ನವದೆಹಲಿ: ಬಾಂಬ್ ಗಳನ್ನು ಹೊತ್ತು ಸಾಗುತ್ತಿದ್ದ ಜಾಗ್ವಾರ್ ಯುದ್ಧ ವಿಮಾನಕ್ಕೆ ಹಕ್ಕಿಗಳು ಡಿಕ್ಕಿ ಹೊಡೆದ ಪರಿಣಾಮ ಯುವ ಪೈಲಟ್ ತಮ್ಮ ಜೀವವನ್ನೇ ಪಣಕ್ಕಿಟ್ಟು ಸಂಭವಿಸಬೇಕಿದ್ದ ದೊಡ್ಡ ದುರಂತವನ್ನು ತಡೆದಿದ್ದಾರೆ.
ಭಾರತೀಯ ವಾಯುಸೇನೆಗೆ ಸೇರಿದ ಜಾಗ್ವಾರ್ ಯುದ್ಧ ವಿಮಾನ ಅಂಬಾಲಾ ವಾಯುನೆಲೆಯಿಂದ ಆಗಸಕ್ಕೆ ಹಾರಿತ್ತು. ಈ ವೇಳೆ ಹಕ್ಕಿಗಳ ಗುಂಪು ಡಿಕ್ಕಿ ಹೊಡೆದ ಪರಿಣಾಮ ಎರಡು ಇಂಜಿನ್ ಗಳ ಪೈಕಿ ಒಂದು ಇಂಜಿನ್ ಸ್ಥಗಿತಗೊಂಡಿದೆ. ಇದನ್ನು ಅರಿತ ಪೈಲಟ್ ಕೂಡಲೇ ವಿಮಾನದಲ್ಲಿದ್ದ ಹೆಚ್ಚುವರಿ ಎರಡು ಇಂಧನ ಟ್ಯಾಂಕ್ ಮತ್ತು ಪ್ರ್ಯಾಕ್ಟೀಸ್ ಬಾಂಬ್ ಗಳನ್ನು ನೆಲಕ್ಕೆ ಎಸೆದು ಸುರಕ್ಷಿತವಾಗಿ ವಿಮಾನವನ್ನು ಲ್ಯಾಂಡ್ ಮಾಡಿದ್ದಾರೆ.
ವಿಮಾನ ಸ್ಫೋಟಗೊಳ್ಳುತ್ತದೆ ಎಂದು ಪೈಲಟ್ ಏನಾದರೂ ಹೆದರಿ ವಿಮಾನದಿಂದ ಹೊರಕ್ಕೆ ಹಾರಿದ್ದರೆ ವಿಮಾನ ವಾಯುನೆಲೆಯ ಪಕ್ಕದಲ್ಲಿದ್ದ ಮನೆಗಳ ಮೇಲೆ ಬೀಳುವ ಸಾಧ್ಯತೆ ಇತ್ತು. ಅಲ್ಲದೆ ಸ್ಫೋಟಕಗಳು ತುಂಬಿಕೊಂಡಿದ್ದರಿಂದ ದೊಡ್ಡ ಅನಾಹುತವೇ ಸಂಭವಿಸುತ್ತಿತ್ತೇನೋ. ಆದರೆ ಅದ್ಭುತ ಕಾರ್ಯಕ್ಷಮತೆ, ವೃತ್ತಿಪರತೆಯಿಂದ ಪೈಲಟ್ ವಿಮಾನವನ್ನು ಸುರಕ್ಷಿತವಾಗಿ ಲ್ಯಾಂಡ್ ಮಾಡಿದ್ದಾರೆ.
ಇನ್ನು ಸಾಹಸ ಪ್ರದರ್ಶಿಸಿ ವಿಮಾನವನ್ನು ಸುರಕ್ಷಿತವಾಗಿ ಲ್ಯಾಂಡ್ ಮಾಡಿಸಿದ ಪೈಲಟ್ ಅನ್ನು ವಾಯುಸೇನೆ ಅಧಿಕಾರಿಗಳು ಪ್ರಶಂಸಿಸಿದ್ದಾರೆ.