ದೇಶ

ಬಾಹ್ಯಾಕಾಶದಲ್ಲೇ ಲೈವ್ ಸ್ಯಾಟೆಲೈಟ್ ಹೊಡೆದುರುಳಿಸಿದ ವಿಜ್ಞಾನಿಗಳು, ಭಾರತದ ಮಹತ್ವದ ಸಾಧನೆ: ಪ್ರಧಾನಿ ಮೋದಿ

Srinivasamurthy VN
ನವದೆಹಲಿ: ಬಾಹ್ಯಾಕಾಶ ಕ್ಷೇತ್ರದಲ್ಲಿ ಭಾರತೀಯ ವಿಜ್ಞಾನಿಗಳು ಮತ್ತೊಂದು ಮಹತ್ವದ ಸಾಧನೆ ಮಾಡಿದ್ದು ಬಾಹ್ಯಾಕಾಶದಲ್ಲೇ ಲೈವ್ ಸ್ಯಾಟೆಲೈಟ್ ವೊಂದನ್ನು ಹೊಡೆದುರುಳಿಸುವ ಮೂಲಕ ಅತ್ಯಂತ ಅಪರೂಪದ ಸಾಧನೆಯೊಂದನ್ನು ಮಾಡಿದೆ.
ಭಾರತದ ಹೆಮ್ಮೆಯ ರಕ್ಷಣಾ ಮತ್ತು ಸಂಶೋಧನಾ ಸಂಸ್ಥೆ ಡಿಆರ್ ಡಿಒ ಸಹಯೋಗದಲ್ಲಿ ಬಾಹ್ಯಾಕಾಶದ ಲೋ ಅರ್ಥ್ ಆರ್ಬಿಟ್ ನಲ್ಲಿ ಎ-ಸ್ಯಾಟ್ ಆ್ಯಂಟಿ ಸ್ಯಾಟೆಲೈಟ್ ಮಿಸೈಲ್ ಮೂಲಕ ಲೈವ್ ಸ್ಯಾಟೆಲೈಟ್ ಅನ್ನು ಯಶಸ್ವಿಯಾಗಿ ಹೊಡೆದುರುಳಿಸಿದೆ. ಈ ಬಗ್ಗೆ ಪ್ರಧಾನಿ ಮೋದಿ ದೇಶದ ಜನತೆಗೆ ಮಾಹಿತಿ ನೀಡಿದ್ದು, ವಿಜ್ಞಾನಿಗಳಿಗೆ ಧನ್ಯವಾದ ತಿಳಿಸಿದ್ದಾರೆ.
ಪ್ರಧಾನಿ ಮೋದಿ ಭಾಷಣದ ವಿವರ:
'ನಮ್ಮ ವಿಜ್ಞಾನಿಗಳು ಬಾಹ್ಯಾಕಾಶದಲ್ಲಿ 300 ಕಿ.ಮೀ ದೂರ (ಎಲ್‌ಇಓ) (ಲೋ ಅರ್ಥ್ ಆರ್ಬಿಟ್)ದಲ್ಲಿರುವ  ಸಕ್ರಿಯ ಉಪಗ್ರಹವನ್ನು ಹೊಡೆದುರುಳಿಸಿದ್ದಾರೆ. ಕೇವಲ 3 ನಿಮಿಷಗಳಲ್ಲಿ ಯಶಸ್ವಿಯಾಗಿ ಈ ಕಾರ್ಯಾಚರಣೆಯನ್ನು ವಿಜ್ಞಾನಿಗಳು ಯಶಸ್ವಿಗೊಳಿಸಿದ್ದಾರೆ. ಮಿಷನ್ ಶಕ್ತಿ ಎಂಬ ಅತ್ಯಂತ ಕಠಿಣ ಕಾರ್ಯಾಚರಣೆ ಇದಾಗಿತ್ತು. ಅತ್ಯಂತ ಹೆಚ್ಚು ವೆಚ್ಚ ಬಯಸುವ ಈ ಕಾರ್ಯಾಚರಣೆಯನ್ನು ಅತಿ ಕಡಿಮೆ ವೆಚ್ದದಲ್ಲಿ ನಮ್ಮ ವಿಜ್ಞಾನಿಗಳು ಈ ಸಾಧನೆ ಮಾಡಿದ್ದಾರೆ'. 

