ದೇಶ

ಮುಖ್ಯಮಂತ್ರಿಯಾಗಲೇಬೇಕೆಂಬ ಹಠವಿಲ್ಲ: ಕುತೂಹಲ ಕೆರಳಿಸಿದ ನಿತೀಶ್ ಕುಮಾರ್ ಹೇಳಿಕೆ

Manjula VN

ಪಾಟ್ನಾ: ನನಗೆ ಮುಖ್ಯಮಂತ್ರಿ ಆಗಲೇಬೇಕು ಎಂಬ ಹಠವಿಲ್ಲ. ಬಿಜೆಪಿ ತನ್ನದೇ ಅಭ್ಯರ್ಥಿಯನ್ನೂ ಕೂಡ ಮುಖ್ಯಮಂತ್ರಿಯನ್ನಾಗಿ ಮಾಡಬಹುದು ಎಂಬ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರ ಹೇಳಿಕೆ ಕುತೂಹಲ ಕೆರಳಿಸಿದೆ. 

ಅರುಣಾಚಲ ಪ್ರದೇಶದ ತನ್ನ ಆರು ಶಾಸಕರನ್ನು ಆಪೋಷಣ ಪಡೆದಿರುವ ಬಿಜೆಪಿ ವಿರುದ್ಧ ಜೆಡಿಯು ಇದೀಗ ತಿರುಗಿ ಬಿದ್ದಿದೆ. ಬಿಜೆಪಿ ವಿರುದ್ಧ ಜೆಡಿಯು ನಾಯಕರು ಬಹಿರಂಗವಾಗಿಯೇ ಅಸಮಾಧಾನ ಹೊರಹಾಕಲು ಆರಂಭಿಸಿದ್ದಾರೆ.

ಈಗಗಾಲೇ ಬಿಜೆಪಿ ವಿರುದ್ಧ ಲವ್ ಜಿಹಾದ್ ಕುರಿತು ಅಪಸ್ವರ ಎತ್ತಿರುವ ಜೆಡಿಯು, ಬಹಿರಂಗವಾಗಿ ಹೇಳಿಕೆಗಳನ್ನು ನೀಡುವ ಮೂಲಕ ಬಿಜೆಪಿಯ ಒತ್ತಡವನ್ನು ಹೆಚ್ಚಿಸುವ ರಣತಂತ್ರಕ್ಕೆ ಮೊರೆ ಹೋದಂತಿದೆ.

ಇದೀಗ ಖುದ್ದು ನಿತೀಶ್ ಕುಮಾರ್ ಅವರೇ ಅಖಾಡಕ್ಕಿಳಿದಿದ್ದು, ನನಗೆ ಮುಖ್ಯಮಂತ್ರಿಯಾಗಲೇಬೇಕೆಂಬ ಹಠವಿಲ್ಲ. ಬಿಹಾರ ಜನತೆಯ ಜನಾದೇಶಕ್ಕೆ ಅನುಗುಣವಾಗಿ ಯಾರು ಬೇಕಾದರೂ ಮುಖ್ಯಮಂತ್ರಿಯಾಗಬಹುದು. ಬಿಜೆಪಿ ತನ್ನದೇ ಅಭ್ಯರ್ಥಿಯನ್ನು ಕೂಡ ಮುಖ್ಯಮಂತ್ರಿ ಮಾಡಬಹುದು ಎಂದು ತಿಳಿಸಿದ್ದಾರೆ. 

ಬಿಹಾರ ಜನತೆಯ ಜನಾದೇಶಕ್ಕೆ ಅನುಗುಣವಾಗಿ ಸಿಎಂ ಅಭ್ಯರ್ಥಿ ಆಯ್ಕೆಯಾಗಲಿ ಎಂದು ಈ ಹಿಂದೆ ಕೂಡ ಹೇಳಿದ್ದೆ. ಬೇಕಾದರೆ ಬಿಜೆಪಿ ತಮ್ಮದೇ ಅಭ್ಯರ್ಥಿಯನ್ನು ಮುಖ್ಯಮಂತ್ರಿಯನ್ನಾಗಿ ಮಾಡಲಿ. ಇದಕ್ಕೆ ನನ್ನದೇನೂ ಅಭ್ಯಂತರವಿಲ್ಲ ಎಂದು ಮಾರ್ಮಿಕವಾಗಿ ನುಡಿದಿದ್ದಾರೆ. 

ನಾವು ಅಧಿಕಾರಕ್ಕಾಗಿ ಬಿಜೆಪಿ ಜೊತೆ ಮೈತ್ರಿ ಮಾಡಿಕೊಂಡಿಲ್ಲ. ರಾಜ್ಯದ ಜನರ ಸೇವೆಗಾಗಿ ಮೈತ್ರಿ ಮಾಡಿಕೊಂಡಿದ್ದೇವೆ. ಹೀಗಾಗಿ ಯಾವುದೇ ಕ್ಷಣದಲ್ಲಾದರೂ ಮುಖ್ಯಮಂತ್ರಿ ಪದವಿ ಬಿಟ್ಟುಕೊಡಲು ಸಿದ್ಧ ಎಂದು ಸ್ಪಷ್ಟಪಡಿಸಿದ್ದಾರೆ. 

SCROLL FOR NEXT