾಪಮಾನ ವ್ಯಾಪಕವಾಗಿ ಏರಿಕೆಯಾಗಿದ್ದು, ಇದೂ ಕೂಡ ಮಕ್ಕಳಲ್ಲಿ ಜ್ವರ ಹೆಚ್ಚಾಗಲು ಕಾರಣವಾಗಿದೆ ಎಂದು ಸ್ಥಳೀಯ ಆರೋಗ್ಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಮಿದುಳು ಸೋಂಕು ಮಕ್ಕಳಲ್ಲಿ ವ್ಯಾಪಕವಾಗಿದ್ದು, ಸ್ಥಳೀಯವಾಗಿ ಇದನ್ನು ಚಮ್ಕಿ ಜ್ವರ ಎಂದು ಕರೆಯುತ್ತಾರೆ.
ಇನ್ನು ಎಇಎಸ್ ಸೋಂಕಿಗೆ ಬಲಿಯಾದವರ ಕುಟುಂಬಗಳಿಗೆ ಬಿಹಾರ ಸರ್ಕಾರ ನಾಲ್ಕು ಲಕ್ಷ ಪರಿಹಾರ ಘೋಷಣೆ ಮಾಡಿದೆ. ಈ ಬಗ್ಗೆ ಸಿಎಂ ನಿತೀಶ್ ಕುಮಾರ್ ಅವರು ಮುಖ್ಯಮಂತ್ರಿಗಳ ಪರಿಹಾರ ನಿಧಿಯಿಂದ ಪರಿಹಾರ ಘೋಷಣೆ ಮಾಡಿದ್ದಾರೆ. ಮುಜಾಫರ್ ಪುರದಲ್ಲಿ ವೈದ್ಯಾಧಿಕಾರಿಗಳು ಹೈ ಅಲರ್ಟ್ ನಲ್ಲಿರುವಂತೆ ಸೂಚನೆ ನೀಡಲಾಗಿದೆ.