ದೇಶ

1971ರ ಸೋಲನ್ನೂ ಮರೆತು ಬಿಡಬೇಕು, ಅಂತಹ ಏಟು ನೀಡುತ್ತೇವೆ: ಪಾಕ್ ಗೆ ಭಾರತದ ಎಚ್ಚರಿಕೆ

Srinivasamurthy VN

ಅಣ್ವಸ್ತ್ರ ಪ್ರಯೋಗದ ಕುರಿತು ಪದೇ ಪದೇ ಪಾಕಿಸ್ತಾನದ ಹೇಳಿಕೆ, ಲೆಫ್ಟಿನೆಂಟ್ ಜನರಲ್ ಕೆಜೆಎಸ್ ಧಿಲ್ಲೋನ್ ಎಚ್ಚರಿಕೆ

ನವದೆಹಲಿ: ಕಾಶ್ಮೀರ ವಿಚಾರವಾಗಿ ಪದೇ ಪದೇ ಭಾರತವನ್ನು ಕೆಣಕುತ್ತಿರುವ ಪಾಕಿಸ್ತಾನಕ್ಕೆ ಭಾರತೀಯ ಸೇನೆ ಖಡಕ್ ಎಚ್ಚರಿಕೆ ನೀಡಿದ್ದು, 1971ರ ಯುದ್ಧ ಸೋಲನ್ನೂ ಮರೆತು ಬಿಡಬೇಕು, ಅಂತಹ ದೊಡ್ಡ ಏಟು ನೀಡುತ್ತೇವೆ ಎಂದು ಹೇಳಿದೆ.

ಗಡಿಯಲ್ಲಿ ಪದೇ ಪದೇ ಕದನ ವಿರಾಮ ಉಲ್ಲಂಘನೆ ಮಾಡಿ ಪ್ರಚೋದನಾಕಾರಿ ದಾಳಿ ನಡೆಸುವ ಜತೆಗೆ, ಅಣ್ವಸ್ತ್ರ ಪ್ರಯೋಗದ ಕುರಿತು ಪ್ರಸ್ತಾಪಿಸುವ ಮೂಲಕ ಭಾರತವನ್ನು ಕೆಣಕುತ್ತಿರುವ ಪಾಕಿಸ್ತಾನಕ್ಕೆ ಭಾರತೀಯ ಸೇನೆ ಖಡಕ್ ಎಚ್ಚರಿಕೆ ರವಾನಿಸಿದ್ದು, ಜಮ್ಮು ಮತ್ತು ಕಾಶ್ಮೀರದಲ್ಲಿನ ಕೃತ್ಯಗಳನ್ನು ನಿಲ್ಲಿಸದೇ ಹೋದಲ್ಲಿ ಆ ದೇಶವನ್ನೇ ಬಲಿ ಹಾಕುವಂತಹ ಕೆಲಸ ಮಾಡಬೇಕಾಗುತ್ತದೆ ಎಂದು ಸೇನೆ ಎಚ್ಚರಿಕೆ ನೀಡಿದೆ.

ಈ ಕುರಿತಂತೆ ಚಿನಾರ್ ಕಾರ್ಪ್ಸ್ ಕಮಾಂಡರ್ ಲೆಫ್ಟಿನೆಂಟ್ ಜನರಲ್ ಕೆಜೆಎಸ್ ಧಿಲ್ಲೋನ್ ಅವರು ಸುದ್ದಿಗೋಷ್ಠಿಯಲ್ಲಿ ಮಾತನಾಡಿ, 'ಪಾಕಿಸ್ತಾನ 1971ರ ಯುದ್ಧವನ್ನು ಮರೆತಿರುವಂತಿದೆ. ಈ ಯುದ್ಧದಲ್ಲಿ ಪಾಕಿಸ್ತಾನದ ಹಿಡಿತದಿಂದ ಬಾಂಗ್ಲಾದೇಶ ಸ್ವತಂತ್ರಗೊಂಡಿತ್ತು. 93,000ಕ್ಕೂ ಅಧಿಕ ಪಾಕ್ ಸೈನಿಕರು ಭಾರತದ ಸೇನೆಗೆ ಶರಣಾಗಿದ್ದರು. ಈ ಹೊಡೆತ ತಿಂದ ಬಳಿಕವೂ ನೆರೆಯ ದೇಶ ಇನ್ನೂ ಪಾಠ ಕಲಿತಿಲ್ಲ. ಆದರೆ ನಾನು ಒಂದು ಹೇಳುತ್ತೇನೆ. ಪಾಕಿಸ್ತಾನ ತನ್ನ ಕೃತ್ಯ ಮುಂದುವರೆಸಿದರೆ, 1971ರ ಯುದ್ಧ ಸೋಲನ್ನೂ ಮರೆತು ಬಿಡಬೇಕು, ಅಂತಹ ದೊಡ್ಡ ಏಟು ನೀಡುತ್ತೇವೆ ಎಂದು ಹೇಳಿದ್ದಾರೆ.

ಅಂತೆಯೇ 'ಪಾಕಿಸ್ತಾನ ಸೇನೆ, ಪಾಕಿಸ್ತಾನ ಅಥವಾ ಐಎಸ್‌ಐ ತಮ್ಮ ಬಡ ಆರ್ಥಿಕತೆ ಮತ್ತು ಜಾಗತಿಕ ಸಮುದಾಯದಲ್ಲಿನ ಬಡ ರಾಜತಾಂತ್ರಿಕ ಸ್ಥಿತಿ, ತಮ್ಮ ದೇಶದಲ್ಲಿನ ರಾಜಕೀಯ ಅಸ್ಥಿರತೆಯ ಮಧ್ಯೆಯೂ ತಮ್ಮ ಸಾಮರ್ಥ್ಯದಲ್ಲಿ ಜಮ್ಮು ಮತ್ತು ಕಾಶ್ಮೀರದಲ್ಲಿ ಕಿಡಿಗೇಡಿ ಕೃತ್ಯಗಳನ್ನು ನಡೆಸಲು ಪ್ರಯತ್ನಿಸುತ್ತಲೇ ಇದೆ. ಪಾಕಿಸ್ತಾನ ಸೇನೆ ಮತ್ತು ಐಎಸ್‌ಐ ಬೇಕಾದ್ದನ್ನು ಪ್ರಯತ್ನಿಸಲಿ.. ಅದಕ್ಕೆ ತಕ್ಕ ಕಠಿಣ ಪ್ರತಿಕ್ರಿಯೆ ಪಡೆಯುತ್ತಾರೆ. ಅವರು ಮಾತ್ರವಲ್ಲ ಅವರ ನಂತರದ ಪೀಳಿಗೆಗಳೂ ನೆನಪಲ್ಲಿ ಇಟ್ಟುಕೊಳ್ಳುವಂತಹ ಪೆಟ್ಟನ್ನು ತಿನ್ನುತ್ತಾರೆ. ಪಾಕಿಸ್ತಾನ ಸೇನೆಯು 1971ಕ್ಕಿಂತಲೂ ಉತ್ತಮವಾಗಿ, ಬಹುಶಃ ಅವರು ಅರ್ಥ ಮಾಡಿಕೊಳ್ಳದೆಯೇ ಇರುವಂತಹ ಉತ್ತರವನ್ನು ಕಲಿಯುತ್ತದೆ ಎಂದು ಭಾರತೀಯ ಸೇನೆಯ ಪರವಾಗಿ ನಾನು ಖಚಿತಪಡಿಸುತ್ತೇನೆ' ಎಂದು ಹೇಳಿದ್ದಾರೆ.

SCROLL FOR NEXT