ಚೆನ್ನೈ: ವಾರದ ಹಿಂದಷ್ಟೇ ಬಾಲ್ಯ ವಿವಾಹವೊಂದನ್ನು ತಡೆದಿದ್ದ ವ್ಯಕ್ತಿಯನ್ನು ಆತನ ಪತ್ನಿ ಮತ್ತು ಕುಟುಂಬ ಸದಸ್ಯರ ಎದುರೇ ಬರ್ಬರವಾಗಿ ಹತ್ಯೆ ಮಾಡಿರುವ ಆಘಾತಕಾರಿ ಘಟನೆ ಚೆನ್ನೈನಲ್ಲಿ ನೆಡೆದಿದೆ.
ಹತ್ಯೆಯಾದ ವ್ಯಕ್ತಿ ಕಳೆದ ವಾರ ತಮ್ಮ ಪ್ರದೇಶದ ಅಯನಾವರಂನಲ್ಲಿ ನಡೆಯುತ್ತಿದ್ದ ಬಾಲ್ಯ ವಿವಾಹವನ್ನು ತಡೆದಿದ್ದರು. ಇದೀಗ ಆತನನ್ನು ಶಸ್ತ್ರ ಸಜ್ಜಿತ ವ್ಯಕ್ತಿಗಳ ಗುಂಪು ಕೊಲೆ ಮಾಡಿದ್ದು, ದುಷ್ಕರ್ಮಿಗಳ ದಾಳಿ ತಡೆಯಲು ಯತ್ನಿಸಿದ ಆತನ ಪತ್ನಿ ಸಹ ಗಂಭೀರವಾಗಿ ಗಾಯಗೊಂಡಿದ್ದಾರೆ.
ಹತ್ಯೆಯಾದ ವ್ಯಕ್ತಿ ಅಯನಾವರಂ ನಿವಾಸಿ, 48 ವರ್ಷದ ಜೆಬಸೀಲನ್ ಎಂದು ಗುರುತಿಸಲಾಗಿದ್ದು, ಬಾಲ್ಯ ವಿವಾಹ ತಡೆದದ್ದಕ್ಕೆ ಪ್ರತೀಕರವಾಗಿ ಕೊಲೆ ಮಾಡಲಾಗಿದೆಯೇ ಎಂಬುದರ ಕುರಿತು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಆಟೋ ಚಾಲಕರಾಗಿದ್ದ ಜೆಬಸೀಲನ್ ಅವರು ಮಗಳ ಮದುವೆ ಆರತಕ್ಷತೆಗೆ ಆಟೋದಲ್ಲಿ ತೆರಳುತ್ತಿದ್ದ ವೇಳೆ ದುಷ್ಕರ್ಮಿಗಳ ತಂಡ ದಾಳಿ ಮಾಡಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಸಾರ್ವಜನಿಕವಾಗಿಯೇ ಈ ದಾಳಿ ನಡೆದಿದ್ದು, ಆತನ ಸಂಬಂಧಿಗಳು ಅಸಹಾಯಕರಾಗಿ ನೋಡುತ್ತಿದ್ದರು ಎಂದು ಪೊಲೀಸರು ಹೇಳಿದ್ದಾರೆ.
ಏಪ್ರಿಲ್ 17ರಂದು 16 ವರ್ಷದ ಬಾಲಕಿಗೆ ಮದುವೆ ಮಾಡುತ್ತಿರುವ ವಿಚಾರ ತಿಳಿದು, ಪೊಲೀಸರಿಗೆ ಮಾಹಿತಿ ನೀಡಿದ್ದರು. ಅಲ್ಲದೆ ಪೊಲೀಸರೊಂದಿಗೆ ತಾನೂ ಆಗಮಿಸಿ ಬಾಲ್ಯ ವಿವಾಹವನ್ನು ತಡೆದಿದ್ದರು. ಎರಡು ದಿನಗಳ ಹಿಂದಷ್ಟೇ ಜಬಸೀಲನ್ ಅವರ ಮಗಳ ಮದುವೆ ತಿರುಪತಿಯಲ್ಲಿ ನಡೆದಿತ್ತು. ಮಗಳ ಆರತಕ್ಷತೆಯ ದಿನ ಕೊಲೆ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos