ಲಖನೌ: ಉತ್ತರ ಪ್ರದೇಶದ ಎಲ್ಲ 80 ಕ್ಷೇತ್ರಗಳಲ್ಲೂ ಕಾಂಗ್ರೆಸ್ ಪಕ್ಷ ತನ್ನ ಅಭ್ಯರ್ಥಿಗಳನ್ನು ಕಣಕ್ಕಿಳಿಸಬಹುದು. ಈ ಬಗ್ಗೆ ತಮಗೇನೂ ತಕರಾರು ಇಲ್ಲ ಎಂದು ಬಿಎಸ್ ಪಿ ಮುಖ್ಯಸ್ಥೆ ಮಾಯಾವತಿ ಹೇಳಿದ್ದಾರೆ.
ಈ ಬಗ್ಗೆ ಸರಣಿ ಟ್ವೀಟ್ ಮಾಡಿರುವ ಮಾಯಾವತಿ, ಬಿಜೆಪಿ ಮತ್ತು ಅದರ ಮೈತ್ರಿ ಕೂಟವನ್ನು ಮಣಿಸಲು ಎಸ್ ಪಿ ಮತ್ತು ಬಿಎಸ್ ಪಿ ಮೈತ್ರಿ ಕೂಟ ಶಕ್ತವಾಗಿದೆ. ನಮ್ಮ ಸ್ವಂತ ಬಲದಿಂದಲೇ ನಾವು ಬಿಜೆಪಿಯನ್ನು ಮಣಿಸುತ್ತೇವೆ. ಇದೇ ವೇಳೆ 7 ಕ್ಷೇತ್ರಗಳಲ್ಲಿ ಅಭ್ಯರ್ಥಿಗಳನ್ನು ಕಣಕ್ಕಿಳಿಸದೇ ಇರಲು ನಿರ್ಧರಿಸಿರುವ ಕಾಂಗ್ರೆಸ್ ಪಕ್ಷದ ನಿರ್ಧಾರವನ್ನು ಪರೋಕ್ಷವಾಗಿ ಟೀಕಿಸಿರುವ ಮಾಯಾವತಿ, ಇಂತಹ ನಿರ್ಧಾರಗಳಿಂದ ಕಾರ್ಯಕರ್ತರ ದಾರಿ ತಪ್ಪಿಸಬಾರದು. ಇದರಿಂದ ಅನಗತ್ಯ ಗೊಂದಲ ವೇರ್ಪಡುತ್ತದೆ. ಕಾಂಗ್ರೆಸ್ ಪಕ್ಷ ಬೇಕಿದ್ದರೆ ಎಲ್ಲ 80 ಕ್ಷೇತ್ರಗಳಲ್ಲೂ ತನ್ನ ಅಭ್ಯರ್ಥಿಗಳನ್ನು ಕಣಕ್ಕಿಳಿಸಲಿ. ಈ ಬಗ್ಗೆ ತಮಗೆ ಯಾವುದೇ ರೀತಿಯ ತಕರಾರಿಲ್ಲ ಎಂದು ಹೇಳಿದ್ದಾರೆ.
ಉತ್ತರ ಪ್ರದೇಶದಲ್ಲಿ ಎಸ್ ಪಿ- ಬಿಎಸ್ ಪಿ ಮತ್ತು ಆರ್ ಎಲ್ ಡಿ ಮೈತ್ರಿಕೂಟ ಈಗಾಗಲೇ ಸೀಟು ಹಂಚಿಕೆಯನ್ನು ಅಂತಿಮಗೊಳಿಸಿದೆ. ಹೀಗಾಗಿ ಈ ಹಂತದಲ್ಲಿ ಅನಗತ್ಯ ಗೊಂದಲ ಬೇಡ ಎಂದು ಮಾಯಾವತಿ ಹೇಳಿದ್ದಾರೆ.
ಇನ್ನು ಕೇಂದ್ರದ ಗದ್ದುಗೆ ಹಿಡಿಯಲು ಪ್ರಮುಖ ಪಾತ್ರವಹಿಸುವ ಉತ್ತರಪ್ರದೇಶದ ಮೇಲೆ ಕಾಂಗ್ರೆಸ್, ಬಿಜೆಪಿ ಸೇರಿದಂತೆ ಎಸ್ಪಿ-ಬಿಎಸ್ಪಿ ಪಕ್ಷದ ಕಣ್ಣು ನೆಟ್ಟಿದೆ. ಈಗಾಗಲೇ ಮಾಜಿ ಸಿಎಂ ಮಾಯಾವತಿ ನೇತೃತ್ವದ ಬಹುಜನ ಸಮಾಜ ಪಕ್ಷ ಮತ್ತು ಸಮಾಜವಾದಿ ಪಕ್ಷ ಜಂಟಿಯಾಗಿ ಚುನಾವಣೆ ಎದುರಿಸುತ್ತಿದ್ದು, ಕಾಂಗ್ರೆಸ್ ಮತ್ತು ಬಿಜೆಪಿ ಎರಡು ರಾಷ್ಟ್ರೀಯ ಪಕ್ಷಗಳಿಗೆ ದಂಗುಬಡಿಸಿದಂತಾಗಿದೆ.
ಇನ್ನು ಈಗಾಗಲೇ ಮಾಯಾವತಿ ಮತ್ತು ಅಖಿಲೇಶ್ ಯಾದವ್ ಅವರು ತಲಾ 38-37 ಸೀಟು ಗಳಲ್ಲಿ ಮೈತ್ರಿ ಮೂಲಕ ಚುನಾವಣೆಗೆ ಸ್ಪರ್ಧಿಸುವುದಾಗಿ ಹೇಳಿದ್ದಾರೆ. ಅಲ್ಲದೇ ರಾಯಬರೇಲಿ ಮತ್ತು ಅಮೇಥಿ ಕ್ಷೇತ್ರಗಳನ್ನು ಕಾಂಗ್ರೆಸ್ಗೆ ಬಿಟ್ಟುಕೊಂಡಿದ್ದು, ಯಾವುದೇ ಮೈತ್ರಿ ಅಭ್ಯರ್ಥಿಗಳನ್ನು ಹಾಕುವುದಿಲ್ಲ ಎಂದು ಹೇಳಿದ್ದಾರೆ. ಇದಾದ ಬೆನ್ನಲ್ಲೇ ಕಾಂಗ್ರೆಸ್ ಉತ್ತರ ಪ್ರದೇಶದಲ್ಲಿ ಏಕಾಂಗಿಯಾಗಿ ಸ್ಪರ್ಧಿಸುವುದಾಗಿ ಘೋಷಿಸಿದೆ. ಜತೆಗೆ ಲೋಕಸಭೆ ಚುನಾವಣೆಯಲ್ಲಿ ಉತ್ತರಪ್ರದೇಶದ ಒಟ್ಟು 80 ಕ್ಷೇತ್ರಗಳ ಪೈಕಿ 7 ಕ್ಷೇತ್ರಗಳಲ್ಲಿ ಸ್ಪರ್ಧಿಸದೇ ಇರಲು ಕಾಂಗ್ರೆಸ್ ನಿರ್ಧರಿಸಿದೆ. ಆದರೆ, ಈ ಕ್ಷೇತ್ರಗಳನ್ನು ಸಮಾಜವಾದಿ ಪಕ್ಷ-ಬಹುಜನ ಸಮಾಜ ಪಕ್ಷಗಳ ಮೈತ್ರಿಗೆ ಬಿಟ್ಟುಕೊಡಲು ನಿರ್ಣಯಿಸಿದೆ ಎನ್ನಲಾಗಿದೆ.