ದೇಶ

'ಮಿತ್ರ ಧರ್ಮ'ಕ್ಕಾಗಿ ಹಿಂದೂ ಧಾರ್ಮಿಕ ಕ್ರಿಯೆ ನಡೆಸಿದ ಮುಸ್ಲಿಂ ಸಹೋದರರು! 

Srinivas Rao BV

ಅಹ್ಮದಾಬಾದ್: ಮಾನವ ಕುಲಂ ತಾನೊಂದೇ ವಲಂ... ಎಂಬ ಮಾತು ಕೃತಿಯಲ್ಲಿ  ಜಾರಿಯಾಗಿ, ಅದ್ಭುತ ಧಾರ್ಮಿಕ ಸಾಮರಸ್ಯಕ್ಕೆ ಉದಾಹರಣೆಯಾಗಬಲ್ಲ ಘಟನೆ ಗುಜರಾತ್ ನಲ್ಲಿ ನಡೆದಿದೆ.
 
ಗುಜರಾತ್ ನ ಅಮ್ರೇಲಿ ಜಿಲ್ಲೆಯ ಸಾವರ್ಕುಂಡ್ಲ ಟೌನ್ ನಲ್ಲಿದ್ದ ಭಾನುಶಂಕರ್ ಪಾಂಡ್ಯ ಹಾಗೂ ಅಬು, ನಾಸಿರ್ ಹಾಗೂ ಝುಬೇರ್ ಖುರೇಷಿ ಅವರ ತಂದೆ ನಾಲ್ಕು ದಶಕಗಳ ಆಪ್ತ ಸ್ನೇಹಿತರು. ಸೆ.15 ರಂದು ಶನಿವಾರ ಭಾನುಶಂಕರ್ ಪಾಂಡ್ಯ ನಿಧನರಾದಾಗ ಅವರ ಆಪ್ತ ಸ್ನೇಹಿತನ ಮೂವರು ಮಕ್ಕಳು ಎಲ್ಲಾ ಎಲ್ಲೆಗಳನ್ನೂ ಮೀರಿ ನಿಂತು ತಮ್ಮ ಪ್ರೀತಿಯ ಅಂಕಲ್  ಅಂತ್ಯಕ್ರಿಯೆ ನಡೆಸಿದ್ದಾರೆ. 

ಭಾನುಶಂಕರ್ ಪಾಂಡ್ಯ ಸಾವಿನ ಸಮಯದಲ್ಲಿ ಈ ಮೂವರು ಸಹೋದರರು ಜೊತೆಗಿದ್ದು ಪ್ರೀತಿಯ ಅಂಕಲ್ ಗೆ ಗಂಗಾಜಲ ಕುಡಿಸಿದ್ದಾರೆ. ಅಷ್ಟೇ ಅಲ್ಲದೇ ಬ್ರಾಹ್ಮಣ ಸಂಪ್ರದಾಯದಂತೆ ಅಂತ್ಯ ಸಂಸ್ಕಾರ ನಡೆಯಬೇಕೆಂದು ಸ್ಥಳೀಯರು ಹೇಳಿದ್ದನ್ನು ಕೇಳಿ ಏನನ್ನೂ ಯೋಚಿಸದೇ  ಧೋತಿ, ಜನಿವಾರ ಧರಿಸಿ ನೆರವೇರಿಸಿದ್ದಾರೆ.
 
ಹಿಂದೂಗಳಲ್ಲಿ ಉತ್ತರಕ್ರಿಯೆಗಳನ್ನು ನೆರವೇರಿಸುವವರು 12 ನೆಯ ದಿನ ಕೇಶ ಮುಂಡನ ಮಾಡಿಸಿಕೊಳ್ಳಬೇಕೆಂಬ ನಿಯಮವಿದೆ ನಾವು ಆ ನಿಯಮವನ್ನು ಪಾಲಿಸುತ್ತೇವೆ ಎಂದು ನಾಸಿರ್ ಹೇಳಿದ್ದಾರೆ. 

ದಿನಗೂಲಿ ಕೆಲಸ ಮಾಡಿ ಜೀವನ ನಿರ್ವಹಣೆ ಮಾಡುತ್ತಿರುವ ಈ ಮೂವರು ಸಹೋದರರ ತಂದೆ ಭಿಖು ಖುರೇಷಿ ಹಾಗೂ ಭಾನುಶಂಕರ್ ಇಬ್ಬರೂ ಕಾರ್ಮಿಕರಾಗಿ ಕಾರ್ಯನಿರ್ವಹಿಸುತ್ತಿದ್ದರು. ನಾಲ್ಕು ದಶಕಗಳ ಹಿಂದೆ ಇವರಿಬ್ಬರ ಪರಿಚಯವಾಗಿತ್ತು. ಮೂರು ವರ್ಷಗಳ ಹಿಂದೆ ಭಿಖು ಖುರೇಷಿ ಮೃತಪಟ್ಟಿದ್ದರು. 

ಭಾನುಶಂಕರ್ ಗೆ ಕುಟುಂಬ ಇರಲಿಲ್ಲ. ಕಾಲು ಮುರಿದುಕೊಂಡಾಗ ಅವರನ್ನು ನಮ್ಮ ಜೊತೆಯಲ್ಲೇ ಇರುವುದಕ್ಕೆ ತಂದೆ ಹೇಳಿದ್ದರು. ಅಂದಿನಿಂದ ಭಾನುಶಂಕರ್ ನಮ್ಮ ಕುಟುಂಬದ ಒಂದು ಭಾಗವಾದರು. ಪ್ರತಿ ಈದ್ ಹಬ್ಬದ ಸಂದರ್ಭದಲ್ಲೂ ನಮ್ಮ ಮಕ್ಕಳಿಗೆ  ಉಡುಗೊರೆ ತಂದುಕೊಡುವುದನ್ನು ಅವರೆಂದಿಗೂ ಮರೆಯುತ್ತಿರಲಿಲ್ಲ ಎಂದು ನೆಚ್ಚಿನ ಅಂಕಲ್ ನ್ನು ನಾಸಿರ್ ಸ್ಮರಿಸಿದ್ದಾರೆ. ತಂದೆ ಗತಿಸಿದ ನಂತರವೂ ಅವರ ಆಪ್ತ ಸ್ನೇಹಿತನ ಅಂತ್ಯಸಂಸ್ಕಾರ ನೆರವೇರಿಸಿದ ಈ ಸಹೋದರರ ಬಗ್ಗೆ ಮೆಚ್ಚುಗೆ ವ್ಯಕ್ತವಾಗುತ್ತಿದೆ. 

SCROLL FOR NEXT