ದೇಶ

ಅಡ್ವಾಣಿ, ಜೋಷಿ ಭೇಟಿಯಾದ ಪ್ರಧಾನಿ ಮೋದಿ, ಅಮಿತ್ ಶಾ ಜೋಡಿ

Sumana Upadhyaya
ನವದೆಹಲಿ: ಲೋಕಸಭಾ ಚುನಾವಣೆಯಲ್ಲಿ ಅಭೂತಪೂರ್ವ ಜಯಗಳಿಸಿದ ಬಳಿಕ ಇಂದು ಪ್ರಧಾನಿ ನರೇಂದ್ರ ಮೋದಿ ಹಾಗೂ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ, ಬಿಜೆಪಿಯ ಹಿರಿಯ ನಾಯಕ ಹಾಗೂ ತಮ್ಮ ರಾಜಕೀಯ ಗುರು ಎಲ್‍ ಕೆ ಅಡ್ವಾಣಿ ಅವರನ್ನು ಭೇಟಿಯಾಗಿ ಆಶೀರ್ವಾದ ಪಡೆದರು.
ಬಿಜೆಪಿಯ ಅಭೂತಪೂರ್ವ ಗೆಲುವು ಸಾಧಿಸಿರುವುದರ ಹಿಂದೆ ಅಡ್ವಾಣಿಯವರ ಕಠಿಣ ಪರಿಶ್ರಮವಿದೆ ಎಂದು ಮೋದಿ ಟ್ವೀಟ್ ಮಾಡಿದ್ದಾರೆ.
"ಗೌರವಾನ್ವಿತ ಅಡ್ವಾಣಿಜಿ ಅವರನ್ನು ಭೇಟಿಯಾದೆ. ಬಿಜೆಪಿಯ ಈ ಯಶಸ್ಸಿನ ಹಿಂದೆ ದಶಕಗಳ ಕಾಲ ಬಿಜೆಪಿಯನ್ನು ಕಟ್ಟಿ ಬೆಳೆಸಿದ ಅಡ್ವಾಣಿಯವರಂತಹ ಶೇಷ್ಟ್ರ ನಾಯಕರು ಇದ್ದಾರೆ ಮತ್ತು ಅವರು ಜನರಿಗೆ ಪಕ್ಷದ ಸಿದ್ಧಾಂತವನ್ನು ತಲುಪಿಸಿದರು" ಎಂದು ಮೋದಿ ಟ್ವೀಟ್ ಮಾಡಿದ್ದಾರೆ.
ಪ್ರಧಾನಿ ಮೋದಿ ಬಿಜೆಪಿಯ ಮತ್ತೋರ್ವ ಹಿರಿಯ ನಾಯಕ ಡಾ.ಎಂ.ಎಂ.ಜೋಷಿ ಅವರನ್ನು ಕೂಡ ಭೇಟಿಯಾದರು.
ಅಡ್ವಾಣಿ ಮತ್ತು ಎಂ.ಎಂ ಜೋಷಿ ಅವರು ಈ ಬಾರಿಯ ಚುನಾವಣೆಯಲ್ಲಿ ಸ್ಪರ್ಧಿಸಿರಲಿಲ್ಲ. ಇಬ್ಬರು ನಾಯಕರಿಗೆ ಸ್ಪರ್ಧಿಸದಂತೆ ಪಕ್ಷ ಸೂಚಿಸಿತ್ತು. ಅಡ್ವಾಣಿ ಈ ಬಗ್ಗೆ ಯಾವುದೇ ಅಪಸ್ವರ ಎತ್ತಿರಲಿಲ್ಲ. ಆದರೆ ಜೋಷಿ ಅವರು ತಮಗೆ ಪಕ್ಷ ಸ್ಪರ್ಧಿಸದಂತೆ ಪತ್ರ ಬರೆದಿದೆ ಎಂದು ಪತ್ರವನ್ನು ಬಹಿರಂಗಪಡಿಸಿದ್ದರು.
ಅಡ್ವಾಣಿ ಮತ್ತು ಮೋದಿ ನಡುವೆ ಸಂಬಂಧ ಹದಗೆಟ್ಟಿದೆ ಎಂಬ ಮಾತುಗಳು ಪಕ್ಷ ಮತ್ತು ಸಾರ್ವಜನಿಕ ವಲಯದಲ್ಲಿ ಕೇಳಿಬಂದಿತ್ತು. ಆದರೆ ಇದೀಗ ಮೋದಿ ಲೋಕಸಭಾ ಚುನಾವಣೆಯಲ್ಲಿ ಸ್ಪಷ್ಟಬಹುಮತ ಪಡೆದ ಬಳಿಕ ಅಡ್ವಾಣಿ ಅವರನ್ನು ನೆನಪಿಸಿಕೊಂಡು ಅವರ ನಿವಾಸಕ್ಕೆ ತೆರಳಿ ಆಶೀರ್ವಾದ ಪಡೆದಿರುವುದು ಕುತೂಹಲಕ್ಕೆ ಕಾರಣವಾಗಿದೆ.
SCROLL FOR NEXT