ದೇಶ

ಕನ್ಹಯ್ಯಾ ಕುಮಾರ್ ಬೆಂಗಾವಲು ವಾಹನದ ಮೇಲೆ ಮತ್ತೆ ದಾಳಿ: ಚಾಲಕನಿಗೆ ಗಾಯ

Nagaraja AB

ಬಿಹಾರ: ಸಿಎಎ, ಎನ್ ಪಿಆರ್ ಹಾಗೂ ಎನ್ ಆರ್ ಸಿ ವಿರುದ್ಧ ಬಿಹಾರ ರಾಜ್ಯದಾದ್ಯಂತ ಪ್ರಚಾರದಲ್ಲಿ ತೊಡಗಿರುವ ಸಿಪಿಐ ನಾಯಕ ಕನ್ಹಯ್ಯಾ ಕುಮಾರ್ ಅವರ ಬೆಂಗಾವಲು ವಾಹನದ ಮೇಲೆ ದುಷ್ಕರ್ಮಿಗಳು ಬುಧವಾರ ಸಂಜೆ ದಾಳಿ ನಡೆಸಿದ್ದಾರೆ ಎಂದು ಪೊಲೀಸರು  ತಿಳಿಸಿದ್ದಾರೆ.

ದುಷ್ಕರ್ಮಿಗಳ ಗುಂಪು ಬೆಂಗಾವಲು ವಾಹನದ ಮೇಲೆ ಕಲ್ಲು ತೂರಾಟ ನಡೆಸಿದ್ದು, ಮಾಜಿ ಜೆಎನ್ ಯು ವಿದ್ಯಾರ್ಥಿ ಮುಖಂಡ ಕನ್ಹಯ್ಯಾ ಕುಮಾರ್, ಅದೃಷ್ಟವಶಾತ್ ಪ್ರಾಣಪಾಯದಿಂದ ಪಾರಾಗಿದ್ದಾರೆ. ಆದಾಗ್ಯೂ, ಬೆಂಗಾವಲು ವಾಹನವೊಂದು ಹಾನಿಯಾಗಿದ್ದು, ಅದರ ಕಾರು ಚಾಲಕ ಗಾಯಗೊಂಡಿದ್ದಾನೆ ಎಂದು ವಿಶೇಷ ಕಾರ್ಯ ಪಡೆ ಎಸ್ ಪಿ ಸುದೀರ್ ಕುಮಾರ್ ಪೊಕಿರಾ ಹೇಳಿದ್ದಾರೆ.

ಈ ವಾರದಲ್ಲಿ ಇದು ಎರಡನೇ ಘಟನೆಯಾಗಿದೆ. ಫೆಬ್ರವರಿ 1ರಂದು ಸರನ್ ಜಿಲ್ಲೆಯಲ್ಲಿ ಕನ್ಹಯ್ಯಾ ಕುಮಾರ್  ಬೆಂಗಾವಲು ವಾಹನದ ಮೇಲೆ ದಾಳಿ ನಡೆಸಲಾಗಿತ್ತು .

ಆಡಳಿತ ಹಾಗೂ ಪೊಲೀಸರ ನಿರ್ಲಕ್ಷ್ಯದಿಂದ ಈ ಘಟನೆ ನಡೆದಿದೆ ಎಂದು ಕಾಂಗ್ರೆಸ್ ಶಾಸಕ ಶಕೀಲ್ ಅಹ್ಮದ್ ಖಾನ್ ಆರೋಪಿಸಿದ್ದಾರೆ. ಕನ್ಹಯ್ಯಾ ಕುಮಾರ್ ಪ್ರಚಾರ ಆರಂಭಿಸಿದ ದಿನದಿಂದಲೂ ಅವರೊಂದಿಗೆ ಶಕೀಲ್ ಅಹ್ಮದ್ ಪ್ರಚಾರದಲ್ಲಿ ನಿರತರಾಗಿದ್ದಾರೆ. 

SCROLL FOR NEXT