ದೇಶ

40 ಯೋಧರ ಬಲಿ ಪಡೆದಿದ್ದ ಪುಲ್ವಾಮ ದಾಳಿಗೆ ವರ್ಷ: ಹುತಾತ್ಮ ವೀರ ಯೋಧರಿಗೆ ದೇಶ ನಮನ 

Manjula VN

ನವದೆಹಲಿ: 40 ಮಂದಿ ಯೋಧರನ್ನು ಬಲಿ ಪಡೆದ ಜಮ್ಮು ಮತ್ತು ಕಾಶ್ಮೀರದ ಪುಲ್ವಾಮ ಉಗ್ರರ ದಾಳಿಗೆ ಶುಕ್ರವಾರ ಒಂದು ವರ್ಷ ತುಂಬಿದ್ದು, ಈ ಹಿನ್ನೆಲೆಯಲ್ಲಿ ದೇಶದ ಜನತೆ ವೀರ ಯೋಧರಿಗೆ ನಮನ ಸಲ್ಲಿಸಿದೆ. 

ದಾಳಿಗೆ ಒಂದು ವರ್ಷ ತುಂಬಿರುವ ಹಿನ್ನೆಲೆಯಲ್ಲಿ ಇಂದು ವಿವಿಧೆಡೆ ಹಲವು ಕಾರ್ಯಕ್ರಮಗಳನ್ನೂ ಹಮ್ಮಿಕೊಳ್ಳಲಾಗಿದೆ. ಶ್ರೀನಗರದಲ್ಲಿರುವ ಸ್ಮಾರಕದಲ್ಲಿ ಯೋಧರಿಗೆ ಸಿಆರ್'ಪಿಎಫ್ ಶ್ರದ್ಧಾಂಜಲಿ ಸಲ್ಲಿಸಲಿದೆ. ಪುಲ್ವಾಮಾದ ಲೆತ್ ಪೋರಾದಲ್ಲಿರುವ ಸಿಆರ್'ಪಿಎಪ್ ತರಬೇತಿ ಕೇಂದ್ರದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಹಿರಿಯ ಅಧಿಕಾರಿಗಳು ಮತ್ತು ಸೇನಾ ಸಿಬ್ಬಂದಿ ಹುತಾತ್ಮ ಯೋಧರನ್ನು ಸ್ಮರಿಸಲಿದ್ದಾರೆ. 

2019 ಫೆ.14 ರಂದು ಪುಲ್ವಾಮಾ ಜಿಲ್ಲೆಯ ಜಮ್ಮು ಮತ್ತು ಕಾಶ್ಮೀರ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಿಆರ್'ಪಿಎಫ್ ಸಿಬ್ಬಂದಿನ್ನು ಸಾಗಿಸುತ್ತಿದ್ದ ವಾಹನವನ್ನು ಗುರಿಯಾಗಿರಿಸಿ ಆತ್ಮಾಹುತಿ ಬಾಂಬರ್ ಇದ್ದ ವಾಹನವನ್ನು ಡಿಕ್ಕಿ ಹೊಡೆಸಿ ಸ್ಫೋಟ ನಡೆಸಲಾಗಿತ್ತು. 

ಪಾಕಿಸ್ತಾನ ಮೂಲಕ ಜೈಷ್-ಇ-ಮೊಹಮ್ಮದ್ ಉಗ್ರ ಸಂಘಟನೆ ಈ ದಾಳಿಯಲ್ಲಿ ಭಾಗಿಯಾಗಿತ್ತು. 1989ರ ಬಳಿಕ ಭದ್ರತಾ ಪಡೆಗಳ ಮೇಲೆ ನಡೆದ ಅತೀ ದೊಡ್ಡ ದಾಳಿ ಇದಾಗಿತ್ತು. ಈ ದಾಳಿಗೆ ದೇಶದೆಲ್ಲೆಡೆ ವ್ಯಾಪಕ ಆಕ್ರೋಶ ವ್ಯಕ್ತವಾಗಿತ್ತು. ಈ ದಾಳಿಯಲ್ಲಿ ಹುತಾತ್ಮರಾದವರ ಪೈಕಿ ಕರ್ನಾಟಕ ಯೋಧ ಹೆಚ್.ಗುರು ಕೂಡ ಒಬ್ಬರಾಗಿದ್ದಾರೆ. 

ಇನ್ನು ದಾಳಿಯಲ್ಲಿ ಹುತಾತ್ಮರಾದ 40 ಯೋಧರ ಸ್ಮರಣಾರ್ಥ ಲಾತ್ ಪೋರ ಸೇನಾ ಶಿಬಿರದಲ್ಲಿ ನಿರ್ಮಿಸಿರುವ ಸ್ಮಾರಕ ಶುಕ್ರವಾರ ಉದ್ಘಾಟನೆಗೊಳ್ಳಲಿದ್ದು, ಈ ಸ್ಮಾರಕಕ್ಕಾಗಿ ಹುತಾತ್ಮರಾದ ಯೋಧರ ಮನೆಯಿಂದ ಮಣ್ಣನ್ನು ಸಂಗ್ರಹಿಸಿ ಸ್ಮಾರಕವನ್ನು ನಿರ್ಮಾಣ ಮಾಡಲಾಗಿದೆ. ಎಲ್ಲಾ 40 ಮಂದಿ ಯೋಧರ ಹೆಸರು ಮತ್ತು ಭಾವಚಿತ್ರವನ್ನು ಸ್ಮಾರಕ ಒಳಗೊಂಡಿದೆ. 

SCROLL FOR NEXT