ಜೈಪುರ: ಭಾರತೀಯ ವಾಯುಗಡಿಯೊಳಗೆ ನುಸುಳಲು ಯತ್ನಿಸಿದ ಪಾಕಿಸ್ತಾನದ ಡ್ರೋಣ್ ವೊಂದನ್ನು ಭದ್ರತಾ ಪಡೆಗಳು ಅಟ್ಟಾಡಿಸಿ ಹೊಡೆದು ಹಾಕಿದ್ದಾರೆ ಎಂದು ತಿಳಿದುಬಂದಿದೆ.
ಕಳೆದ ಸೋಮವಾರವಷ್ಟೇ ರಾಜಸ್ಥಾನದ ಭಾರತ-ಪಾಕಿಸ್ತಾನ ಅಂತಾರಾಷ್ಟ್ರೀಯ ಗಡಿಭಾಗದಲ್ಲಿ ಸೋಮವಾರ ಬೆಳಗ್ಗೆ 11.30ರ ಹೊತ್ತಿಗೆ ಹಾರಾಡುತ್ತಿದ್ದ ಪಾಕಿಸ್ತಾನದ ಡ್ರೋಣ್ನ್ನು ಭಾರತೀಯ ವಾಯುಪಡೆ ವಿಮಾನ ಹೊಡೆದುರುಳಿಸಿತ್ತು. ಇದರ ಬೆನ್ನಲ್ಲೇ ಪಾಕಿಸ್ತಾನದ ಮತ್ತೊಂದು ಡ್ರೋಣ್ ಭಾರತೀಯ ಗಡಿಯೊಳಗೆ ನುಸುಳಲು ಯತ್ನಿಸಿದ್ದು, ಭದ್ರತಾ ಪಡೆಗಳ ಕರ್ತವ್ಯ ಪ್ರಜ್ಞೆಯಿಂದಾಗಿ ಡ್ರೋಣ್ ಅನ್ನು ಹೊಡೆದುರುಳಿಸಲಾಗಿದೆ.
ಭಾರತವನ್ನು ಪ್ರವೇಶಿಸಲು ಯತ್ನಿಸಿರುವ 5ನೇ ಡ್ರೋಣ್ ಇದಾಗಿದ್ದು, ಗಂಗಾನಗರ ಅಂತಾರಾಷ್ಟ್ರೀಯ ಗಡಿಯಲ್ಲಿ ಭಾರತೀಯ ಪ್ರದೇಶವನ್ನು ನಿನ್ನೆ ಸಂಜೆ 7.30ರ ವೇಳೆಗೆ ಪ್ರವೇಶಿಸಲು ಯತ್ನಿಸಿದೆ. ಅನುಮಾನಾಸ್ಪದ ಡ್ರೋಣ್ ಕಂಡ ನಂತರ ಸಿಬ್ಬಂದಿ ಫೈರಿಂಗ್ ನಡೆಸಿ ಅದನ್ನು ಹೊಡೆದುರುಳಿಸಿದ್ದಾರೆ.
ನಿನ್ನೆಯಷ್ಟೇ ಇದೇ ರಾಜಸ್ತಾನದ ಶ್ರೀರಂಗನಗರದ ಸಮೀಪ ಹಿಂದುಮಲ್ಕೋಟ್ ಅಂತಾರಾಷ್ಟ್ರೀಯ ಗಡಿಯಲ್ಲಿ ಮುಂಜಾನೆ 5 ಗಂಟೆ ಹೊತ್ತಿನಲ್ಲಿ ಪಾಕಿಸ್ತಾನ ಮೂಲದ ಡ್ರೋಣ್ ವಾಯುಗಡಿ ಉಲ್ಲಂಘನೆ ಮಾಡಿ ಭಾರತದೊಳಗೆ ಪ್ರವೇಶಿಸಲು ಯತ್ನಿಸಿತ್ತು. ಈ ವೇಳೆ ಬಿಎಸ್ಎಫ್ ಯೋಧರು ಗುಂಡಿನ ದಾಳಿ ನಡೆಸಿ ಹಿಮ್ಮೆಟ್ಟಿಸಿದ್ದರು.