ದೇಶ

ಮಹದಾಯಿ ವಿವಾದ: ನ್ಯಾಯಾಲಯದ ಹೊರಗೆ ಇತ್ಯರ್ಥ ಅಸಾಧ್ಯ ಎಂದ ಗೋವಾ ಸಿಎಂ

Raghavendra Adiga

ಪಣಜಿ: ಮಹದಾಯಿ ವಿವಾದದ ಸಂಬಂಧ ಕರ್ನಾಟಕದೊಡನೆ ಯಾವ ಬಗೆಯ ಮಾತುಕತೆ ಸಾಧ್ಯವಿಲ್ಲ, ನ್ಯಾಯಾಲಯದ ಹೊರಗೆ ವಿವಾದ ಇತ್ಯರ್ಥ ಅಸಾಧ್ಯ ಎಂದು ಗೋವಾ ಮುಖ್ಯಮಂತ್ರಿ ಪ್ರಮೋದ್ ಸಾವಂತ್ ಗುರುವಾರ ಸ್ಪಷ್ಟಪಡಿಸಿದ್ದಾರೆ.

ಕರ್ನಾಟಕದ ಬೆಳಗಾವಿಯಲ್ಲಿ ಹುಟ್ಟುವ ಮಹದಾಯಿ ನದಿ (ಗೋವಾದ ಮಾಂಡೋವಿ) ನೀರನ್ನು ಹಂಚಿಕೊಳ್ಳುವ ಬಗ್ಗೆ ಕರ್ನಾಟಕ ಮತ್ತು ಗೋವಾ ನಡುವೆ ತೀವ್ರ ಬಿಕ್ಕಟ್ಟು ಸೃಷ್ಟಿಯಾಗಿದೆ.

ಇದೀಗ ಗೋವಾ ಸಿಎಂ ಸಾವಂತ್ ಮಹದಾಯಿ ನೀರನ್ನು ಕರ್ನಾಟಕದತ್ತ ತಿರುಗಿಸುವುದಕ್ಕೆ ನಮ್ಮ ಸರ್ಕಾರ ಅನುಮತಿಸುವುದಿಲ್ಲ. ಇದಕ್ಕಾಗಿ ಗೋವಾ ಸರ್ಕಾರ ತನ್ನ ನಿಲುವಿಗೆ ಬದ್ದವಾಗಿರಲಿದೆ ಎಂದಿದ್ದಾರೆ. ಅಲ್ಲದೆ ವಿವಾದದ ಕುರಿತಂತೆ "ನ್ಯಾಯಾಲಯದ ಹೊರಗೆ ಇತ್ಯರ್ಥ ಅಥವಾ ಮಾತುಕತೆಗಳ ಬಗ್ಗೆ ಯಾವುದೇ ಪ್ರಸ್ತಾಪಗಳಿಲ್ಲ" ಅವರು ಪಿಟಿಐಗೆ ತಿಳಿಸಿದರು.

ನೀರಿನ ವಿವಾದ ಬಗೆಹರಿಸಲು ಕರ್ನಾಟಕ ಹಾಗೂ ಗೋವಾ ಮುಖ್ಯಮಂತ್ರಿಗಳು ಕುಳಿತು ಮಾತುಕತೆ ನಡೆಸಬೇಕು ಎಂದು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಸೋಮವಾರ ಹೇಳಿದ್ದರು. ಆದರೆ ಗೋವಾ ಕಾಂಗ್ರೆಸ್ ಕರ್ನಾಟಕದೊಡನೆ ಸರ್ಕಾರದ ಮಾತುಕತೆಯನ್ನು ಪ್ರಬಲವಾಗಿ ವಿರೋಧಿಸಿದೆ.

ಗೋವಾ ವಿಧಾನಸಭೆಯಲ್ಲಿ ಪ್ರತಿಪಕ್ಷದ ನಾಯಕ ದಿಗಂಬರ ಕಾಮತ್ ಮಹಾದಾಯಿ ಜಲ ವಿವಾದಗಳ ನ್ಯಾಯಮಂಡಳಿ ತನ್ನ ಆದೇಶವನ್ನು ನೀಡಿರುವುದರಿಂದ, ಯಾವುದೇ ಮಾತುಕತೆಗೆ ಅವಕಾಶವಿಲ್ಲ ಎಂದರು. 

ಕಳೆದ ವರ್ಷ ನ್ಯಾಯಮಂಡಳಿ ತನ್ನ ಆದೇಶವನ್ನು ನೀಡಿತ್ತು, ನಂತರದಲ್ಲಿ ಎರಡೂ ರಾಜ್ಯಗಳು ಸುಪ್ರೀಂ ಕೋರ್ಟ್ ನಲ್ಲಿ ವಿಶೇಷ ಮನವಿ ಅರ್ಜಿಗಳನ್ನು ಸಲ್ಲಿಸಿವೆ.

ನದಿ ನೀರನ್ನು ಹಂಚಿಕೊಳ್ಳುವ ಬಗ್ಗೆ ಗೋವಾ, ಕರ್ನಾಟಕ ಮತ್ತು ಮಹಾರಾಷ್ಟ್ರದ ಮೂರು  ರಾಜ್ಯಗಳ ನಡುವಿನ ವಿವಾದವನ್ನು ಆಲಿಸಿದ ನ್ಯಾಯಮಂಡಳಿ, ಕಳೆದ ವರ್ಷ ಆಗಸ್ಟ್‌ನಲ್ಲಿ ಮಹದಾಯಿ ಜಲಾನಯನ ಪ್ರದೇಶದಿಂದ ಕರ್ನಾಟಕಕ್ಕೆ 13.42 ಟಿಎಂಸಿಯನ್ನು (3.9 ಟಿಎಂಸಿ ಸೇರಿದಂತೆ ಬರಿದಾಗಿರುವ ಮಲಪ್ರಭಾ ನದಿ ಜಲಾನಯನ ಪ್ರದೇಶಕ್ಕೆ ತಿರುಗಿಸಲು) ಹರಿಸುವಂತೆ ನಿರ್ದೇಶಿಸಿದೆ. ಅಲ್ಲದೆ ಮಹಾರಾಷ್ಟ್ರಕ್ಕೆ 1.33 ಟಿಎಂಸಿ ನೀರನ್ನು ಹಂಚಿಕೆ ಮಾಡಿದೆ.

SCROLL FOR NEXT