ದೇಶ

'ಸಾಂಕೇತಿಕತೆ ಮುಖ್ಯ, ಆದರೆ ಗಂಭೀರ ಕ್ರಮ ಅತಿ ಮುಖ್ಯ': ಮೋದಿ ವೀಡಿಯೊ ಸಂದೇಶಕ್ಕೆ ಚಿದಂಬರಂ ಟಾಂಗ್

Lingaraj Badiger

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರ ವಿಡಿಯೋ ಸಂದೇಶವನ್ನು ತೀವ್ರವಾಗಿ ಟೀಕಿಸಿರುವ ಹಿರಿಯ ಕಾಂಗ್ರೆಸ್ ನಾಯಕ ಪಿ. ಚಿದಂಬರಂ ಅವರು, "ಸಾಂಕೇತಿಕತೆ" ಮುಖ್ಯ. ಆದರೆ ಆಲೋಚನೆಗಳು ಮತ್ತು ತೆಗೆದುಕೊಳ್ಳಬೇಕಾದ ಕ್ರಮಗಳ ಬಗ್ಗೆ ಗಂಭೀರವಾದ ಚಿಂತನೆಯೂ ಅಷ್ಟೇ ಮುಖ್ಯವಾಗಿದೆ ಎಂದು ತಿರುಗೇಟು ನೀಡಿದ್ದಾರೆ.

ಲಾಕ್ ಡೌನ್ ನಿಂದಾಗಿ ಬಡವರು ಬೀದಿಗೆ ಬಂದಿದ್ದು, ಅವರಿಗೆ ವಿಶೇಷ ಪ್ಯಾಕೇಜ್ ಮತ್ತು ಆರ್ಥಿಕ ಸಂಕಷ್ಟದಿಂದ ಹೊರಬರಲು ತೆಗೆದುಕೊಳ್ಳುತ್ತಿರುವ ಕ್ರಮಗಳನ್ನು ಘೋಷಿಸುತ್ತಾರೆ ಎಂದು ನಿರೀಕ್ಷಿಸಲಾಗಿತ್ತು. ಆದರೆ ಜನರ ಎಲ್ಲಾ ನಿರೀಕ್ಷೆಗಳು ಸುಳ್ಳಾಗಿವೆ ಎಂದು ಚಿದಂಬರಂ ಹೇಳಿದ್ದಾರೆ.

ನಾವು ನಿಮ್ಮ ಮನವಿಯಂತೆ ಏಪ್ರಿಲ್ 5ರಂದು ದೀಪ ಉರಿಸುತ್ತೇವೆ. ಅದಕ್ಕೆ ಪ್ರತಿಯಾಗಿ ನೀವು ನಮ್ಮ ಹಾಗೂ ಈ ದೇಶದ ಸಾಂಕ್ರಾಮಿಕ ರೋಗಶಾಸ್ತ್ರಜ್ಞರ ಮಾತನ್ನೂ ಕೇಳಿ ಎಂದು ಚಿದಂಬರಂ ಅವರು ಪ್ರಧಾನಿ ಮೋದಿಗೆ ಟ್ವೀಟ್ ಮೂಲಕ ಸಲಹೆ ನೀಡಿದ್ದಾರೆ.

ಉದ್ಯಮಿಯಿಂದ ದಿನಗೂಲಿ ಕಾರ್ಮಿಕ ಸೇರಿದಂತೆ ದೇಶದ ಪ್ರತಿಯೊಬ್ಬರು ಆರ್ಥಿಕ ಸಂಕಷ್ಟದಿಂದ ಹೊರಬರುವ ವಿಧಾನ, ಜೀವನವನ್ನು ಸುಲಭವಾಗಿಸುವ ಪರಿಹಾರಗಳ ಬಗ್ಗೆ ಪ್ರಧಾನಿ ಮಾತನಾಡುತ್ತಾರೆ ಎಂದು ನಿರೀಕ್ಷಿಸಲಾಗಿತ್ತು. ಆದರೆ ನಿಮ್ಮ ವಿಡಿಯೋ ಸಂದೇಶ ಎಲ್ಲರಿಗೂ ನಿರಾಶೆ ಮೂಡಿಸಿದೆ ಎಂದಿದ್ದಾರೆ.

ಇಂದು ಬೆಳಗ್ಗೆ ವಿಡಿಯೋ ಸಂದೇಶ ನೀಡಿದ್ದ ಪ್ರಧಾನಿ, ಕೊರೋನಾ ವಿರುದ್ಧದ ಹೋರಾಟವನ್ನು ಏಪ್ರಿಲ್ 5ರಂದು ಮನೆಯ ಲೈಟ್ ಆಫ್ ಮಾಡಿ ದೀಪ, ಕ್ಯಾಂಡಲ್ ಬೆಳಗಿಸುವ ಮೂಲಕ ಒಗ್ಗಟ್ಟು ಪ್ರದರ್ಶಿಸುವಂತೆ ದೇಶದ ಜನತೆಗೆ ಕರೆ ನೀಡಿದ್ದರು.

SCROLL FOR NEXT