ದೇಶ

ಕರ್ನಾಟಕದ ಹೆಮ್ಮೆ: ನೂತನ ಸಂಸತ್ ಭವನ ಶಿಲಾನ್ಯಾಸ, ಭೂಮಿ ಪೂಜೆ ನಡೆದಿದ್ದು ಶೃಂಗೇರಿ ಮಠದ ನೇತೃತ್ವದಲ್ಲಿ!

Srinivas Rao BV

ನವದೆಹಲಿ: ಡಿ.10 ರಂದು ನೂತನ ಸಂಸತ್ ಭವನಕ್ಕಾಗಿ ಶಿಲಾನ್ಯಾಸ, ಭೂಮಿ ಪೂಜೆಯನ್ನು ಪ್ರಧಾನಿ ನರೇಂದ್ರ ಮೋದಿ ಅವರು ನೆರವೇರಿಸಿದ್ದು, ಕರ್ನಾಟಕ ಹೆಮ್ಮೆ ಪಡುವಂತಹ ಅಂಶ ಇದರಲ್ಲಿದೆ. 

ಹೊಸ ಸಂಸತ್ ಭವನಕ್ಕೆ ಭೂಮಿ ಪೂಜೆ ಖಚಿತಗೊಳ್ಳುತ್ತಿದ್ದಂತೆಯೇ ಪ್ರಧಾನಿ ನರೇಂದ್ರ ಮೋದಿ ಅವರು ಇದರ ಸಂಪೂರ್ಣ ಜವಾಬ್ದಾರಿಯನ್ನು ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ್ ಜೋಷಿ ಅವರಿಗೆ ವಹಿಸಿ, ಶಾಸ್ತ್ರೋಕ್ತವಾಗಿ ಪೂಜೆ ನಡೆಯಬೇಕೆಂಬ ಅಭಿಪ್ರಾಯ ವ್ಯಕ್ತಪಡಿಸಿದ್ದರು. ಅದರಂತೆಯೇ ಪ್ರಹ್ಲಾದ್ ಜೋಷಿ ಅವರು ಶೃಂಗೇರಿಯ ಜಗದ್ಗುರುಗಳಾದ ಭಾರತೀ ತೀರ್ಥ ಸ್ವಾಮಿಗಳ ಬಳಿ ಪ್ರಧಾನಿ ಮೋದಿ ಅವರ ಈ ಇಂಗಿತವನ್ನು ಹೇಳಿದ್ದರು. 

ಶೃಂಗೇರಿ ಶ್ರೀಗಳು ಮಠದ ವಿದ್ವಾಂಸರೂ, ಕಿರಿಯ ಶ್ರೀಗಳಾದ ವಿಧುಶೇಖರ ಭಾರತೀ ಶ್ರೀಗಳಿಗೆ ಪೂರ್ವಾಶ್ರಮದಲ್ಲಿ ಗುರುಗಳೂ ಆಗಿದ್ದ ತಂಗಿರಾಲ ಶಿವಕುಮಾರ ಶರ್ಮ ಅವರೊಂದಿಗೆ ಲಕ್ಷ್ಮಿನಾರಾಯಣ ಸೋಮಯಾಜಿ, ಗಣೇಶ ಸೋಮಯಾಜಿ ಹಾಗೂ ನಾಗರಾಜ ಅಡಿಗ ಅವರನ್ನು ಸಂಸತ್ ಭವನದ ಶಿಲಾನ್ಯಾಸ ಕಾರ್ಯಕ್ರಮವನ್ನು ನಡೆಸುವುದಕ್ಕಾಗಿ ದೆಹಲಿಗೆ ಕಳಿಸಿದ್ದರು.

ದೆಹಲಿಯಲ್ಲಿರುವ ಶೃಂಗೇರಿ ಶಾಖಾ ಮಠದ ಇಬ್ಬರು ಪುರೋಹಿತರೊಂದಿಗೆ ಕರ್ನಾಟಕದಿಂದ ತೆರಳಿದ್ದ ವಿದ್ವಾಂಸರು, ಪುರೋಹಿತರ ನೇತೃತ್ವದಲ್ಲಿ ಡಿ.10 ರಂದು ಶಿಲಾನ್ಯಾಸ ನೆರವೇರಿದೆ.

ನೂತನ ಸಂಸತ್ ಭವನಕ್ಕೆ ಶ್ರೀಮಠದಿಂದ ಶಂಕು-ನವರತ್ನ ಪೀಠ: ಸಂಸತ್ ಭವನದ ಶಿಲಾನ್ಯಾಸ ಹಿನ್ನೆಲೆಯಲ್ಲಿ ಶೃಂಗೇರಿ ಶ್ರೀಗಳು ಶಂಕು, ಮಾಣಿಕ್ಯ, ಹವಳ, ಮುತ್ತು, ಪುಷ್ಯರಾಗ ರತ್ನ, ವಜ್ರ, ಗೋಮೇಧಕ, ಪಚ್ಚೆ, ನೀಲಮಣಿಯಿಂದ ತಯಾರಾದ ನವರತ್ನ ಪೀಠವನ್ನು ಕಳಿಸಿಕೊಟ್ಟಿದ್ದು, ಬೆಳ್ಳಿಯ ಇಟ್ಟಿಗೆಯೊಂದಿಗೆ ಇದನ್ನೂ ಇರಿಸಲಾಗಿದೆ.

SCROLL FOR NEXT