ದೇಶ

ಚೆನ್ನೈ: ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ ಮುಂದುವರೆದ ಅಹೋರಾತ್ರಿ ಪ್ರತಿಭಟನೆ 

Nagaraja AB

ಚೆನ್ನೈ:  ಪೌರತ್ವ ತಿದ್ದುಪಡಿ ಕಾಯ್ದೆ , ರಾಷ್ಟ್ರೀಯ ಜನಸಂಖ್ಯಾ ನೋಂದಣಿ ವಿರೋಧಿಸಿ ಇಲ್ಲಿನ ವಾಷರ್ ಮ್ಯಾನ್ ಪೇಟೆಯ ಮಂಡಿ ಸ್ಟ್ರೀಟ್ ನಲ್ಲಿ ಪ್ರತಿಭಟನೆ ನಡೆಸುತ್ತಿದ್ದವರ ಮೇಲೆ ಪೊಲೀಸರು ಕಳೆದ ರಾತ್ರಿ ಲಾಠಿ ಚಾರ್ಜ್ ನಡೆಸಿದ ಬಳಿಕವೂ ಸುಮಾರು 200 ಜನರು ಅಹೋರಾತ್ರಿ ಪ್ರತಿಭಟನೆಯನ್ನು ಮುಂದುವರೆಸಿದ್ದಾರೆ.

ಮೊದಲಿಗೆ ವಾಷರ್ ಮ್ಯಾನ್ ಪೇಟೆಯ ಮುಖ್ಯ ರಸ್ತೆಯಲ್ಲಿ ಪ್ರತಿಭಟನೆ ನಡೆಸುತ್ತಿದ್ದ ಪ್ರತಿಭಟನಾಕಾರರನ್ನು ಮನವೊಲಿಸಿದ ಹಿರಿಯ ಪೊಲೀಸ್  ಅಧಿಕಾರಿಗಳು, ಮಂಡಿ ಸ್ಟ್ರೀಟ್ ನಲ್ಲಿ ಪ್ರತಿಭಟನೆ ನಡೆಸಲು ಒಪ್ಪಿಕೊಂಡಿದ್ದಾರೆ.

ಲಾಠಿ ಚಾರ್ಜ್ ಬೆದರಿಕೆಯ ನಡುವೆಯೂ ಕಣ್ಣನ್ ರೌಂಡ್‌ಟಾನಾ ಬಳಿ  ಪ್ರತಿಭಟನೆ ನಡೆಸಲು ಮುಂದಾದ ಕೆಲ ಪ್ರತಿಭಟನಾಕಾರರನ್ನು ಪೊಲೀಸರು ಶುಕ್ರವಾರ ಬಂಧಿಸಿದ್ದರು. ಈ ಸುದ್ದಿ ಹರಡಿ ನೂರಾರು ಪ್ರತಿಭಟನಾಕಾರರು, ಇದೇ ಕಾರಣವನ್ನು ಇಟ್ಟುಕೊಂಡು ಹಳೆಯ ವಾಷರ್ ಮ್ಯಾನ್ ಪೇಟೆಯ ಪೆನ್ಸಿಲ್ ಕಾರ್ಖಾನೆ ಬಳಿ ಪ್ರತಿಭಟನೆ ನಡೆಸಿದರು.

ಸಿಎಎ, ಎನ್ ಆರ್ ಸಿ ಮತ್ತು ಎನ್ ಪಿಆರ್ ಜಾರಿ ವಿರುದ್ಧ ಮಹಿಳೆಯರು, ಮಕ್ಕಳು ಸೇರಿದಂತೆ ನೂರಾರು ಪ್ರತಿಭಟನಾಕಾರರು ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. 

ಶುಕ್ರವಾರ ಪೊಲೀಸರ ಕ್ರೌರ್ಯದಿಂದ ತೊಂದರೆಗೊಳಗಾದವರಿಗೆ ನ್ಯಾಯ ದೊರಕಿಸಿಕೊಡಬೇಕೆಂದು ಪ್ರತಿಭಟನಾಕಾರರು ಆಗ್ರಹಿಸಿದರು. ಪ್ರತಿಭಟನೆ ಶಾಂತಯುತವಾಗಿ ನಡೆಯುತಿತ್ತು. ಆದರೆ, ಪೊಲೀಸರು ಕ್ರೌರ್ಯ ಪ್ರದರ್ಶಿಸಿದ್ದಾರೆ.  ಸುಮಾರು 50 ಮಂದಿ ಗಾಯಗೊಂಡಿದ್ದು, ಅವರಿಗಾಗಿ ನ್ಯಾಯ ಕೇಳುತ್ತಿರುವುದಾಗಿ ಪ್ರತಿಭಟನಾಕಾರ ಸೆಂದ್ ಅಸೀಫ್ ಬೇಗಂ ಹೇಳಿದರು. 

ಸುಮಾರು 100 ಕ್ಕೂ ಹೆಚ್ಚು ಮಂದಿಯನ್ನು ಬಂಧಿಸಲಾಗಿತ್ತು. ನಗರ ಪೊಲೀಸ್ ಆಯುಕ್ತ ಎಕೆ ವಿಶ್ವನಾಥನ್  ಸ್ಥಳಕ್ಕೆ ಭೇಟಿ ನೀಡಿ ಮಾತುಕತೆ ನಡೆಸಿದ ಬಳಿಕ  ಬಂಧಿಸಲಾಗಿದ್ದವರನ್ನು ಬಿಡುಗಡೆ ಮಾಡಲಾಗಿದ್ದು, ಪ್ರತಿಭಟನಾಕಾರರು ತಮ್ಮ ಪ್ರತಿಭಟನೆಯನ್ನು ಹಿಂಪಡೆದಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ. 

ಪ್ರತಿಭಟನೆಯ ಸುದ್ದಿ ಸಾಮಾಜಿಕ ಜಾಲತಾಣಗಳಲ್ಲಿ ಕಾಡ್ಗಿಚ್ಚಿನಂತೆ ಹಬ್ಬಿ ರಾಜ್ಯದ ವಿವಿಧ ಕಡೆಗಳಲ್ಲಿ  ಅಪಾರ ಪ್ರಮಾಣದ ಜನರು ಪ್ರತಿಭಟನೆಯನ್ನು ಆರಂಭಿಸುತ್ತಿದ್ದಾರೆ.

SCROLL FOR NEXT