ದೇಶ

ವಾರಣಾಸಿಯಲ್ಲಿ ವಿಶ್ವದರ್ಜೆಯ 'ರುದ್ರಾಕ್ಷ' ಸಮಾವೇಶ ಕೇಂದ್ರ ಶೀಘ್ರವೇ ಲೋಕಾರ್ಪಣೆ

Srinivas Rao BV

ವಾರಾಣಸಿ: ಪ್ರಧಾನಿ ನರೇಂದ್ರ ಮೋದಿ ಪ್ರತಿನಿಧಿಸುತ್ತಿರುವ ಲೋಕಸಭಾ ಕ್ಷೇತ್ರ ವಾರಣಾಸಿಯಲ್ಲಿ ವಿಶ್ವದರ್ಜೆಯ ರುದ್ರಾಕ್ಷ ಸಮಾವೇಶ ಕೇಂದ್ರ ಶೀಘ್ರವೇ ಅಸ್ತಿತ್ವಕ್ಕೆ ಬರಲಿದೆ. 

ಪ್ರವಾಸಿಗರು ಈ ಧಾರ್ಮಿಕ ಕೇಂದ್ರದಲ್ಲಿ ಸಂಗೀತ, ನಾಟಕ, ಪ್ರದರ್ಶನಗಳು ಈ ಕೇಂದ್ರದಲ್ಲಿ ನಡೆಯಲಿವೆ. ನಗರಸಭೆ ಆಯುಕ್ತ ಗೌರಂಗ್ ರಾಥಿ ಈ ಬಗ್ಗೆ ಮಾತನಾಡಿದ್ದು, ಈ ರುದ್ರಾಕ್ಷ ಕೇಂದ್ರ ಉಡುಗೊರೆಯನ್ನು ಜಗತ್ತಿನಾದ್ಯಂತ ಜನರು ನೆನಪಿಟ್ಟುಕೊಳ್ಳಲಿದ್ದು ಭಾರತ-ಜಪಾನ್ ನಡುವಿನ ಸ್ನೇಹ ಮತ್ತಷ್ಟು ಗಟ್ಟಿಗೊಳ್ಳಲಿದೆ ಎಂದು ಹೇಳಿದ್ದಾರೆ. 

2015 ರಲ್ಲಿ ಜಪಾನ್ ನ ಅಂದಿನ ಪ್ರಧಾನಿ ಶಿಂಜೋ ಅಬೆ ಜೊತೆಗೆ ನರೇಂದ್ರ ಮೋದಿ ವಾರಾಣಸಿಯ ದೇವಾಲಯಕ್ಕೆ ಭೇಟಿ ನೀಡಿ ಈ ಅದ್ಭುತ, ಬೃಹತ್ ಸಮಾವೇಶ ಕೇಂದ್ರ "ರುದ್ರಾಕ್ಷ"ಕ್ಕೆ ಶಿಲಾನ್ಯಾಸ ನೆರವೇರಿಸಿದ್ದರು. ಈ ಸಮಾವೇಶ ಕೇಂದ್ರ, ಪುರಾತನ ಹಾಗೂ ಅತ್ಯದ್ಭುತವಾದ ಕಾಶಿಯ ನೋಟವನ್ನು ಒದಗಿಸುತ್ತದೆ. ಈ ಸಮಾವೇಶ ಕೇಂದ್ರದಲ್ಲಿ 108 ರುದ್ರಾಕ್ಷಿಗಳನ್ನು ಸ್ಥಾಪಿಸಲಾಗುತ್ತದೆ.

ಸುಮಾರು 3 ಎಕರೆ ಪ್ರದೇಶದಲ್ಲಿ, 186 ಕೋಟಿ ರೂಪಾಯಿ ವೆಚ್ಚದಲ್ಲಿ "ರುದ್ರಾಕ್ಷ" ಸಮಾವೇಶ ಕೇಂದ್ರ ನಿರ್ಮಾಣವಾಗಲಿದ್ದು 1,200 ಮಂದಿ ಕುಳಿತು ಕಾರ್ಯಕ್ರಮಗಳನ್ನು ವೀಕ್ಷಿಸುವ ಸಾಮರ್ಥ್ಯ ಹೊಂದಿರಲಿದೆ. ನೆಲಮಾಳಿಗೆಯಲ್ಲಿ 120 ಕಾರುಗಳ ನಿಲುಗಡೆಗೆ ಆಗುವಷ್ಟು ಸ್ಥಳವನ್ನು ಹೊಂದಿರಲಿದೆ.

ಪ್ರವೇಶ ಹಾಗೂ ನಿರ್ಗಮನದ ಬಾಗಿಲುಗಳ ಬಳಿ ವಿಶೇಷ ಚೇತನರಿಗೆ ಅನುಕೂಲವಾಗುವ 6 ಗಾಲಿ ಕುರ್ಚಿಗಳ ಲಭ್ಯತೆಯೂ ಇರಲಿದ್ದು, ಎರಡು ಕಾನ್ಫರೆನ್ಸ್ ಹಾಲ್, ಅತ್ಯಾಧುನಿಕ ಗ್ರೀನ್ ರೂಮ್, ಗ್ಯಾಲರಿಗಳನ್ನು ಹೊಂದಿರಲಿದೆ.

ಜಪಾನ್ ನ ಸಂಸ್ಥೆ ಫುಜಿತಾ ಕಾರ್ಪೊರೇಷನ್ "ರುದ್ರಾಕ್ಷ" ನಿರ್ಮಾಣದ ಯೋಜನೆಯನ್ನು ನಿರ್ವಹಿಸಲಿದ್ದು, ಜಪಾನ್ ಮೂಲದ ಓರಿಯೆಂಟಲ್ ಕನ್ಸಲ್ಟೆಂಟ್ ಗ್ಲೋಬಲ್ ವಿನ್ಯಾಸಗೊಳಿಸಿದೆ. ಜಪಾನ್ ಗಾರ್ಡಾನ್, 110 ಕಿಲೋ ವ್ಯಾಟ್ ಸಾಮರ್ಥ್ಯದ ಸೋಲಾರ್ ಪವರ್ ಪ್ಲಾಂಟ್, ವಿಐಪಿಗಳಿಗೆ ಪ್ರತ್ಯೇಕ ಪ್ರವೇಶ ದ್ವಾರಗಳನ್ನು ಹೊಂದಿರಲಿದೆ. 2018 ರಲ್ಲಿ ಪ್ರಾರಂಭವಾದ ಕಾಮಗಾರಿ 2021 ಕ್ಕೆ ಪೂರ್ಣಗೊಳ್ಳಲಿದ್ದು, ಮುಂದಿನ ವರ್ಷ ಪ್ರಧಾನಿ ನರೇಂದ್ರ ಮೋದಿ ರುದ್ರಾಕ್ಷ ಲೋಕಾರ್ಪಣೆ ಮಾಡುವ ಸಾಧ್ಯತೆ ಇದೆ.

SCROLL FOR NEXT