ನವದೆಹಲಿ: ದೇಶಾದ್ಯಂತ ರಕ್ಷಿಸಲ್ಪಟ್ಟ ಜೀತದಾಳುಗಳ ಪುನರ್ವಸತಿ ಮಾಡಲು ಕೇಂದ್ರ ಸರ್ಕಾರ ಸಂಪೂರ್ಣವಾಗಿ ಯಶಸ್ವಿಯಾಗಿಲ್ಲದ್ದು ಒಂದೆಡೆಯಾದರೆ ಅವರ ಪುನರ್ವಸತಿಗೆ ಬಿಡುಗಡೆ ಮಾಡುವ ಹಣವನ್ನು ಶೇಕಡಾ 61ರಷ್ಟು ಈ ವರ್ಷ ಕಡಿತಗೊಳಿಸಲಾಗಿದೆ ಎಂದು ಕಾರ್ಮಿಕ ಸಚಿವಾಲಯದ ಇತ್ತೀಚಿನ ಅಂಕಿಅಂಶ ಹೇಳುತ್ತದೆ.
ಜೀತ ಕಾರ್ಮಿಕರ ಪುನರ್ವಸತಿಗೆ ಬಿಡುಗಡೆಯಾದ ಒಟ್ಟು ಮೊತ್ತ 2017-18ರಲ್ಲಿ 664.5 ಲಕ್ಷವಾದರೆ ಕಳೆದ ವರ್ಷ ಆ ಮೊತ್ತ 253.3 ಲಕ್ಷ ಹಠಾತ್ ಆಗಿ ಇಳಿದಿದೆ.
ಒಟ್ಟು 3.13 ಲಕ್ಷ ಜೀತ ಕಾರ್ಮಿಕರಲ್ಲಿ 2.93 ಲಕ್ಷ ಕಾರ್ಮಿಕರಿಗೆ ಪುನರ್ವಸತಿ ಕಲ್ಪಿಸಲಾಗಿದೆ. ಆದರೆ ಸುಮಾರು 19 ಸಾವಿರ ಜೀತ ಕಾರ್ಮಿಕರನ್ನು ಗುರುತಿಸಲಾಗದೆ ಅವರಿಗೆ ಪುನರ್ವಸತಿ ಕಲ್ಪಿಸಲಾಗಿಲ್ಲ ಎಂದು ಸಚಿವಾಲಯದ ಅಧಿಕಾರಿಗಳು ಹೇಳುತ್ತಾರೆ. ಕೆಲವು ಕಾರ್ಮಿಕರು ಸತ್ತಿರಬಹುದು ಅಥವಾ ಪುನರ್ವಸತಿ ಕೇಂದ್ರವನ್ನು ಬಿಟ್ಟು ಹೋಗಿರಬಹುದು, ಅವರ ವಿಳಾಸ ಪತ್ತೆಯಾಗಿಲ್ಲ, ಇಂತಹ ಕಾರ್ಮಿಕರ ಸಂಖ್ಯೆ ದೇಶದಲ್ಲಿ ಸುಮಾರು 19,599ರಷ್ಟಿದೆ ಎಂದು ಸಚಿವಾಲಯ ಅಧಿಕಾರಿಗಳು ಹೇಳುತ್ತಾರೆ.
ಅಸ್ಸಾಂ, ಗುಜರಾತ್, ಪುದುಚೆರಿ, ಜಾರ್ಖಂಡ್, ಪಂಜಾಬ್, ಉತ್ತರಾಖಂಡ್ ಮತ್ತು ಪಶ್ಚಿಮ ಬಂಗಾಳ ರಾಜ್ಯಗಳಲ್ಲಿ ಜೀತದಾಳುಗಳನ್ನು ಶೇಕಡಾ 100ರಷ್ಟು ಪುನರ್ವಸತಿ ಕಲ್ಪಿಸಲಾಗಿದೆ. ಆದರೆ ಹರ್ಯಾಣದಲ್ಲಿ ಪರಿಸ್ಥಿತಿ ಶೋಚನೀಯವಾಗಿದ್ದು ಇಲ್ಲಿನ ಒಟ್ಟು 594 ಜೀತದಾಳುಗಳಲ್ಲಿ ಕೇವಲ 92 ಜೀತದಾಳುಗಳಿಗೆ ಪುನರ್ವಸತಿ ಕಲ್ಪಿಸಲಾಗಿದೆ.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos