ಪ್ರಯಾಗ್ ರಾಜ್: ಉತ್ತರ ಪ್ರದೇಶದಲ್ಲಿ ನಡೆಯುತ್ತಿರುವ ಮಹಾ ಕುಂಭಮೇಳಕ್ಕೆ ಇಂದು ಕೊನೆಯ ದಿನವಾಗಿದ್ದು, ಕೊನೆಯ ಶಾಹಿ ಸ್ನಾನ ಮಾಡಲು ಸಂಗಮದತ್ತ ಇಂದು ಒಂದು ಕೋಟಿಗೂ ಅಧಿಕ ಭಕ್ತರು ಆಗಮಿಸುವ ನಿರೀಕ್ಷೆ ಇದೆ.
ಮಹಾಶಿವರಾತ್ರಿಯ ಶುಭದಿನದಂದು ಕೊನೆಯ ಶಾಹಿ ಸ್ನಾನದೊಂದಿಗೆ ಉತ್ತರ ಪ್ರದೇಶದ ಪ್ರಯಾಗ್ರಾಜ್ನಲ್ಲಿ ಕುಂಭ ಮೇಳ ಸಂಪನ್ನವಾಗಲಿದೆ. ಸೋಮವಾರ ಕೊನೆಯ ಪುಣ್ಯಸ್ನಾನದಲ್ಲಿ ಮಿಂದು ಪುನೀತರಾಗಲು ಸುಮಾರು ಒಂದು ಕೋಟಿ ಭಕ್ತರು ಪ್ರಯಾಗ್ರಾಜ್ಗೆ ಆಗಮಿಸುವ ನಿರೀಕ್ಷೆಯಿದೆ. ಗಂಗಾ, ಯಮುನಾ ಮತ್ತು ಸರಸ್ವತಿ ನದಿಗಳ ತ್ರಿವೇಣಿ ಸಂಗಮವಾದ ಪ್ರಯಾಗ್ರಾಜ್ನಲ್ಲಿ ಜನವರಿ 15ರ ಸಂಕ್ರಾಂತಿಯಂದು ಆರಂಭವಾದ ಕುಂಭಮೇಳದಲ್ಲಿ ಇದುವರೆಗೂ 22 ಕೋಟಿಗೂ ಅಧಿಕ ಭಕ್ತರು ಪುಣ್ಯ ಸ್ನಾನ ಕೈಗೊಂಡಿದ್ದಾರೆ.
ರಾಷ್ಟ್ರಪತಿ ರಾಮನಾಥ್ ಕೋವಿಂದ್, ಪ್ರಧಾನಿ ನರೇಂದ್ರ ಮೋದಿ, ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್, ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಸೇರಿದಂತೆ ಹಲವು ಗಣ್ಯರು ಪುಣ್ಯಸ್ನಾನ ಕೈಗೊಂಡಿದ್ದಾರೆ. ಸ್ವಚ್ಛತೆ, ಅಚ್ಚುಕಟ್ಟಾದ ವ್ಯವಸ್ಥೆ ಹಾಗೂ ಭದ್ರತಾ ವ್ಯವಸ್ಥೆ ಕಲ್ಪಿಸಿದ್ದ ಉತ್ತರ ಪ್ರದೇಶ ಸರಕಾರ ಜನರ ಪ್ರಶಂಸೆಗೆ ಪಾತ್ರವಾಗಿದೆ. ಕುಂಭ ಮೇಳದಲ್ಲಿ ಒಟ್ಟು ಆರು ವಿಶೇಷ ದಿನಗಳಂದು ಪವಿತ್ರ ಸ್ನಾನ ನಡೆಯುತ್ತದೆ. ಮಕರ ಸಂಕ್ರಾಂತಿ (ಜನವರಿ 15), ಮೌನಿ ಅಮವಾಸ್ಯೆ (ಫೆಬ್ರವರಿ 4) ಮತ್ತು ವಸಂತ ಪಂಚಮಿ (ಫೆಬ್ರವರಿ19) ಎಂದು ಶಾಹೀ ಸ್ನಾನ ಹಾಗೂ ಪುಷ್ಯ ಹುಣ್ಣಿಮೆ (ಜನವರಿ 21) ಮತ್ತು ಮಾಘಿ ಹುಣ್ಣಿಮೆ (ಫೆಬ್ರವರಿ19) ಎಂದು ಪರ್ವ ಸ್ನಾನ ನಡೆದಿದೆ.
ಇನ್ನು ಕೊನೆಯ ದಿನವಾದ ಇಂದು ನಿರೀಕ್ಷೆಗೂ ಮೀರಿ ಭಕ್ತರು ಆಗಮಿಸುವ ನಿರೀಕ್ಷೆ ಇದ್ದು, ಇದೇ ಕಾರಣಕ್ಕೆ ಭದ್ರತೆ ಕೂಡ ಹೆಚ್ಚಳ ಮಾಡಲಾಗಿದೆ. ಈ ಬಗ್ಗೆ ಮಾತನಾಡಿರುವ ಉತ್ತರ ಪ್ರದೇಶ ಪೊಲೀಸ್ ಮಹಾನಿರ್ದೇಶಕ ಒ.ಪಿ.ಸಿಂಗ್ ಅವರು, 'ಕೊನೆಯ ದಿನ ಯಾವುದೇ ಅಹಿತಕರ ಘಟನೆ ನಡೆಯದಂತೆ ನೋಡಿಕೊಳ್ಳಲು ಬಿಗಿ ಭದ್ರತೆ ಕೈಗೊಳ್ಳಲಾಗಿದೆ. ಸುಮಾರು 20,000 ಪೊಲೀಸ್ ಸಿಬ್ಬಂದಿ, 6,000 ಹೋಮ್ಗಾರ್ಡ್ಸ್, 40 ಪೊಲೀಸ್ ಠಾಣೆಗಳು, 58 ಹೊರ ಠಾಣೆಗಳು, ಕೇಂದ್ರ ಮೀಸಲು ಪಡೆಯ 80 ತುಕಡಿಗಳು ಮತ್ತು ಪಿಎಸಿಯ 20 ತುಕುಡಿಗಳನ್ನು ನಿಯೋಜಿಸಲಾಗಿದೆ'' ಎಂದು ತಿಳಿಸಿದ್ದಾರೆ.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos