ದೇಶ

ದೆಹಲಿ ಜಮಾತ್ ಧಾರ್ಮಿಕ ಕಾರ್ಯಕ್ರಮದ ಎಫೆಕ್ಟ್; ಕೇವಲ 24 ಗಂಟೆಗಳಲ್ಲಿ 386 ಕೊರೋನಾ ಸೋಂಕು ಪತ್ತೆ: ಕೇಂದ್ರ ಸರ್ಕಾರ

Srinivasamurthy VN

ನವದೆಹಲಿ: ದೇಶದಲ್ಲಿ ಕೊರೋನಾ ವೈರಸ್ ಸೋಂಕಿತರ ಸಂಖ್ಯೆಯಲ್ಲಿ ಏರಿಕೆಯಾಗುತ್ತಿದ್ದು, ಇದಕ್ಕೆ ಕಳೆದ 24 ಗಂಟೆಯಲ್ಲಿ 386 ಪ್ರಕರಣಗಳು ಪತ್ತೆಯಾಗಿವೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯದ ಜಂಟಿ ಕಾರ್ಯದರ್ಶಿ ಲವ್ ಅಗರ್ವಾಲ್ ಹೇಳಿದ್ದಾರೆ.

ದೈನಂದಿನ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು, ದೆಹಲಿಯ ತಬ್ಲಿಘಿ ಜಮಾತ್ ನಲ್ಲಿ ಪಾಲ್ಗೊಂಡಿದ್ದವರು ದೇಶಾದ್ಯಂತ ಸಂಚರಿಸಿದ್ದು, ಇದರ ಪರಿಣಾಮ ಸೋಂಕು ಹೆಚ್ಚಾಗಿದೆ. ಒಟ್ಟಾರೆ ಸೋಂಕಿತರ ಸಂಖ್ಯೆ 1,637 ಕ್ಕೆ ಏರಿಕೆಯಾಗಿದ್ದು, 38 ಮಂದಿ ಮೃತಪಟ್ಟಿದ್ದಾರೆ.. ಜಮಾತ್ ನಲ್ಲಿ  ಪಾಲ್ಗೊಂಡಿದ್ದವರನ್ನು ಪತ್ತೆ ಮಾಡಿ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದರು. 

ಲಾಕ್ ಡೌನ್ ವಿಚಾರದಲ್ಲಿ ಯಥಾ ಸ್ಥಿತಿ ಕಾಪಾಡಲು ತೀರ್ಮಾನಿಸಲಾಗಿದ್ದು, ಸಾಮಾಜಿಕ ಅಂತರಕ್ಕೆ ಒತ್ತು ನೀಡಲಾಗಿದೆ. ಸಂಪುಟ ಕಾರ್ಯದರ್ಶಿ ಅವರು ಇಂದು ವಿಡಿಯೋ ಸಂವಾದ ನಡೆಸಿದ್ದು, ವಲಸೆ ಕಾರ್ಯಕರ ಹಿತ ರಕ್ಷಣೆ ಮಾಡುವಂತೆ ಎಲ್ಲಾ ರಾಜ್ಯಗಳಿಗೆ ಸೂಚಿಸಿದ್ದಾರೆ. ರೈಲ್ವೆ  ಇಲಾಖೆ ಕೊರೋನಾ ಚಿಕಿತ್ಸೆಗಾಗಿ ಎರಡು ಲಕ್ಷಕ್ಕೂ ಹೆಚ್ಚು ಐಸೋಲೇಷನ್ ಹಾಸಿಗೆಗಳನ್ನು ಸಿದ್ಧಪಡಿಸುವ ಗುರಿ ಹೊಂದಿದ್ದು, ಮೊದಲ ಹಂತದಲ್ಲಿ 20 ಸಾವಿರ ಬೆಡ್ ಗಳು ಸಿದ್ಧವಾಗುತ್ತಿವೆ ಎಂದರು. ಅಂತೆಯೇ ಕೊರೋನಾ ವ್ಯಾಪಿಸಲು ಯಾರು ಕಾರಣ ಎಂದು ಹುಡುಕುತ್ತ ಕೂರಲು ಇದು  ಸೂಕ್ತ ಸಂದರ್ಭ ಅಲ್ಲ ಎಂಬುದನ್ನು ನಾವು ಅರ್ಥ ಮಾಡಿಕೊಳ್ಳಬೇಕು. ನಮ್ಮ ಸಧ್ಯದ ಪ್ರಾಮುಖ್ಯತೆ ಎಲ್ಲೆಲ್ಲಿ ಕೊರೊನಾ ಪಾಸಿಟಿವ್‌ ಪ್ರಕರಣಗಳು ಕಾಣಿಸಿಕೊಳ್ಳುತ್ತವೋ ಅಲ್ಲೆಲ್ಲ ನಮಗೆ ಸಾಧ್ಯವಾದಷ್ಟು ರೀತಿಯಲ್ಲಿ ಕ್ವಾರಂಟೈನ್‌ ಪ್ರಕ್ರಿಯೆ ನಡೆಸಬೇಕಿದೆ ಎಂದು ಹೇಳಿದರು.

