ನವದೆಹಲಿ: ಮಹತ್ವದ ಬೆಳವಣಿಗೆಯಲ್ಲಿ ಪುಲ್ವಾಮ ಉಗ್ರ ದಾಳಿ ತನಿಖೆಗೆ ಮಹತ್ವದ ತಿರುವು ದೊರೆತಿದ್ದು, ದೆಹಲಿ ಪೊಲೀಸರು ನಡೆಸಿದ ವಿಶೇಷ ಕಾರ್ಯಾಚರಣೆಯಲ್ಲಿ ಜೈಶ್ ಉಗ್ರ ಸಂಘಟನೆಯ ಪ್ರಮುಖ ಉಗ್ರ ಸಜ್ಜದ್ ಖಾನ್ ಬಂಧನಕ್ಕೀಡಾಗಿದ್ದಾನೆ.
ಕಳೆದ ಫೆಬ್ರವರಿಯಲ್ಲಿ ಪುಲ್ವಾಮದಲ್ಲಿ ಸೇನಾ ವಾಹನಗಳ ಮೇಲೆ ನಡೆದಿದ್ದ, ಆತ್ಮಹತ್ಯಾ ದಾಳಿಯಲ್ಲಿ 44 ಸೈನಿಕರು ಹುತಾತ್ಮರಾಗಿದ್ದರು. ಪಾಕಿಸ್ತಾನ ಮೂಲದ ಕುಖ್ಯಾತ ಜೈಶ್ ಇ ಮೊಹಮದ್ ಉಗ್ರ ಸಂಗಟನೆ ತನ್ನ ಆತ್ಮಹತ್ಯಾ ದಾಳಿಕೋರನ ಮೂಲಕ ಸುಮಾರು 500 ಕೆಜಿ ಸ್ಫೋಟಕ ತುಂಬಿದ ವಾಹನವನ್ನು ಸೈನಿಕರ ವಾಹನಗಳತ್ತ ನುಗ್ಗಿಸಿ ಸ್ಫೋಟಿಸಿತ್ತು. ಅಲ್ಲದೆ ಈ ದಾಳಿ ಬಳಿಕ ದಾಳಿಯ ಹೊಣೆಯನ್ನೂ ಹೊತ್ತುಕೊಂಡಿತ್ತು.
ಇದೀಗ ಈ ದಾಳಿಗೆ ಸಂಬಂಧಿಸಿದಂತೆ ದೆಹಲಿ ಪೊಲೀಸರು ಸಜ್ಜದ್ ಖಾನ್ ಎಂಬ ಜೈಶ್ ಉಗ್ರನನ್ನು ಬಂಧಿಸಿದ್ದಾರೆ. ದೆಹಲಿಯ ಕೆಂಪುಕೋಟೆಯ ಸಮೀಪದಲ್ಲಿ ಈತನನ್ನು ಬಂಧಿಸಿದ್ದು, ರಹಸ್ಯ ಸ್ಥಳದಲ್ಲಿ ತೀವ್ರ ವಿಚಾರಣೆ ನಡೆಸಲಾಗುತ್ತಿದೆ ಎಂದು ತಿಳಿದುಬಂದಿದೆ.
ಮೂಲಗಳ ಪ್ರಕಾರ ದೆಹಲಿ ಪೊಲೀಸ್ ಇಲಾಖೆಯ ವಿಶೇಷ ಪಡೆಯ ಅಧಿಕಾರಿಗಳು ಈ ಕಾರ್ಯಾಚರಣೆ ನಡೆಸಿದ್ದು, ಕಳೆದೊಂದು ವಾರದಿಂದ ಈತನ ಚಲನಲನಗಳ ಕುರಿತು ನಿಗಾ ಇರಿಸಿದ್ದ ಅಧಿಕಾರಿಗಳು ಇಂದು ಈತನನ್ನು ಬಂಧಿಸಿದ್ದಾರೆ.
ಇನ್ನು ಬಂಧಿತ ಜೈಶ್ ಉಗ್ರ ಸಜ್ಜದ್ ಖಾನ್ ಪುಲ್ವಾಮ ಉಗ್ರ ದಾಳಿಯ ಮಾಸ್ಟರ್ ಮೈಂಡ್ ಮುದಸ್ಸೀರ್ ನ ಆಪ್ತ ಎಂದು ಹೇಳಲಾಗುತ್ತಿದೆ. ಇದೇ ಮುದಸ್ಸೀರ್ ನನ್ನು ಈ ಹಿಂದೆ ಭಾರತೀಯ ಸೇನೆ ಅದೇ ಪುಲ್ವಾಮ ಎನ್ ಕೌಂಟರ್ ನಲ್ಲಿ ಹೊಡೆದು ಹಾಕಿತ್ತು.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos