ದೇಶಾದ್ಯಂತ ಮೂತ್ರ ಸಂಗ್ರಹಿಸಿದರೆ ಯೂರಿಯಾ ಆಮದಿಗೆ ಮುಕ್ತಿ: ಸಚಿವ ಗಡ್ಕರಿಯ ಹೊಸ ಐಡಿಯಾ!
ನಾಗ್ಪುರ: ತಮ್ಮ ವಿನೂತನ ಐಡಿಯಾಗಳಿಂದ ಹೆಚ್ಚು ಸುದ್ದಿಯಲ್ಲಿರುವ ನಿತಿನ್ ಗಡ್ಕರಿ, ಅಂಥಹದ್ದೇ ಮತ್ತೊಂದು ಉಪಾಯದೊಂದಿಗೆ ಬಂದಿದ್ದಾರೆ.
ಕೃಷಿಗಾಗಿ ಹೆಚ್ಚಿನ ಪ್ರಮಾಣದಲ್ಲಿ ರಾಸಾಯನಿಕ ಗೊಬ್ಬರ ಆಮದಾಗುತ್ತಿದ್ದು, ಇದನ್ನು ತಡೆಗಟ್ಟುವುದಕ್ಕೆ ಗಡ್ಕರಿ ವಿನೂತನವಾದ ಕಲ್ಪನೆಯೊಂದನ್ನು ಪ್ರಸ್ತಾಪಿಸಿದ್ದಾರೆ. ಅದೇನೆಂದರೆ ಮೂತ್ರದ ಶೇಖರಣೆ! ಹೌದು ಕೇಳುವುದಕ್ಕೆ ಸ್ವಲ್ಪ ವಿಚಿತ್ರ ಎನಿಸಿದರೂ ಗಡ್ಕರಿ ಇಂಥದ್ದೊಂದು ವಿಚಿತ್ರವಾದ ಕಲ್ಪನೆಯೊಂದನ್ನು ಸಂಶೋಧಕರಿಗೆ ಸಲಹೆ ನೀಡಿದ್ದಾರೆ.
ನಾಗ್ಪುರ ಪುರಸಭೆ ಕಾರ್ಪೊರೇಷನ್ ನ ಮೇಯರ್ ಇನೋವೇಷನ್ ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿರುವ ನಿತಿನ್ ಗಡ್ಕರಿ, ವಿಮಾನ ನಿಲ್ದಾಣಗಳಲ್ಲಿ ಮೂತ್ರವನ್ನು ಶೇಖರಿಸಲು ಸಲಹೆ ನೀಡಿದ್ದೇನೆ. ನಾವು ಹೆಚ್ಚಿನ ಪ್ರಮಾಣದಲ್ಲಿ ಯೂರಿಯಾವನ್ನು ಆಮದು ಮಾಡಿಕೊಳ್ಳುತ್ತೇವೆ. ಆದರೆ ನಾವು ದೇಶದ ಜನತೆ ಮೂತ್ರ ಸಂಗ್ರಹಣೆ ಮಾಡಿದರೆ ಯೂರಿಯಾ ಆಮದು ಮಾಡಿಕೊಳ್ಳುವ ಅಗತ್ಯವೇ ಇರುವುದಿಲ್ಲ, ಮೂತ್ರದಲ್ಲಿ ವಿಶೇಷ ಸಾಮರ್ಥ್ಯವಿದೆ, ಮನುಷ್ಯನ ಮೂತ್ರದಿಂದ ಜೈವಿಕ ಇಂಧನವನ್ನೂ ತಯಾರಿಸಬಬಹುದು ಯಾವುದೂ ವ್ಯರ್ಥವಾಗುವುದಿಲ್ಲ. ಅದರಿಂದ ಅಮೋನಿಯಂ ಸಲ್ಫೇಟ್ ಹಾಗೂ ನೈಟ್ರೋಜನ್ ಲಭ್ಯವಾಗುತ್ತದೆ
ನನ್ನ ವಿನೂತನ ಕಲ್ಪನೆಗಳಿಗೆ ಯಾರೂ ಸಹಕಾರ ನೀಡುವುದಿಲ್ಲ, ಕಾರ್ಪೊರೇಷನ್ ಸಹ ನನ್ನ ಕಲ್ಪನೆಗಳಿಗೆ ಸಹಕರಿಸುವುದಿಲ್ಲ ಏಕೆಂದರೆ ಸರ್ಕಾರದಲ್ಲಿರುವ ಜನರನ್ನು ಆಚೆ ಈಚೆ ನೋಡದೇ ನುಗ್ಗುವ ಹೋರಿಗಳಂತೆ ತಯಾರು ಮಾಡಲಾಗುತ್ತದೆ ಎಂದು ಇದೇ ಕಾರ್ಯಕ್ರಮದಲ್ಲಿ ನಿತಿನ್ ಗಡ್ಕರಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ನಿತಿನ್ ಗಡ್ಕರಿ ಮೂತ್ರದಿಂದ ಗೊಬ್ಬರ ಮಾಡುವ ಕಲ್ಪನೆಯನ್ನು ಕೇವಲ ಸಲಹೆಗೆ ಸೀಮಿತ ಮಾಡದೇ ದೆಹಲಿಯಲ್ಲಿರುವ ತಮ್ಮ ಗಾರ್ಡನ್ ನಲ್ಲಿ ಪ್ರಾಯೋಗಿಕವಾಗಿ ಜಾರಿಗೆ ತಂದಿದ್ದಾರೆ.
ಈ ವೇಳೆ ಮಾನವನ ತಲೆಕೂದಲು ಬಳಸಿ ಅಮೈನೊ ಆ್ಯಸಿಡ್ ಉತ್ಪಾದನೆಯ ವಿಚಾರವನ್ನು ಪ್ರಸ್ತಾಪಿಸಿರುವ ಅವರು, ನಾಗ್ಪುರದಲ್ಲಿ ಜಾಸ್ತಿ ಪ್ರಮಾಣದಲ್ಲಿ ತಲೆಕೂದಲು ಸಿಗದ ಕಾರಣ ನಾವು ಪ್ರತಿ ತಿಂಗಳು ತಿರುಪತಿಯಿಂದ 5 ಟ್ರಕ್ ತಲೆಕೂದಲನ್ನು ತರುತ್ತೇವೆ ಎಂದು ತಿಳಿಸಿದರು. ತಲೆಕೂದಲಿನ ಪ್ರಯೋಗ ಯಶಸ್ವಿಯಾದ ಬಳಿಕ ಅಮೈನೊ ಆ್ಯಸಿಡ್ ಉತ್ಪಾದನೆ ಶೇ.25 ರಷ್ಟು ಹೆಚ್ಚಾಗಿದೆ. ನಾವು ಈಗ ವಿದೇಶಕ್ಕೆ ಅಮೈನೊ ಆ್ಯಸಿಡ್ ಮಾರಾಟ ಮಾಡುತ್ತೇವೆ. ದುಬೈ ಸರ್ಕಾರ 180 ಕಂಟೈನರ್ ಬಯೋ ಗೊಬ್ಬರಕ್ಕೆ ಆರ್ಡರ್ ಮಾಡಿದೆ ಎಂದು ತಿಳಿಸಿದರು.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos