ಅಮರಾವತಿ: ಬಹುಕೋಟಿ ಮೌಲ್ಯದ ತೆಲುಗುದೇಶಂ ಪಕ್ಷದ ಕಚೇರಿಯನ್ನು ಧ್ವಂಸಗೊಳಿಸಿದ ಬೆನ್ನಲ್ಲೇ ಇದೀಗ ಮಾಜಿ ಸಿಎಂ ಚಂದ್ರಬಾಬು ನಾಯ್ಡು ಅವರ ಅಧಿಕೃತ ನಿವಾಸಕ್ಕೂ ಕುತ್ತು ಬಂದಿದ್ದು, ಮನೆಯನ್ನು ತೆರವುಗೊಳಿಸುವ ಕುರಿತಂತೆ ಅಭಿಪ್ರಾಯ ತಿಳಿಸಿ ಆಂಧ್ರ ಪ್ರದೇಶ ರಾಜಧಾನಿ ಅಭಿವೃದ್ಧಿ ಪ್ರಾಧಿಕಾರ ನೋಟಿಸ್ ನೀಡಿದೆ.
ಆಂಧ್ರ ಪ್ರದೇಶ ನೂತನ ರಾಜಧಾನಿ ಅಮರಾವತಿ ಅಭಿವೃದ್ಧಿ ಕಾರ್ಯ ಪ್ರಗತಿಯಲ್ಲಿರುವಂತೆಯೇ ರಾಜಧಾನಿಗೆ ಭೂಮಿ ಪೂಜೆ ನೆರವೇರಿಸಿದ ಮಾಜಿ ಸಿಎಂ ಚಂದ್ರಬಾಬು ನಾಯ್ಡು ಅವರ ವಿರುದ್ಧ ಭೂಗಳ್ಳತನ ಗಂಭೀರ ಆರೋಪ ಕೇಳಿಬಂದಿದೆ. ಈ ಹಿಂದೆ ಇದೇ ವಿಚಾರವಾಗಿ ಅಕ್ರಮವಾಗಿ ನಿರ್ಮಿಸಲಾಗಿದೆ ಎಂದು ಆರೋಪಿಸಿ ತೆಲುಗುದೇಶಂ ಪಕ್ಷದ ಅಧಿಕೃತ ಕಚೇರಿ ಪ್ರಜಾ ವೇದಿಕವನ್ನು ತೆರವುಗೊಳಿಸಲಾಗಿತ್ತು. ಇದೀಗ ಇದರ ಕೂಗಳತೆ ದೂರದಲ್ಲಿರುವ ಮಾಜಿ ಸಿಎಂ ಚಂದ್ರಬಾಬು ನಾಯ್ಡು ಅವರ ನಿವಾಸಕ್ಕೂ ಕುತ್ತು ಬಂದಿದ್ದು, ನಿವಾಸವನ್ನು ತೆರವುಗೊಳಿಸುವ ಕುರಿತು ಅಭಿಪ್ರಾಯ ತಿಳಿಸಿ ಎಂದು ನೋಟಿಸ್ ಜಾರಿ ಮಾಡಲಾಗಿದೆ.
ಇನ್ನು ಪ್ರಸ್ತುತ ನಾಯ್ಡು ಕುಟುಂಬ ವಿದೇಶ ಪ್ರವಾಸದಲ್ಲಿದ್ದು, ಅವರ ನಿವಾಸಕ್ಕೆ ಈ ನೋಟಿಸ್ ಅನ್ನು ಅಧಿಕಾರಿಗಳು ಅಂಟಿಸಿದ್ದಾರೆ ಎನ್ನಲಾಗಿದೆ.
ಈ ಬಗ್ಗೆ ಮಾಧ್ಯಮಗಳಿಗೆ ಮಾಹಿತಿ ನೀಡಿರುವ ಸಿಆರ್ ಡಿಎ ಸಹಾಯಕ ಆಯುಕ್ತ ನರೇಂದ್ರ ನಾಥ್ ಅವರು, ಅಕ್ರಮ ಭೂ ಒತ್ತವರಿಗೆ ಸಂಬಂಧಿಸಿದಂತೆ ಪ್ರಾಧಿಕಾರ ಗಂಭೀರವಾಗಿದ್ದು, ಆಡಳಿತದಲ್ಲಿ ಪಾರದರ್ಶಕತೆ ತರುವುದು ನಮ್ಮ ಉದ್ದೇಶ. ಯಾವುದೇ ಒತ್ತಡ, ರಾಜಕೀಯ ಒತ್ತಾಯಕ್ಕೆ ಮಣಿಯುವುದಿಲ್ಲ ಎಂಬ ಸಂದೇಶವನ್ನು ಜನರಿಗೆ ರವಾನಿಸಬೇಕು ಎಂದು ಹೇಳಿದರು.
ಇದಕ್ಕಾಗಿ ಪ್ರಾಧಿಕಾರ ಒಂದು ವಾರ ಕಾಲಾವಕಾಶ ನೀಡಿದ್ದು. ಈ ಒಂದು ವಾರದೊಳಗೆ ಉತ್ತರಿಸದಿದ್ದರೆ, ಕಟ್ಟಡ ತೆರವುಗೊಳಿಸುವ ಕುರಿತು ನಿರ್ಧರಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದೆ. ಈ ಹಿಂದೆ ವೈಎಸ್ ಆರ್ ಕಾಂಗ್ರೆಸ್ ಪಕ್ಷ ಕಾರ್ಯಕರ್ತರು, ಮುಖಂಡರು ಮಾಜಿ ಸಿಎಂ ನಾಯ್ಡು ಅಧಿಕೃತ ನಿವಾಸ ಅನಧಿಕೃತ ಎಂದು ಆರೋಪಿಸಿದ್ದರು.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos