ವಾರಾಣಸಿ: ನಮ್ಮ ಪೂರ್ವಜರು ಇಡೀ ವಿಶ್ವಕ್ಕೇ ಮಾರ್ಗದರ್ಶನ ನೀಡಿದ್ದರು. ಇಂತಹ ವೈಭವದ ಪರಂಪರೆ, ಸಂಸ್ಕೃತಿಯನ್ನು ನಾವು ಪುನರುಜ್ಜೀವನಗೊಳಿಸಬೇಕಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ಲೋಕಸಭಾ ಚುನಾವಣೆಯಲ್ಲಿ ದೊರೆತ ವಿಜಯದ ಹಿನ್ನೆಲೆಯಲ್ಲಿ ವಾರಾಣಸಿಯ ವಿಶ್ವನಾಥ ಮಂದಿರದಲ್ಲಿ ಪೂಜೆ ಸಲ್ಲಿಸಿದ ಬಳಿಕ ಕ್ಷೇತ್ರದ ಜನತೆಯನ್ನುದ್ದೇಶಿಸಿ ಮಾತನಾಡಿರುವ ಪ್ರಧಾನಿ ನರೇಂದ್ರ ಮೋದಿ ನಾವು ಸಂಸ್ಕೃತಿ-ಪರಂಪರೆ ವೈಜ್ಞಾನಿಕ ನಾವೀನ್ಯತೆಗೆ ಸಮಾನ ಆದ್ಯತೆ ನೀಡುತ್ತೇವೆ ಎಂದು ಹೇಳಿದ್ದಾರೆ.
ಕ್ಷೇತ್ರದ ಮತದಾರರಿಗೆ ಧನ್ಯವಾದ ತಿಳಿಸಿರುವ ಪ್ರಧಾನಿ ಮೋದಿ, ದೇಶ ನನ್ನನ್ನು ಪ್ರಧಾನಿಯಾಗಿ ಆಯ್ಕೆ ಮಾಡಿರಬಹುದು, ಆದರೆ ನಿಮಗೆ ನಾನು ಕಾರ್ಯಕರ್ತನೇ ಆಗಿರುತ್ತೇನೆ, ನನಗೆ ನಿಮ್ಮ ಆದೇಶವೇ ಆದ್ಯತೆಯಾಗಿರುತ್ತದೆ ಎಂದು ಮೋದಿ ಹೇಳಿದ್ದಾರೆ.
ಇದೇ ವೇಳೆ ಬಿಜೆಪಿ ಚುನಾವಣೆ ಎದುರಿಸಿರುವ ಬಗ್ಗೆಯೂ ಮೋದಿ ಮಾತನಾಡಿದ್ದು, ಕೇರಳದಿಂದ, ಕಾಶ್ಮೀರ, ಬಂಗಾಳದಿಂದ ತ್ರಿಪುರದ ವರೆಗೆ ಬಿಜೆಪಿ ದ್ವೇಷಕ್ಕೆ ಗುರಿಯಾಗಿದೆ. ಬಿಜೆಪಿ ರಾಜಕೀಯ ದೌರ್ಜನ್ಯ, ರಾಜಕೀಯ ಅಸ್ಪೃಷ್ಯತೆಯನ್ನು ಎದುರಿಸುತ್ತಿದೆ. ದ್ವೇಷ ರಾಜಕಾರಣದ ನಡುವೆಯೂ ಎಲ್ಲರ ಜೊತೆ, ಎಲ್ಲರ ವಿಕಾಸ ಬಿಜೆಪಿಯ ಮಂತ್ರವಾಗಿ ಮುಂದುವರೆಯಲಿದೆ, ದೂರದೃಷ್ಟಿ ಹಾಗೂ ಕಠಿಣ ಶ್ರಮಕ್ಕೆ ಗ್ರಹಿಕೆಗಳನ್ನು ಬದಲಾವಣೆ ಮಾಡುವ ಸಾಮರ್ಥ್ಯವಿದೆ ಎಂದು ಮೋದಿ ಹೇಳಿದ್ದಾರೆ.