ಪಾಟ್ನಾ: ಬಿಹಾರದ ವಿಧಾನಸಭಾ ಚುನಾವಣೆ ಸನ್ನಿಹಿತವಾಗುತ್ತಿದ್ದಂತೆಯೇ ಆರ್ ಜೆಡಿ ಪಕ್ಷದಲ್ಲಿ ಮಹತ್ವದ ಬೆಳವಣಿಗೆ ನಡೆದಿದ್ದು ಪಕ್ಷ ವಿರೋಧಿ ಚಟುವಟಿಕೆಯ ಆರೋಪದಡಿ ಮೂವರು ಶಾಸಕರನ್ನು ಉಚ್ಚಾಟನೆ ಮಾಡಲಾಗಿದೆ.
ಜೆಡಿಯು ಪಕ್ಷದ ನಾಯಕ ಹಾಗೂ ರಾಜ್ಯ ಸಚಿವರೂ ಆಗಿರುವ ಶ್ಯಾಮ್ ರಜಾಕ್ ಜೊತೆಗೆ ಈ ಮೂವರು ಸೇರ್ಪಡೆಯಾಗುವ ಊಹಾಪೋಹಗಳ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ.
ಪತೇಪುರ ಶಾಸಕರಾದ ಪ್ರೇಮಾ ಚೌಧರಿ, ಗೈಘಾಟ್ ನ ಶಾಸಕರಾದ ಮಹೇಶ್ ಯಾದವ್, ದರ್ಭಂಗದ ಶಾಸಕ ಫರಾಜ್ ಫಾತ್ಮಿ ಉಚ್ಚಾಟಿತ ಶಾಸಕರಾಗಿದ್ದಾರೆ.
ಅಕ್ಟೋಬರ್ ನಲ್ಲಿ ನಡೆಯಲಿರುವ ವಿಧಾನಸಭಾ ಚುನಾವಣೆಗೂ ಮುನ್ನ ಈ ಘಟನೆ ನಡೆದಿರುವುದು ಮಹತ್ವ ಪಡೆದುಕೊಂಡಿದೆ.
"ಪಕ್ಷ ವಿರೋಧಿ ಚಟುವಟಿಕೆಗಳಲ್ಲಿ ಭಾಗಿಯಾಗಿರುವ ಶಾಸಕರನ್ನು, ರಾಷ್ಟ್ರೀಯ ಅಧ್ಯಕ್ಷ ಲಾಲು ಪ್ರಸಾದ್ ಯಾದವ್ ಅವರ ಆದೇಶದ ಮೇರೆಗೆ ಉಚ್ಚಾಟನೆ ಮಾಡಲಾಗಿದೆ ಎಂದು ಆರ್ ಜೆಡಿಯ ಪ್ರಧಾನ ಕಾರ್ಯದರ್ಶಿ ಅಲೋಕ್ ಮೆಹ್ತಾ ಹೇಳಿದ್ದಾರೆ.
ಉಚ್ಚಾಟಿತ ಶಾಸಕರು ಸಿಎಂ ನಿತೀಶ್ ಕುಮಾರ್ ನೇತೃತ್ವದ ಸರ್ಕಾರವನ್ನು ಇತ್ತೀಚಿನ ದಿನಗಳಲ್ಲಿ ಹೊಗಳುತ್ತಿದ್ದರು, ಅಷ್ಟೇ ಅಲ್ಲದೇ ಜೆಡಿಯು ಪಕ್ಷ ಸೇರಲು ತಯಾರಿ ನಡೆಸಿದ್ದರು.