ಪಾಟ್ನಾ: ಆಸ್ಪತ್ರೆಯಲ್ಲಿ ಡಿಜಿಟಲ್ ಎಕ್ಸ್ ರೇ ಹಾಗೂ ಅಲ್ಟ್ರಾ ಸೌಂಡ್ ಸೌಲಭ್ಯಕ್ಕಾಗಿ ಒತ್ತಾಯಿಸಿ ಪ್ರತಿಭಟನೆ ನಡೆಸುತ್ತಿದ್ದ ಸಾಮಾಜಿಕ ಕಾರ್ಯಕರ್ತರೊಬ್ಬರ ವಿರುದ್ಧ ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಹಾಯಕ ಸಚಿವ ಅಶ್ವಿನಿ ಕುಮಾರ್ ಚೌಬೆ ತಾಳ್ಮೆ ಕಳೆದುಕೊಂಡು, ಆಕ್ರೋಶಗೊಂಡಿರುವ ಘಟನೆ ದಕ್ಷಿಣ ಬಿಹಾರದಲ್ಲಿ ನಡೆದಿದೆ.
ಯುವ ಶಕ್ತಿ ಸಂಸ್ಥಾನ ಸಂಘಟನೆಯಡಿಯಲ್ಲಿ ಆಸ್ಪತ್ರೆಗೆ ಮೂಲ ಸೌಕರ್ಯ ಕಲ್ಪಿಸುವಂತೆ ವಿಕಲಾಂಗ ಚೇತನರರು ಪ್ರತಿಭಟನೆ ನಡೆಸುತ್ತಿದ್ದಾಗ ಈ ಘಟನೆ ನಡೆದಿದೆ.
ಸಾಮಾಜಿಕ ಕಾರ್ಯಕರ್ತ ರಾಮಾಜಿ ಸಿಂಗ್ ನೇತೃತ್ವದಲ್ಲಿ ಪ್ರತಿಭಟನಾಕಾರರು ಕೇಂದ್ರ ಸಚಿವರ ವಿರುದ್ಧ ಘೋಷಣೆ ಕೂಗಿದಾಗ ಅಲ್ಲಿಂದ ತೆರಳುವಂತೆ ಪ್ರತಿಭಟನಾಕಾರರಿಗೆ ಸಚಿವರು ಸೂಚಿಸಿದ್ದಾರೆ. ಆದರೆ, ಪ್ರತಿಭಟನಾಕಾರರು ಇದಕ್ಕೆ ಜಗದೇ ಇದ್ದಾಗ ಅವರು ಹಿಡಿದಿದ್ದ ಭಿತ್ತಿಪತ್ರವೊಂದನ್ನು ಹರಿದು ಹಾಕಿದ್ದಾರೆ ಎಂದು ಪ್ರತ್ಯೇಕ್ಷದರ್ಶಿಗಳು ತಿಳಿಸಿದ್ದಾರೆ.
ಆಸ್ಪತ್ರೆಗೆ ಮೂಲಸೌಕರ್ಯ ಕಲ್ಪಿಸುವಂತೆ ಒತ್ತಾಯಿಸಿದಾಗ ಸಚಿವರು ಸ್ಪಂದಿಸಲಿಲ್ಲ ಎಂದು ಪ್ರತಿಭಟನಾಕಾರರು ಆರೋಪಿಸಿದ್ದಾರೆ. ಈ ಮಧ್ಯೆ ಸಚಿವರ ವರ್ತನೆಯನ್ನು ಪ್ರತಿಪಕ್ಷಗಳು ಖಂಡಿಸಿದ್ದು, ಕೂಡಲೇ ಅಶ್ವಿನಿ ಚೌಬೆ ಕ್ಷಮೆ ಕೋರಬೇಕೆಂದು ಆಗ್ರಹಿಸಿದ್ದಾರೆ.