ದೇಶ

ಧನ್ ತೆರಸ್ ದಿನ ಚಿನ್ನ-ಬೆಳ್ಳಿ ವಸ್ತುಗಳ ಬದಲು ಖಡ್ಗಗಳನ್ನು ಖರೀದಿಸಿ: ಬಿಜೆಪಿ ನಾಯಕ

Shilpa D

ಲಖನೌ: ದೀಪಾವಳಿ ಹಬ್ಬ ಸಮೀಪಿಸುತ್ತಿದೆ. ದೀಪಾವಳಿಗೂ ಮೊದಲು ಆಚರಿಸುವ ಧನತ್ರಯೋದಶಿಯಂದು ಜನರು ಬಂಗಾರ ಖರೀದಿ ಮಾಡುವುದು ಸಂಪ್ರದಾಯ. ಆದರೆ ಈ ಸಲದ ಧನತ್ರಯೋದಶಿಗೆ ಚಿನ್ನದ ಬದಲು ಕಬ್ಬಿಣದ ಕತ್ತಿಗಳನ್ನು ಖರೀದಿಸಿ ಎಂದು ಬಿಜೆಪಿ ಮುಖಂಡ ಗಜರಾಜ್​ ರಾಣಾ ಹಿಂದು ಸಮುದಾಯದ ಜನರಿಗೆ ಕರೆ ಕೊಟ್ಟಿದ್ದಾರೆ.

ಮಾಧ್ಯಮಗಳೊಂದಿಗೆ ಮಾತನಾಡಿದ   
ದಿಯೋಬಂದ್​ನಗರದ ಬಿಜೆಪಿ ಅಧ್ಯಕ್ಷ ಗಜರಾಜ್​ರಾಣಾ ಅಯೋಧ್ಯಾ ರಾಮಮಂದಿರ ನಿರ್ಮಾಣಕ್ಕೆ ಸಂಬಂಧಪಟ್ಟಂತೆ ಶೀಘ್ರದಲ್ಲೇ ಸುಪ್ರೀಂಕೋರ್ಟ್​ ತೀರ್ಪು ಬರಲಿದೆ. ಹಾಗಾಗಿ ಕತ್ತಿಗಳನ್ನು ಖರೀದಿಸಿಟ್ಟುಕೊಂಡರೆ ಉಪಯೋಗಕ್ಕೆ ಬರುತ್ತದೆ ಎಂಬಂತಹ ಪ್ರಚೋದನಕಾರಿ ಹೇಳಿಕೆ ನೀಡಿದ್ದಾರೆ.

ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣವಾಗಬೇಕು ಎಂದು ದೇಶದ ಜನರು ಬಯಸುತ್ತಿದ್ದಾರೆ. ರಾಮಜನ್ಮಭೂಮಿ-ಬಾಬ್ರಿಮಸೀದಿ ಭೂವಿವಾದದ ವಿಚಾರಣೆಯನ್ನು ಸುಪ್ರೀಂಕೋರ್ಟ್​ ಈಗಾಗಲೇ ಅಂತ್ಯಗೊಳಿಸಿದ್ದು ಶೀಘ್ರದಲ್ಲೇ ತೀರ್ಪು ಹೊರಬೀಳಲಿದೆ. 

ತೀರ್ಪು ರಾಮಮಂದಿರ ನಿರ್ಮಾಣದ ಪರವಾಗಿಯೇ ಬರಲಿದೆ ಎಂಬ ಆತ್ಮವಿಶ್ವಾಸ ನಮಗೆ ಇದೆ. ನಮ್ಮ ಪರವಾಗಿ ತೀರ್ಪು ಬಂದರೆ ವಾತಾವರಣ ಕದಡಬಹುದು. ಹಾಗಾಗಿ ಕತ್ತಿಗಳನ್ನು ಸಂಗ್ರಹಿಸಿ ಇಟ್ಟುಕೊಳ್ಳುವುದು ಒಳ್ಳೆಯದು. ಅಂತಹ ಸಮಯ ಬಂದರೆ ಕತ್ತಿಗಳು ನಮ್ಮ ರಕ್ಷಣೆಗೆ ಬರುತ್ತವೆ ಎಂದು ಹೇಳಿದ್ದಾರೆ.

ನಂತರ ಅದಕ್ಕೆ ಸ್ಪಷ್ಟನೆ ನೀಡಿದ ಅವರು, ನಾನು ಯಾವುದೇ ಸಮುದಾಯ, ಧರ್ಮದ ವಿರುದ್ಧವಾಗಿ ಮಾತನಾಡುತ್ತಿಲ್ಲ. ನಮ್ಮ ಸಂಪ್ರದಾಯದಲ್ಲಿ ಆಯುಧಗಳನ್ನೂ ಪೂಜಿಸುತ್ತೇವೆ. ನಮ್ಮ ದೇವಾನುದೇವತೆಗಳೂ ಆಯುಧವನ್ನು ಹಿಡಿದವರೇ ಆಗಿದ್ದಾರೆ. ಹೀಗೆ ನಮ್ಮ ರಕ್ಷಣೆಗಾಗಿ ನಾವು ಸಿದ್ಧರಾಗಿರಬೇಕು ಎಂಬುದಷ್ಟೇ ನನ್ನ ಹೇಳಿಕೆ ಹೊರತು ಬೇರೇನೂ ಇಲ್ಲ ಎಂದಿದ್ದಾರೆ.

ಗಜರಾಜ್​ ರಾಣಾ ಅವರ ಈ ಹೇಳಿಕೆಗೂ ಪಕ್ಷಕ್ಕೂ ಯಾವುದೇ ಸಂಬಂಧವಿಲ್ಲ ಎಂದು ಬಿಜೆಪಿ ವರಿಷ್ಠರು ಸ್ಪಷ್ಟಪಡಿಸಿದ್ದಾರೆ.

SCROLL FOR NEXT