ದೇಶ

ವಿವಾದಾತ್ಮಕ ಹೇಳಿಕೆ: ಸೂಪರ್ ಸ್ಟಾರ್ ರಜನಿಕಾಂತ್ ಗೆ ಎರಡನೇ ಬಾರಿಗೆ ಸಮನ್ಸ್!

Nagaraja AB

ತುತುಕೂಡಿ: ಕಳೆದ ಎರಡು ವರ್ಷಗಳ ಹಿಂದೆ ನಡೆದಿದ್ದ ತುತುಕೂಡಿ ಪೊಲೀಸ್ ಫೈರಿಂಗ್ ಘಟನೆ ಬಗ್ಗೆ ವಿಚಾರಣೆ ನಡೆಸುತ್ತಿರುವ ಏಕ ವ್ಯಕ್ತಿ ಆಯೋಗವು, ಬರುವ ಜನವರಿ 19 ರಂದು ವಿಚಾರಣೆಗೆ ಹಾಜರಾಗುವಂತೆ  ಸೂಪರ್ ಸ್ಟಾರ್ ರಜನಿಕಾಂತ್ ಅವರಿಗೆ ಸಮನ್ಸ್ ನೀಡಿದೆ. ವಿಚಾರಣೆಗಾಗಿ ಎರಡನೇ ಬಾರಿಗೆ ರಜನಿಕಾಂತ್ ಅವರಿಗೆ ಆಯೋಗ ಸಮನ್ಸ್ ನೀಡಿದೆ.

 2018 ರ ಮೇ ತಿಂಗಳಲ್ಲಿ ರಜನಿಕಾಂತ್  ಸಂತ್ರಸ್ತರನ್ನು ಭೇಟಿ ಮಾಡಲು ಬಂದಾಗ ಸ್ಟರ್ಲೈಟ್ ವಿರೋಧಿ ಪ್ರತಿಭಟನಾಕಾರರ ಮೇಲೆ ಪೊಲೀಸರು ಗುಂಡು ಹಾರಿಸಿದ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿದ್ದರು. ಸಮಾಜ ವಿರೋಧಿ ಶಕ್ತಿಗಳು ಪ್ರತಿಭಟನೆಯೊಳಗೆ ಸೇರಿಕೊಂಡಿದ್ದಾರೆ ಎಂದು ಅವರು ಹೇಳಿದ್ದರು.

ಈ ವರ್ಷದ ಫೆಬ್ರವರಿಯಲ್ಲಿ ನಿವೃತ್ತ ನ್ಯಾಯಾಧೀಶ ಅರುಣಾ ಜಗದೀಶನ್ ನೇತೃತ್ವದ ಆಯೋಗ, ರಜನಿಕಾಂತ್ ಗೆ ಸಮನ್ಸ್ ನೀಡಿತ್ತು. ಆದರೆ, ತುತುಕೂಡಿಗೆ ಬಂದರೆ ಕಾನೂನು ಮತ್ತು ಸುವ್ಯವಸ್ಥೆಗೆ ತೊಂದರೆಯಾಗಲಿದೆ ಎಂದು ಹೇಳುವ ಮೂಲಕ ರಜನಿಕಾಂತ್ ವಿನಾಯಿತಿ ಬಯಸಿದ್ದರು. ಆದಾಗ್ಯೂ, ಬರುವ ವರ್ಷದ ಜನವರಿ 19 ರಂದು ವಿಚಾರಣೆಗೆ ಹಾಜರಾಗುವಂತೆ ಆಯೋಗ ಸಮನ್ಸ್ ನೀಡಿದೆ. 24 ನೇ ಹಂತದ ವಿಚಾರಣೆಯನ್ನು 2021 ರ ಜನವರಿ 18 ರಿಂದ 22 ರವರೆಗೆ ನಿಗದಿಪಡಿಸಲಾಗಿದೆ.

ರಿಜಿಸ್ಟರ್ ಪೋಸ್ಟ್ ಮೂಲಕ ಸಮನ್ಸ್ ಕಳುಹಿಸಲಾಗಿದೆ ಎಂದು ಆಯೋಗದ ಮೂಲಗಳು ಖಚಿತಪಡಿಸಿವೆ. ಸಾಕ್ಷ್ಯಧಾರದ ಮೇಲೆ ರಜನಿಕಾಂತ್  ಈ ಪ್ರಕರಣವನ್ನು ಇತ್ಯರ್ಥಪಡಿಸಿಕೊಳ್ಳುವ ಸಾಧ್ಯತೆಯಿರುವುದಾಗಿ ಮೂಲಗಳು ಹೇಳಿವೆ.

SCROLL FOR NEXT