ಇನ್ನು ದೆಹಲಿಯ ಯ ನಿಜಾಮುದ್ದೀನ್‌ ಪ್ರದೇಶದ ಅಲಾಮಿ ಮಾರ್ಕಜ್‌ ಮಸೀದಿಯಲ್ಲಿ ನಡೆದ ತಬ್ಲಿಘಿ ಜಮಾತ್‌ ಧಾರ್ಮಿಕ ಸಭೆಯಲ್ಲಿ ಪಾಲ್ಗೊಂಡು ವಾಪಸ್‌ ಆದವರ ಪೈಕಿ ದಿಲ್ಲಿಯಲ್ಲೇ ಕನಿಷ್ಠ 441 ಮಂದಿಗೆ ಕೊರೊನಾ ಸೋಂಕು ತಗುಲಿದೆ. ಈ ಸಮಾವೇಶದಲ್ಲಿ ಪಾಲ್ಗೊಂಡು  ವಾಪಸಾದವರ ಪೈಕಿ ಈಗಾಗಲೇ 10 ಮಂದಿ ಸಾವನ್ನಪ್ಪಿದ್ದಾರೆ. ಸುಮಾರು 1,900 ಮಂದಿ ಸೇರಿದ್ದ ಈ ಸಮಾವೇಶದಲ್ಲಿ ಪಾಲ್ಗೊಂಡಿದ್ದರು. ದೆಹಲಿಯಲ್ಲಿ ಲಾಕ್‌ಡೌನ್‌ ಆದೇಶದ ನಡುವೆಯೂ ಮಸೀದಿಗಳಲ್ಲಿ ನೆಲೆಸಿದ್ದವರ ವಿರುದ್ಧ ಸಿಎಂ ಕೇಜ್ರಿವಾಲ್‌ ಸರ್ಕಾರ ಕಠಿಣ ಕ್ರಮಕ್ಕೆ  ಮುಂದಾಗಿದೆ. ಮಸೀದಿ ಆಡಳಿತ ಮಂಡಳಿ ವಿರುದ್ಧ ಪ್ರಕರಣಗಳನ್ನು ದಾಖಲಿಸಲಾಗಿದ್ದು, ಇಡೀ ಮಸೀದಿಯನ್ನು ಖಾಲಿ ಮಾಡಿಸಿ ಮಸೀದಿಯಲ್ಲಿದ್ದವರೆಲ್ಲರನ್ನೂ ಕ್ವಾರಂಟೈನ್ ಮಾಡಲಾಗಿದೆ. 

ಮಾರ್ಚ್‌ 20ರಂದು, ತೆಲಂಗಾಣದಲ್ಲಿ 10 ಮಂದಿ ಇಂಡೋನೇಷ್ಯಾದ ಪ್ರಜೆಗಳಿಗೆ ಕೊರೊನಾ ವೈರಸ್‌ ಇರುವುದು ದೃಢ ಪಟ್ಟಿತ್ತು. ಅದಾದ ಬಳಿಕವೂ ಸುಮಾರು 1,200 ಮಂದಿ ಮಸೀದಿಯ ಆವರಣದಲ್ಲಿ ನೆಲೆಸಿದ್ದರು. ರಾಷ್ಟ್ರಾದ್ಯಂತ ಲಾಕ್‌ಡೌನ್‌ ಘೋಷಣೆಯಾಗುವ ಎರಡು ದಿನ  ಮೊದಲು ಜಮಾತ್‌ ಆವರಣದಲ್ಲಿ 2,000 ಮಂದಿ ಇದ್ದರು ಎಂದು ಪೊಲೀಸ್‌ ಮೂಲಗಳು ತಿಳಿಸಿವೆ.

SCROLL FOR NEXT