'ಆ್ಯಂಟಿ ಸೆಟಲೈಟ್‌- (ಎ ಸ್ಯಾಟ್‌) ಕ್ಷಿಪಣಿಯ ಯಶಸ್ದೀ ಪ್ರಯೋಗ ಭಾರತದ ಭದ್ರತೆ ವಿಷಯದಲ್ಲಿ ಮಹತ್ವದ ಸಾಧನೆಯಾಗಿದೆ. ಶತ್ರುದೇಶದ ಉಪಗ್ರಹಗಳನ್ನು ನಾಶಪಡಿಸುವ ಮಹತ್ವದ ಶಕ್ತಿ ಭಾರತಕ್ಕೀಗ ಪ್ರಾಪ್ತವಾಗಿದೆ. ಈ ಸಾಧನೆ ಮಾಡಿದ ಡಿಆರ್‌ಡಿಓ ವಿಜ್ಞಾನಿಗಳಿಗೆ ಅಭಿನಂದನೆಗಳು. ದೇಶದ ಹೆಮ್ಮೆ, ಪ್ರತಿಷ್ಠೆ ಹೆಚ್ಚಿಸಿದ ವಿಜ್ಞಾನಿಗಳಿಗೆ ಅಭಿನಂದನೆಗಳು'  ಎಂದು ಪ್ರಧಾನಿ ಮೋದಿ ಹೇಳಿದರು. 

ಅಂತೆಯೇ 'ಈ ಸಾಧನೆ ಬೇರೆ ಯಾವುದೇ ದೇಶದ ವಿರುದ್ಧವಲ್ಲ, ಬದಲಿಗೆ ನಮ್ಮ ರಕ್ಷಣೆಗಾಗಿ ಅಷ್ಟೆ. ಈ ನೀತಿಯಲ್ಲಿ ಯಾವುದೇ ಬದಲಾವಣೆ ಇಲ್ಲ. ಇಂದು ನಡೆಸಿದ ಈ ಪರೀಕ್ಷೆಯಿಂದ ಯಾವುದೇ ರೀತಿಯಲ್ಲಿ ಅಂತಾರಾಷ್ಟ್ರೀಯ ಕಾನೂನು ಅಥವಾ ಒಪ್ಪಂದಗಳ ಉಲ್ಲಂಘನೆಯಾಗಿಲ್ಲ.  ಈ ಕ್ಷೇತ್ರದಲ್ಲಿ ಶಾಂತಿ ಮತ್ತು ಸುರಕ್ಷೆಯ ವಾತಾವರಣ ಮೂಡಿಸುವುದಕ್ಕಾಗಿ ಬಲಿಷ್ಠ ಭಾರತದ ನಿರ್ಮಾಣ ಅಗತ್ಯವಿದೆ. ನಮ್ಮ ಉದ್ದೇಶ ಯುದ್ಧದ ವಾತಾವರಣ ಸೃಷ್ಟಿಸುವುದಲ್ಲ. ಭಾರತ ಅಂತಾರಾಷ್ಟ್ರೀಯ ಕ್ಷೇತ್ರದಲ್ಲಿ ಮಾಡುವ ಸಾಧನೆಗಳು ಭಾರತದ ಅಭಿವೃದ್ಧಿಗಾಗಿಯೇ ಹೊರತು ಬೇರೆಯವರ ಮೇಲೆ ದಾಳಿಗಲ್ಲ' ಎಂದು ಪ್ರಧಾನಿ ಮೋದಿ ಹೇಳಿದರು. 
SCROLL FOR NEXT