ದೇಶ

ಪಾಟ್ನಾ: ಕೃಷಿ ಕಾಯ್ದೆ ವಿರೋಧಿ ಪ್ರತಿಭಟನೆ ವೇಳೆ ಲಾಠಿ ಚಾರ್ಜ್, ಹಲವರಿಗೆ ಗಾಯ!

Vishwanath S

ಪಾಟ್ನಾ: ಕೃಷಿ ಕಾಯ್ದೆ ವಿರೋಧಿಸಿ ರಾಜಭವನ ಮುತ್ತಿಗೆ ಹಾಕಲು ತೆರಳುತ್ತಿದ್ದ ಪ್ರತಿಭಟನಾಕಾರರನ್ನು ಪೊಲೀಸರು ಮಾರ್ಗ ಮಧ್ಯೆ ತಡೆದಿದ್ದಾರೆ. ಈ ವೇಳೆ ರಸ್ತೆಗೆ ಅಳವಡಿಸಿದ್ದ ಬ್ಯಾರಿಕೇಡ್ ಗಳನ್ನು ಕಿತ್ತು ಮುನ್ನುಗ್ಗಲು ಪ್ರಯತ್ನಿಸಿದಾಗ ಪೊಲೀಸರು ಲಾಠಿ ಚಾರ್ಜ್ ನಡೆಸಿದ್ದು ಹಲವರು ಗಾಯಗೊಂಡಿದ್ದಾರೆ. 

ವಿವಿಧ ರೈತ ಸಂಘಟನೆಗಳ ಸದಸ್ಯರು ಮತ್ತು ಎಡಪಂಥೀಯ ಪರ ಸಂಘಟನೆಗಳನ್ನು ಒಳಗೊಂಡ ಸಾವಿರಾರು ಪ್ರತಿಭಟನಾಕಾರರನ್ನು ಡಕ್ ಬಂಗಲೆ ಕ್ರಾಸಿಂಗ್‌ನಲ್ಲಿ ಪೊಲೀಸರು ತಡೆಯೊಡ್ಡಿದರು.

ಗಾಂಧಿ ಮೈದಾನದಲ್ಲಿ ರ್ಯಾಲಿ ಆರಂಭಿಸಿದ ಪ್ರತಿಭಟನಾಕಾರರು ಡಾಕ್ ಬಂಗಲೆಯ ಕ್ರಾಸಿಂಗ್ ಬಳಿ ಆಗಮಿಸುತ್ತಿದ್ದಂತೆ ಅಲ್ಲಿ ಬ್ಯಾರಿಕೇಡ್ ಗಳನ್ನು ಹಾಕಿದ್ದ ಪೊಲೀಸರು ಮುಂದೆ ಹೋಗಲು ಅನುಮತಿ ನೀಡಲಿಲ್ಲ. ಈ ವೇಳೆ ಪ್ರತಿಭಟನಾಕಾರರು ಬ್ಯಾರಿಕೇಡ್ ಕಿತ್ತು ಮುನ್ನುಗ್ಗಲು ಮುಂದಾದರೂ ಈ ವೇಳೆ ಪೊಲೀಸರು ಲಾಠಿ ಚಾರ್ಜ್ ಮಾಡಿದರು. 

ರಸ್ತೆ ಮಧ್ಯೆ ನಮ್ಮನ್ನು ತಡೆಯುವುದರ ಜೊತೆ ಲಾಠಿ ಚಾರ್ಜ್ ಮಾಡಿ ತಮ್ಮ ಧ್ವನಿಯನ್ನು ಹತ್ತಿಕ್ಕಲು ಪೊಲೀಸರು ಪ್ರಯತ್ನಿಸುತ್ತಿದ್ದಾರೆ ಎಂದು ಪ್ರತಿಭಟನಾಕಾರರು ಆರೋಪಿಸಿದರು.

ಇನ್ನು ಲಾಠಿ ಚಾರ್ಜ್ ವೇಳೆ ಗಾಯಗೊಂಡಿರುವ ಪ್ರತಿಭಟನಾಕಾರರನ್ನು ಚಿಕಿತ್ಸೆಗಾಗಿ ಸ್ಥಳೀಯ ಆಸ್ಪತ್ರೆಗಳಿಗೆ ದಾಖಲಿಸಲಾಗಿದೆ. ಇನ್ನುಳಿದಂತೆ ಸ್ಥಳದಲ್ಲಿರುವ ಪ್ರತಿಭಟನಾಕಾರರನ್ನು ಸುತ್ತುವರೆಯಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

SCROLL FOR NEXT