ನವದೆಹಲಿ: ಸಂಸತ್ತಿನ ಬಜೆಟ್ ಅಧಿವೇಶನ ಸಂದರ್ಭದಲ್ಲಿ ಮಂಗಳವಾರ ವಿರೋಧ ಪಕ್ಷಗಳು ಪೌರತ್ವ ತಿದ್ದುಪಡಿ ಕಾಯ್ದೆ(ಸಿಎಎ) ಮತ್ತು ರಾಷ್ಟ್ರೀಯ ಜನಸಂಖ್ಯಾ ನೋಂದಣಿ(ಎನ್ ಪಿಆರ್) ಸಂಬಂಧ ಸರ್ಕಾರವನ್ನು ತೀವ್ರ ತರಾಟೆಗೆ ತೆಗೆದುಕೊಳ್ಳಲು ನಿರ್ಧರಿಸಿವೆ.
ಲೋಕಸಭೆಯಲ್ಲಿ ಕಾಂಗ್ರೆಸ್ ನಾಯಕ ಅಧಿರ್ ರಂಜನ್ ಚೌಧರಿ ಮತ್ತು ಕಾಂಗ್ರೆಸ್ ಸಂಸದ ಮಣಿಕ್ಕಮ್ ಠಾಗೋರ್ ಇಂದು ಪೌರತ್ವ ತಿದ್ದುಪಡಿ ಕಾಯ್ದೆಯಿಂದಾಗಿ ದೇಶದಲ್ಲಿ ಭಯ ಮತ್ತು ಬೆದರಿಕೆಯ ವಾತಾವರಣ ಉಂಟಾಗಿದೆ, ಹೀಗಾಗಿ ಈ ವಿಷಯದ ಬಗ್ಗೆ ತುರ್ತು ಚರ್ಚೆಯ ಅವಶ್ಯಕತೆಯಿದೆ ಎಂದು ಹೇಳಿ ನಿಲುವಳಿ ಸೂಚನೆ ಮಂಡಿಸಿದರು.
ಇನ್ನು ಕಾಂಗ್ರೆಸ್ ಸಂಸದರುಗಳಾದ ಗೌರವ್ ಗೊಗೊಯ್, ಕೆ ಸುರೇಶ್, ಅಬ್ದುಲ್ ಖಾಲಿಖ್ ಮತ್ತು ಹಿಬಿ ಎಡೆನ್ ಲೋಕಸಭೆಯಲ್ಲಿ ಬಿಜೆಪಿ ಸಂಸದ ಅನಂತ್ ಕುಮಾರ್ ಹೆಗಡೆಯವರು ಮಹಾತ್ಮಾ ಗಾಂಧಿ ಬಗ್ಗೆ ನೀಡಿರುವ ಹೇಳಿಕೆಗೆ ಸಂಬಂಧಪಟ್ಟಂತೆ ನಿಲುವಳಿ ಸೂಚನೆ ನೊಟೀಸ್ ನೀಡಿದರು.
ಇನ್ನೊಂದೆಡೆ ರಾಜ್ಯಸಭೆಯಲ್ಲಿ ಬಿಜೆಪಿ ಸಂಸದ ಆರ್ ಕೆ ಸಿನ್ಹಾ ಪೌರತ್ವ ತಿದ್ದುಪಡಿ ಕಾಯ್ದೆ ವಿರುದ್ಧ ಪ್ರತಿಭಟನೆ ಹೆಸರಿನಲ್ಲಿ ಸುಳ್ಳು, ಅಪಪ್ರಚಾರ ನಡೆಸಲಾಗುತ್ತಿದೆ ಎಂದು ಶೂನ್ಯ ಅವಧಿಯ ನೊಟೀಸ್ ನೀಡಿದ್ದಾರೆ. ಇನ್ನು ಆಪ್ ಸಂಸದ ಸಂಜಯ್ ಸಿಂಗ್ ರಾಜ್ಯ ಸಭೆಯಲ್ಲಿ ಶೂನ್ಯ ಅವಧಿಯ ನೊಟೀಸ್ ನೀಡಿ ನಿರ್ಭಯಾ ಗ್ಯಾಂಗ್ ರೇಪ್ ಅಪರಾಧಿಗಳಿಗೆ ಗಲ್ಲು ಶಿಕ್ಷೆ ಪ್ರಕ್ರಿಯೆಯನ್ನು ತ್ವರಿತಗೊಳಿಸಬೇಕು ಎಂದು ಒತ್ತಾಯಿಸಿದರು.
ಲೋಕಸಭೆಯಲ್ಲಿ ತೀವ್ರ ಗದ್ದಲ, ಕೋಲಾಹಲ: ಈ ನಡುವೆ ಸಂಸದ ಅನಂತ್ ಕುಮಾರ್ ಹೆಗಡೆಯವರ ಮಹಾತ್ಮಾ ಗಾಂಧಿ ಹೇಳಿಕೆ ಬಗ್ಗೆ ತೀವ್ರ ಗದ್ದಲ, ಕೋಲಾಹಲ ಎದ್ದ ಕಾರಣ ಲೋಕಸಭೆ ಕಲಾಪವನ್ನು ಮಧ್ಯಾಹ್ನ 12 ಗಂಟೆಗೆ ಮುಂದೂಡಲಾಗಿದೆ.
ಕಾಂಗ್ರೆಸ್, ಡಿಎಂಕೆ, ಎನ್ ಸಿಪಿ ಸಂಸದರು ಹೆಗಡೆ ಹೇಳಿಕೆ ಬಗ್ಗೆ ಪ್ರಸ್ತಾಪಿಸಿದಾಗ ಸ್ಪೀಕರ್ ಓಂ ಬಿರ್ಲಾ ಅದಕ್ಕೆ ಅವಕಾಶ ನೀಡಲಿಲ್ಲ.
ಇಂದು ಲೋಕಸಭೆ ಅಧಿವೇಶನ ಆರಂಭವಾಗುತ್ತಿದ್ದಂತೆ ಒಮನ್ ದೊರೆ ಖಬೂಸ್ ಬಿನ್ ಸೈಯದ್ ಆಲ್ ಸೈಯದ್ ಅವರಿಗೆ ಸಂತಾಪ ಸಲ್ಲಿಸಲಾಯಿತು. ಮಾಜಿ ಸದಸ್ಯರಿಗೆ ಸದನದಲ್ಲಿ ಸಂತಾಪ ಸೂಚಿಸಿ ಕಲಾಪ ಆರಂಭವಾಗುತ್ತಿದ್ದಂತೆ ಸಂಸದ ಅನಂತ್ ಕುಮಾರ್ ಹೆಗಡೆ ಮಾತಿಗೆ ತೀವ್ರ ವಿರೋಧ ವ್ಯಕ್ತವಾಯಿತು.
ಬಿಜೆಪಿ ಪಕ್ಷ ಗೋಡ್ಸೆ ಪಕ್ಷ ಎಂದು ಕೆಲ ಕಾಂಗ್ರೆಸ್ ಸಂಸದರು ಇಂದು ಲೋಕಸಭೆಯಲ್ಲಿ ಫಲಕ ಪ್ರದರ್ಶಿಸಿದರು. ಮಹಾತ್ಮಾ ಗಾಂಧಿ ಅಮರ್ ರಹೇ ಎಂದು ಕೂಗಿದರು.