ಶ್ರೀನಗರ: ಬಂಧನಕ್ಕೊಳಗಾಗಿದ್ದ ನ್ಯಾಷನಲ್ ಕಾನ್ಫರೆನ್ಸ್ (ಎನ್'ಸಿ) ಅಧ್ಯಕ್ಷ ಹಾಗೂ ಜಮ್ಮು ಮತ್ತು ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಫಾರೂಖ್ ಅಬ್ದುಲ್ಲಾ ಅವರ ಸಹೋದರಿ ಹಾಗೂ ಪುತ್ರಿಯನ್ನು ಗುರುವಾರ ಬಿಡುಗಡೆಯಾಗಿದ್ದಾರೆ.
ಜಮ್ಮು ಮತ್ತು ಕಾಶ್ಮೀರಕ್ಕೆ ನೀಡಲಾಗಿದ್ದ ವಿಶೇಷ ಸ್ಥಾನಮಾನವನ್ನು ರದ್ದುಗೊಳಿಸಿರುವ ಕೇಂದ್ರ ಸರ್ಕಾರದ ವಿರುದ್ಧ ಫಾರೂಖ್ ಅವರ ಪುತ್ರಿ ಸುರೈಯ ಹಾಗೂ ಸಫಿಯಾ ಶ್ರೀನಗರದ ಪ್ರತಾಪ್ ಪಾರ್ಕ್ ನಲ್ಲಿ ಪ್ರತಿಭಟನೆಗಿಳಿದಿದ್ದರು. ಈ ವೇಳೆ ಪೊಲೀಸರು ಇಬ್ಬರನ್ನೂ ಬಂಧನಕ್ಕೊಳಪಡಿಸಿ, ಶ್ರೀನಗರ ಕೇಂದ್ರೀಯ ಕಾರಾಗೃಹದಲ್ಲಿರಿಸಿದ್ದರು.
ಸುರೈಯ ಹಾಗೂ ಸಫಿಯಾ ಜೊತೆಗೆ 13 ಮಂದಿ ಮಹಿಳೆಯರನ್ನೂ ಬಂಧನಕ್ಕೊಳಪಡಿಸಿದ್ದರು. ಇದೀಗ ಜಾಮೀನಿನ ಆಧಾರದ ಮೇರೆಗೆ ಸುರೈಯ, ಸಫಿಯಾ ಜೊತೆಗೆ ಬಂಧಿತ 13 ಮಂದಿ ಮಹಿಳೆಯರನ್ನೂ ಪೊಲೀಸರು ಬಿಡುಗಡೆಗೊಳಿಸಿದ್ದಾರೆಂದು ವರದಿಗಳು ತಿಳಿಸಿವೆ.