ಬೆಂಗಳೂರು: ವಿಶ್ವದ ಶ್ರೀಮಂತ ದೇವರು ಎಂಬ ಕೀರ್ತಿಗೆ ಭಾಜನವಾಗಿರುವ ತಿರುಪತಿ ವೆಂಕಟೇಶ್ವರ ಸ್ವಾಮಿಗೆ ಐಟಿ ಕಂಪನಿ ಮಾಲೀಕರೊಬ್ಬರು ಬರೊಬ್ಬರಿ 1 ಕೋಟಿ ರೂ ಕಾಣಿಕೆ ನೀಡಿ ಸುದ್ದಿಯಾಗಿದ್ದಾರೆ.
ನಿನ್ನೆಯಷ್ಟೇ ವೈಕುಂಠ ಏಕಾದಶಿ ನೆರವೇರಿದ್ದು, ಇದರ ನಡುವೆಯೇ ಬೆಂಗಳೂರು ಮೂಲಕ ಐಟಿ ಕಂಪನಿ ಮಾಲೀಕರೊಬ್ಬರು ತಿಮ್ಮಪ್ಪನ ದೇಗುಲಕ್ಕೆ ಬರೊಬ್ಬರಿ 1 ಕೋಟಿ ರೂ ಕಾಣಿಕೆ ನೀಡಿದ್ದಾರೆ. ಬೆಂಗಳೂರು ಮೂಲದ ಐಟಿ ಕಂಪನಿ ಮಾಲೀಕ ಅಮರನಾಥ್ ಚೌದರಿ ಎಂಬುವವರು ಈ ದೇಣಿಗೆ ನೀಡಿದ್ದು, ತಿರುಪತಿಯ ಶ್ರೀ ವೆಂಕಟೇಶ್ವರ ಗೋ ಸಂರಕ್ಷಣೆ ಬಳಕೆಗೆ ಈ ನಿಧಿಯನ್ನು ಬಳಸಿಕೊಳ್ಳಿ ಎಂದು ಡಿಡಿ ಮೂಲಕ ಹಣ ಸಂದಾಯ ಮಾಡಿದ್ದಾರೆ ಎನ್ನಲಾಗಿದೆ.
ಈ ಕುರಿತಂತೆ ಟಿಟಿಡಿ ಎವಿ ಧರ್ಮ ರೆಡ್ಡಿ ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ ಎಂದು ಪಿಟಿಐ ವರದಿ ಮಾಡಿದೆ. ವರದಿಯಲ್ಲಿರುವಂತೆ ಕಳೆದ ಒಂಬತ್ತು ವರ್ಷದ ಹಿಂದೆ ಸಂಕಷ್ಟದಲ್ಲಿದ್ದ ತಮ್ಮ ಸಾಫ್ಟ್ವೇರ್ ಕಂಪನಿ ಚೆನ್ನಾಗಿ ಅಭಿವೃದ್ಧಿ ಹೊಂದಿ, ಲಾಭಗಳಿಸಿದರೆ ಕಾಣಿಕೆ ನೀಡುವುದಾಗಿ ಚೌದರಿ ಹರಕೆ ಹೊತ್ತಿದ್ದರಂತೆ. ಈ ಇಷ್ಟಾರ್ಥ ಈಡೇರಿಕೆಗಾಗಿ ಈಗ ದೇಣಿಗೆ ನೀಡಿರುವುದಾಗಿ ಅವರು ತಿಳಿಸಿದ್ದಾರೆ.
ಇನ್ನು ಹಣ ಸಂದಾಯ ಮಾಡಿರುವ ಅಮರನಾಥ್, ಈ ಹಣವನ್ನು ದೇವಾಲಯದ ಆಡಳಿತದ ಹೈನುಗಾರಿಕೆಗೆ ಬಳಕೆ ಮಾಡುವಂತೆ ಮನವಿ ಮಾಡಿದ್ದಾರೆ. ವೆಂಕಟೇಶ್ವರ ಗೋ ಸಂರಕ್ಷಣೆ ನಡೆಸುತ್ತಿರುವ ಟಿಟಿಡಿ, ಇಲ್ಲಿನ ಹಸುವಿನ ಹಾಲಿನ ಉತ್ಪನ್ನಗಳನ್ನು ದೇವರ ಅಭಿಷೇಕ, ಪೂಜೆ –ಪುನಸ್ಕಾರಗಳಿಗೆ ಬಳಕೆ ಮಾಡುತ್ತದೆ.
ವಿಶ್ವದ ಶ್ರೀಮಂತ ದೇವರು ಎಂಬ ಕೀರ್ತಿ ಪಡೆದಿರುವ ತಿಮ್ಮಪ್ಪನಿಗೆ ನಿತ್ಯ ಲಕ್ಷಾಂತರ ಭಕ್ತರು ಕಾಣಿಕೆ ನೀಡುತ್ತಾರೆ. ಈ ಹಿಂದೆ ಕರ್ನಾಟಕದ ಮಾಜಿ ಸಚಿವ ಜನಾರ್ದನ ರೆಡ್ಡಿ ಕುಟುಂಬ ತಿಮ್ಮಪ್ಪನಿಗೆ 30 ಕೆಜಿ ತೂಕದ 45 ಕೋಟಿ ಮೌಲ್ಯದ ವಜ್ರ ಖಚಿತ ಕಿರೀಟ ಸಮರ್ಪಿಸಿ ಸುದ್ದಿಯಾಗಿತ್ತು.